ಪರ ವಿರೋಧ ಹಾಗೂ ಗಲಾಟೆಗಳ ನಡುವೆ ಕೊನೆಗೂ ನಾದಬ್ರಹ್ಮ ಹಂಸಲೇಖ (Hamsalekaha Case) ತಾವಾಡಿದ ಮಾತಿನ ಕಾರಣಕ್ಕೆ ದಾಖಲಾದ ಪ್ರಕರಣದಲ್ಲಿ ಪೊಲೀಸರ ಮುಂದೇ ವಿಚಾರಣೆಗೆ ಹಾಜರಾಗಿದ್ದಾರೆ. ಹಂಸಲೇಖ ಬೆಂಬಲಕ್ಕೆ ನಟ ಚೇತನ್ ಬಂದಿದ್ದು ಹಿಂದುಪರ ಸಂಘಟನೆಗಳ ವಿರೋಧಕ್ಕೆ ಕಾರಣವಾಗಿದೆ. ಮೈಸೂರಿನ ಕಾರ್ಯಕ್ರಮ ವೊಂದರಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಹಂಸಲೇಖ, ಪೇಜಾವರ ಶ್ರೀಗಳ ಕುರಿತು ಲಘುವಾಗಿ ಮಾತನಾಡಿ ವಿವಾದ ಸೃಷ್ಟಿಸಿದ್ದರು.
ಇದೇ ಕಾರಣಕ್ಕೆ ನಾದಬ್ರಹ್ಮ ಹಂಸಲೇಖ ವಿರುದ್ಧ ಬೆಂಗಳೂರಿನ ಬಸವನಗುಡಿ,ಹನುಮಂತನಗರ ಹಾಗೂ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಹಂಸಲೇಖಾಗೆ ನೊಟೀಸ್ ಜಾರಿ ಮಾಡಿದ್ದರು. ಆದರೆ ಅನಾರೋಗ್ಯದ ಕಾರಣವೊಡ್ಡಿ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೋರಿದ್ದ ಹಂಸಲೇಖ, ವಕೀಲರ ಮೂಲಕ ನವೆಂಬರ್ 25 ರಂದು ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದರು.
ಪೊಲೀಸರಿಗೆ ಕೊಟ್ಟ ಮಾತಿನಂತೆ ಹಂಸಲೇಖ ವಿಚಾರಣೆಗೆ ಹಾಜರಾಗಿದ್ದಾರೆ. ಆದರೆ ಆರಂಭದಿಂದಲೂ ಎಡಪಂಥೀಯ ವಿಚಾರಧಾರೆಗಳಿಂದ ಗುರುತಿಸಿಕೊಂಡಿರೋ ನಟ ಚೇತನ್ ಹಂಸಲೇಖಗೆ ಬೆಂಬಲ ನೀಡಿದ್ದು ಹಿಂದೂ ಪರ ಸಂಘಟನೆಗಳನ್ನು ಕೆರಳಿಸಿತ್ತು. ಬಸವನಗುಡಿ ಪೊಲೀಸ್ ಠಾಣೆಯ ಎದುರು ಸೇರಿದ್ದ ಪ್ರತಿಭಟನಾಕಾರರು ಹಂಸಲೇಖ ಬಹಿರಂಗವಾಗಿ ಕ್ಷಮೆಕೋರಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದರು. ಚೇತನ್ ಮತ್ತು ಹಂಸಲೇಖ ಬೆಂಬಲಿಗರು ಹಾಗೂ ಭಜರಂಗ ದಳದ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ವಿದೇಶದ ಬೆಕ್ಕಿಗೆ ದಿಕ್ಕಾರ ಎಂದು ನಟ ಚೇತನ್ ವಿರುದ್ಧ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಎರಡು ಬಣದವರನ್ನು ಪೊಲೀಸ್ ಠಾಣೆಯಿಂದ ದೂರ ಕಳುಹಿಸಿದ್ದಾರೆ.
ಹಂಸಲೇಖ ತಮ್ಮ ವಕೀಲರಾದ ದ್ವಾರಕಾನಾಥ್ ಜೊತೆ ವಿಚಾರಣೆಗೆ ಆಗಮಿಸಿ ಎರಡು ಗಂಟೆಗಳ ಕಾಲ ವಿಚಾರಣೆ ಎದುರಿಸಿದರು. ಬಸವನಗುಡಿ ಮಹಿಳಾ ಪೊಲೀಸ್ ಠಾಣೆ ಯಲ್ಲಿ ಹಂಸಲೇಖ ಅವರನ್ನು ತನಿಖಾಧಿಕಾರಿಗಳು ಒಟ್ಟು ೨೯ ಪ್ರಶ್ನೆ ಕೇಳಿ ಉತ್ತರ ಪಡೆದುಕೊಂಡರು ಎನ್ನಲಾಗಿದೆ. ವಿಚಾರಣೆ ಬಳಿಕ ಹಂಸಲೇಖ ಮಾಧ್ಯಮಗಳಿಗೆ ಉತ್ತರಿಸದೇ ತೆರಳಿದ್ದಾರೆ. ಬಳಿಕ ಅವರ ಪರ ವಕೀಲ ದ್ವಾರಕಾನಾಥ ಮಾಹಿತಿ ನೀಡಿದ್ದು, ಪೊಲೀಸರ ಎದುರು ಹಂಸಲೇಖ ಹಾಜರಾಗಿದ್ದಾರೆ. ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಆದರೆ ಅಲ್ಲಿ ಏನೆಲ್ಲ ವಿಚಾರ ಕೇಳಿದ್ರು ಅನ್ನೋದನ್ನು ಇಲ್ಲಿ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದರು.
ಇನ್ನು ವಿಚಾರಣೆ ಬಗ್ಗೆ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ವಿಚಾರಣೆ ಮುಗಿಗಿದೆ. ಅಗತ್ಯ ಮಾಹಿತಿ ಪಡೆಯಲಾಗಿದೆ. ಇದನ್ನು ನಾವು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ ಎಂದಿದ್ದಾರೆ. ಒಟ್ಟಿನಲ್ಲಿ ಕನ್ನಡಿಗರಿಗೆ ತಮ್ಮ ಸಂಗೀತದ ಮೂಲಕ ಆಪ್ತವಾಗಿದ್ದ ಹಂಸಲೇಖ ಇದಕ್ಕಿದ್ದಂತೆ ವಿವಾದದ ಮೂಲಕ ಚರ್ಚೆಗೆ ಗ್ರಾಸವಾಗಿದ್ದು ಪ್ರಕರಣ ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ಮೌನ ಮುರಿದ ಹಂಸಲೇಖ : ವದಂತಿಗಳಿಗೆ ಪತ್ರ ಮುಖೇನ ಕೊಟ್ಟರು ಉತ್ತರ
ಇದನ್ನೂ ಓದಿ : ಪೇಜಾವರ ಶ್ರೀಗಳನ್ನು ಹಿಯಾಳಿಸಿದ ಹಂಸಲೇಖ : ಎರಡೆರಡು ಬಾರಿ ಕ್ಷಮೆಕೋರಿದ ನಾದಬ್ರಹ್ಮ
(Humiliation of Pajavara Swamiji, music director Hamsalekaha arrives at the police station)