ಮುಂಬೈ: (Suryakumar Yadav to play Ranji Trophy)ಜಗತ್ತಿನ ನಂ.1 ಟಿ20 ಬ್ಯಾಟ್ಸ್’ಮನ್, ಭಾರತ ಟಿ20 ತಂಡದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ರಣಜಿ ಟ್ರೋಫಿ (Ranji Trophy) ಟೂರ್ನಿಯಲ್ಲಿ ಆಡಲು ಸಜ್ಜಾಗಿದ್ದಾರೆ.ಸದ್ಯ ಟೀಮ್ ಇಂಡಿಯಾ ಬಾಂಗ್ಲಾದೇಶ ಪ್ರವಾಸದಲ್ಲಿದ್ದು, ಆತಿಥೇಯರ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನಾಡುತ್ತಿದೆ. ಏಕದಿನ ಸರಣಿ ಮುಗಿದ ಬೆನ್ನಲ್ಲೇ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು ಎದುರಿಸಲಿದೆ. ಈ ಎರಡೂ ಸರಣಿಗಳಿಲ್ಲಿ ಭಾರತ ತಂಡದಲ್ಲಿ ಸೂರ್ಯಕುಮಾರ್ ಯಾದವ್’ಗೆ ಸ್ಥಾನ ಸಿಕ್ಕಿಲ್ಲ. ಹೀಗಾಗಿ ದೇಶೀಯ ಕ್ರಿಕೆಟ್’ಗೆ ವಾಪಸ್ಸಾಗಲು ಸೂರ್ಯಕುಮಾರ್ ಯಾದವ್ ನಿರ್ಧರಿಸಿದ್ದಾರೆ.
(Suryakumar Yadav to play Ranji Trophy)ನ್ಯೂಜಿಲೆಂಡ್ ಪ್ರವಾಸದ ನಂತರ ಭಾರತ ತಂಡದಿಂದ ಹೊರಗುಳಿದಿರುವ ಸೂರ್ಯಕುಮಾರ್, ಪ್ರಸಕ್ತ ಸಾಲಿನ ರಣಜಿ ಟೂರ್ನಿಯ 2ನೇ ಪಂದ್ಯದಿಂದ ಮುಂಬೈ ಪರ ಆಡಲಿದ್ದಾರೆ. ಡಿಸೆಂಬರ್ 20ರಂದು ಮುಂಬೈನಲ್ಲಿ ಆರಂಭವಾಗಲಿರುವ ಪಂದ್ಯದಲ್ಲಿ ಮುಂಬೈ ತಂಡ ಹೈದರಾಬಾದ್ ತಂಡವನ್ನು ಎದುರಿಸಲಿದ್ದು, ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಆಡಲಿದ್ದಾರೆ. ಮುಂಬೈ ತಂಡದ ಅಭಿಯಾನ ಡಿಸೆಂಬರ್ 13ರಿಂದ ವಿಜಯನಗರಂನಲ್ಲಿ ಆರಂಭವಾಗುವ ಆಂಧ್ರಪ್ರದೇಶ ವಿರುದ್ಧದ ಪಂದ್ಯದೊಂದಿಗೆ ಆರಂಭವಾಗಲಿದೆ. ರಣಜಿ ಟ್ರೋಫಿಯಲ್ಲಿ ಮುಂಬೈ ತಂಡವನ್ನು ಅನುಭವಿ ಬ್ಯಾಟ್ಸ್’ಮನ್ ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ.
32 ವರ್ಷದ ಸೂರ್ಯಕುಮಾರ್ ಯಾದವ್ ಮುಂಬೈ ಪರ ಇದುವರೆಗೆ 77 ಪ್ರಥಮದರ್ಜೆ ಪಂದ್ಯಗಳನ್ನಾಡಿದ್ದು, 44ರ ಸರಾಸರಿಯಲ್ಲಿ 14 ಶತಕ ಮತ್ತು 26 ಅರ್ಧಶತಕಗಳ ಸಹಿತ 5326 ರನ್ ಕಲೆ ಹಾಕಿದ್ದಾರೆ.ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಸೂರ್ಯಕುಮಾರ್ ಯಾದವ್ 42 ಟಿ20 ಪಂದ್ಯಗಳನ್ನಾಡಿದ್ದು 44ರ ಸರಾಸರಿಯಲ್ಲಿ 2 ಶತಕ ಹಾಗೂ 12 ಅರ್ಧಶತಕಗಳ ಸಹಿತ 1408 ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್ ಪ್ರವಾಸದ ಟಿ20 ಸರಣಿಯ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ್ದ ಸೂರ್ಯ, ಏಕದಿನ ಸರಣಿಯಲ್ಲಿ ವಿಫಲರಾಗಿದ್ದರು.
ರಣಜಿ ಟ್ರೋಫಿ ಟೂರ್ನಿಗೆ ಮುಂಬೈ ತಂಡ:
ಅಜಿಂಕ್ಯ ರಹಾನೆ (ನಾಯಕ), ಪೃಥ್ವಿ ಶಾ, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ಅರ್ಮಾನ್ ಜಾಫರ್, ಸರ್ಫರಾಜ್ ಖಾನ್, ಸುವೇದ್ ಪಾರ್ಕರ್, ಹಾರ್ದಿಕ್ ಥಾಮೋರ್, ಪ್ರಸಾದ್ ಪವಾರ್, ಶಮ್ಸ್ ಮುಲಾನಿ, ತನುಶ್ ಕೋಟ್ಯಾನ್, ತುಷಾರ್ ದೇಶಪಾಂಡೆ, ಮೋಹಿತ್ ಅವಸ್ಥಿ, ಸಿದ್ಧಾರ್ಥ್ ರಾವತ್, ರಾಯ್’ಸ್ಟನ್ ಡಯಾಸ್, ಸುರ್ಯಾನ್ಶ್ ಶೆಡ್ಗೆ, ಶಶಾಂಕ್ ಅಥರ್ಧೆ, ಮುಶೀರ್ ಖಾನ್.
Suryakumar Yadav to play Ranji Trophy Suryakumar Yadav has decided to return to domestic cricket will play for Mumbai in Ranji Trophy