ಬೆಂಗಳೂರು : ರಾಜ್ಯದಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆ ಹಂತವಾಗಿ ಆರಂಭಗೊಳ್ಳುತ್ತಿದೆ. ಕೊರೊನಾ ಸೋಂಕು ಕಡಿಮೆಯಾದ ಬೆನ್ನಲ್ಲೇ ರಾಜ್ಯದಲ್ಲಿ ಶನಿವಾರ ಹಾಗೂ ಭಾನುವಾರವೂ ತರಗತಿಗಳನ್ನು ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದರು. ಆದ್ರಿದು ಶಿಕ್ಷಕರ ಸಮುದಾಯದವರ ಆಕ್ರೋಶಕ್ಕೆ ಕಾರಣವಾಗಿತ್ತು. ಶಿಕ್ಷಕರ ವಿರೋಧದ ಬೆನ್ನಲ್ಲೇ ಶಿಕ್ಷಣ ಸಚಿವರು ಸಂಡೇ ನೋ ಕ್ಲಾಸ್ ಎಂದಿದ್ದಾರೆ.
ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಮಾಸಾಂತ್ಯದ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳಲಿದೆ. ಅದ್ರಲ್ಲೂ 1ರಿಂದ 5ನೇ ತರಗತಿಗಳನ್ನು ಆರಂಭಿಸಲು ಈಗಾಗಲೇ ಸರಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಇನ್ನು ನವೆಂಬರ್ ಆರಂಭದಿಂದಲೇ ಪೂರ್ಣ ಪ್ರಮಾಣದಲ್ಲಿ ಆರಂಭಿಸಲಾಗುವುದು ಎಂದು ಶಿಕ್ಷಣ ಸಚಿವರು ಘೋಷಣೆ ಮಾಡಿದ್ದಾರೆ. ಪ್ರೌಢ ಹಾಗೂ ಪದವಿ ಪೂರ್ವ ತರಗತಿಗಳು ಈಗಾಗಲೇ ಆರಂಭಗೊಂಡಿದ್ದು, ತರಗತಿಗಳು ಎಂದಿನಂತೆ ನಡೆಯುತ್ತಿದೆ. ಈ ಬಾರಿ ಪಠ್ಯ ಕಡಿತ ಮಾಡುವುದಿಲ್ಲ ಬದಲಾಗಿ ಶನಿವಾರ ಹಾಗೂ ಭಾನುವಾರ ತರಗತಿಗಳನ್ನು ನಡೆಸಿ ಪಠ್ಯ ಪೂರ್ಣಗೊಳಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದರು.

ಕೊರೊನಾ ವೈರಸ್ ಸೋಂಕು ಆರಂಭವಾದ ದಿನದಿಂದಲೂ ರಾಜ್ಯದಲ್ಲಿನ ಶಿಕ್ಷಕ ಸುಮುದಾಯ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಅನ್ನೋ ಕಾರಣಕ್ಕೆ ಪ್ರಾಣದ ಹಂಗು ತೊರೆದು ತಮ್ಮನ್ನು ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಶಾಲಾರಂಭಗೊಂಡ ಬೆನ್ನಲ್ಲೇ ವಿದ್ಯಾರ್ಥಿಗಳಿಗಾಗಿ ಆನ್ಲೈನ್ ಹಾಗೂ ಆಫ್ಲೈನ್ ಶಿಕ್ಷಣವನ್ನು ನೀಡುತ್ತಿದ್ದಾರೆ. ಕೊರೊನಾ ಸಂಕಷ್ಟದ ಕಾಲದಲ್ಲಿ ವಿದ್ಯಾಗಮ ಯೋಜನೆಯ ಮೂಲಕ ಮಕ್ಕಳ ಮನೆಗೆ ತೆರಳಿ ಪಾಠ ಬೋಧನೆಯನ್ನು ಮಾಡಿದ್ದಾರೆ. ವಠಾರ ಶಾಲೆಯ ಮೂಲಕವೂ ಶೈಕ್ಷಣಿಕ ಚಟುವಟಿಕೆ ಸರಾಗವಾಗಿ ನಡೆಯುವಂತೆ ನೋಡಿಕೊಂಡಿದ್ದಾರೆ. ಇಷ್ಟೇ ಅಲ್ಲಾ ಕೋವಿಡ್ ವಾರಿಯರ್ಸ್ ಆಗಿ ಕೋವಿಡ್ ಕರ್ತವ್ಯ, ಹೆಲ್ತ್ ವಾಚ್, ಚೆಕ್ಪೋಸ್ಟ್ ಡ್ಯೂಟಿ, ಕ್ವಾರಂಟೈನ್ ಕಾರ್ಯ ಸೇರಿದಂತೆ ಹಲವು ರೀತಿಯಲ್ಲಿ ಹೋರಾಟವನ್ನು ನಡೆಸಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗೆ ರಜೆ ನೀಡಿದ್ದರೂ ಕೂಡ ಶಿಕ್ಷಕರು ಮಾತ್ರ ರಜೆ ಇಲ್ಲದೇ ಕೊರೊನಾ ಕಾರ್ಯ ನಡೆಸಿದ್ದಾರೆ. ಇದೀಗ ಶನಿವಾರ ಹಾಗೂ ಭಾನುವಾರ ತರಗತಿ ಮಾಡುವುದರಿಂದ ನಿರಂತರವಾಗಿ ಕೆಲಸದಲ್ಲಿ ತೊಡಗಿರುವ ಶಿಕ್ಷಕರಿಗೆ ಹೊರೆಯಾಗಲಿದೆ, ಅಲ್ಲದೇ ವಾರವಿಡೀ ತರಗತಿ ನಡೆಸಿದ್ರೆ ಮಕ್ಕಳ ಮಾನಸಿಕ ಹಿತದೃಷ್ಟಿಯಿಂದಲೂ ಒಳಿತಲ್ಲ. ಹೀಗಾಗಿ ಭಾನುವಾರ ತರಗತಿ ನಡೆಸಬೇಡಿ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶಿಕ್ಷಣ ಸಚಿವರಿಗೆ ಮನವಿಯನ್ನು ಮಾಡಿಕೊಂಡಿತ್ತು.

ಇದರ ಬೆನ್ನಲ್ಲೇ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಭಾನುವಾರ ತರಗತಿಗಳನ್ನು ನಡೆಸದೇ ಇರಲು ತೀರ್ಮಾನಿಸಿದ್ದಾರೆ. ಆದರೆ ಈ ಬಾರಿ ಪಠ್ಯ ಕಡಿತವನ್ನು ಮಾಡುವುದಿಲ್ಲ. ಹೀಗಾಗಿ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರು ಎಲ್ಲಾ ಪಾಠಗಳನ್ನು ಬೋಧನೆ ಮಾಡಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಶಿಕ್ಷಕರಿಗೆ ಬಿಗ್ ಶಾಕ್ ಕೊಟ್ಟ ರಾಜ್ಯ ಸರಕಾರ
ಇದನ್ನೂ ಓದಿ : 1 to 5 Class ಅ.25 ರಿಂದ ಆರಂಭ : ರಾಜ್ಯ ಸರಕಾರದ ಅಧಿಕೃತ ಆದೇಶ
(Teachers’ opposition to Sunday school: Education minister called Sunday no class )