ಕಾಲಿವುಡ್ ನ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ನಟಿ ನಯನತಾರಾ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದರೂ ಮದುವೆಯನ್ನು ಮುಂದೂಡತ್ತಲೇ ಬಂದಿದ್ದರು. ಆದರೆ ಈಗ ತಂದೆಯ ಅನಾರೋಗ್ಯ ಹಾಗೂ ಅವರ ಆಸೆಯ ಕಾರಣಕ್ಕೆ ಶೀಘ್ರವೇ ಮದುವೆಯಾಗೋ ಸಿದ್ಧತೆಯಲ್ಲಿದ್ದಾರೆ ನಯನತಾರಾ.

ನಯನತಾರಾ ತಂದೆ ಹಾಗೂ ನಿವೃತ್ತ ಏರಪೋರ್ಸ್ ಅಧಿಕಾರಿ ಕುರ್ಯನ್ ಕೊಡಿಯಟ್ಟುಗೆ ಮಗಳ ಮದುವೆಯದ್ದೇ ಚಿಂತೆ ಎನ್ನಲಾಗಿದ್ದು, ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ ಕುರ್ಯನ್ ಮಗಳ ಮದುವೆಯನ್ನೇ ಕನವರಿಸುತ್ತಿದ್ದಾರಂತೆ.

ಕುರ್ಯನ್ ಅವರನ್ನು ಕೊಚ್ಚಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಅವರ ಆರೋಗ್ಯ ಕ್ಷೀಣಿಸುತ್ತಲೇ ಇರೋದರಿಂದ ತಂದೆಯ ಆಸೆ ಈಡೇರಿಸೋಕೆ ನಯನತಾರಾ ಕಲ್ಯಾಣಕ್ಕೆ ಸಿದ್ಧವಾಗಿದ್ದಾರಂತೆ.

ನಯನತಾರಾ ಹಾಗೂ ವಿಘ್ನೇಶಶಿವನ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಮದುವೆಗೆ ಹಣ ಕೂಡಿಡುತ್ತಿದ್ದೇವೆ ಎಂದು ಜೋಡಿ ಹಲವು ಭಾರಿ ಹೇಳಿಕೊಂಡಿತ್ತು.

ಈಗ ನಯನತಾರಾ ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ ಕೊಚ್ಚಿಗೆ ಆಗಮಿಸಿದ್ದು, ತಂದೆಯ ಆಸೆಯಂತೆ ಸರಳವಾಗಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಸಪ್ತಪದಿ ತುಳಿಯಲಿದ್ದಾರೆ ಎನ್ನಲಾಗುತ್ತಿದೆ.

ಸದ್ಯ ನಯನತಾರಾ ಮತ್ತು ವಿಘ್ನೇಶ್ ಶಿವನ್ , ಕಾಥುವಾಕುಲ್ ರೆಂಡು ಕಾದಲ್ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದು, ಈ ಚಿತ್ರಕ್ಕೆ ವಿಘ್ನೇಶ್ ಶಿವನ್ ನಿರ್ದೇಶನವಿದೆ. ಈ ಚಿತ್ರದಲ್ಲಿ ನಯನತಾರಾ ಜೋಡಿಗೆ ಸಮಂತಾ ಅಕ್ಕಿನೇನಿ, ವಿಜಯ್ ಸೇತುಪತಿ ಸಾಥ್ ನೀಡಿದ್ದಾರೆ.