ಉಡುಪಿ : ಕರಾವಳಿ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯ ಕೊರತೆ (Lack of rain) ಎದುರಾಗಿದೆ. ಕಣ್ಮರೆಯಾಗಿರುವ ಮಳೆಯಿಂದಾಗಿ ಕರಾವಳಿ ಜಿಲ್ಲೆಗಳಲ್ಲಿ ಭತ್ತದ ಬೆಳೆ (Rice crop) ನಾಶವಾಗುವ ಭೀತಿ ಎದುರಾಗಿದೆ. ಫಲವತ್ತಾಗಿರುವ ಭತ್ತದ ಗದ್ದೆಯಲ್ಲಿ ಮಳೆಯ ಕೊರತೆಯಿಂದ ಭೂಮಿ ಬಿರುಕುಬಿಟ್ಟಿದ್ದು, ಅನ್ನದಾತರು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಭತ್ತದ ನಾಶದ ಭೀತಿಯಲ್ಲಿ ಕಂಗೆಟ್ಟಿರುವ ರೈತರು ತಜ್ಞರು ನೀಡುವ ವೈಜ್ಞಾನಿಕ ಸಲಹೆಗಳನ್ನು ಅನುಸರಿಸಿ ಬೆಳೆಯನ್ನು ಉಳಿಸಿಕೊಳ್ಳಬಹುದಾಗಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರು ವ್ಯಾಪ್ತಿಯ ರೈತರಿಂದ ಭತ್ತದ ಸಸಿಗಳ ಒಣಗುವಿಕೆಯ ಕುರಿತು ಸಮಸ್ಯೆ ವರದಿಯಾದ ಹಿನ್ನೆಲೆ, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆಯ ಸಿಬ್ಬಂದಿಗಳು ಜಂಟಿಯಾಗಿ ಕ್ಷೇತ್ರ ಭೇಟಿಯನ್ನು ಕೈಗೊಂಡಿದ್ದು, ಈ ಸಂದರ್ಭದಲ್ಲಿ ತಡವಾಗಿ ಪ್ರಾರಂಭವಾದ ಮಳೆ ಹಾಗೂ ಆಗಸ್ಟ್ ತಿಂಗಳಿನಲ್ಲಿ ಮಳೆಯಾಗದೇ ಇರುವುದರಿಂದ ಪ್ರಮುಖವಾಗಿ ಭತ್ತದ ಬೆಳೆ ಸೋತು ಸೊರಗುತ್ತಿರುತ್ತದೆ. ಗದ್ದೆಗಳಲ್ಲಿ ನೀರಿಲ್ಲದ ಕಾರಣ ಕಳೆಗಳು ಹಾಗೂ ನೀರಿನ ಸಮಸ್ಯೆಯಿಂದಾಗಿ ಮೇಲು ಗೊಬ್ಬರ ಕೊಡಲು ಸಾಧ್ಯವಾಗದೇ ಇದ್ದುದರಿಂದ ಪೋಷಕಾಂಶಗಳ ಕೊರತೆ ಕಾಣುತ್ತಿದೆ.

ಮುಖ್ಯವಾಗಿ ಪೋಟಾಷ್ ಕೊರತೆಯಿಂದಾಗಿ ಭತ್ತದ ಎಲೆಗಳು ಕೆಂಪು ಬಣ್ಣಕ್ಕೆ ತಿರುಗಿ ಹೆಚ್ಚು ತೆಂಡೆಗಳು ಒಡೆಯದೇ ಒಣಗುವ ಸ್ಥಿತಿಯಲ್ಲಿರುತ್ತದೆ. ಹಡಿಲು ಭೂಮಿಯಲ್ಲಿರುವ ಸಹ್ಯಾದ್ರಿ ಬ್ರಹ್ಮ ತಳಿಯಲ್ಲಿ ಭತ್ತದ ಎಲೆಗಳು ಕೆಂಪಾಗುತ್ತಿರುವುದು ಹೆಚ್ಚಾಗಿ ಕಂಡು ಬಂದಿದ್ದು, ಯಾವುದೇ ಕೀಟ ರೋಗದ ಭಾದೆ ಇರುವುದಿಲ್ಲ ಎಂಬ ಅಂಶಗಳನ್ನು ಗಮನಿಸಲಾಗಿರುತ್ತದೆ.
ಇದನ್ನೂ ಓದಿ : ಉಡುಪಿ ಜಿಲ್ಲೆಯಾದ್ಯಂತ ಸೆಪ್ಟಂಬರ್ 5, 6 ರಂದು ವಿದ್ಯುತ್ ವ್ಯತ್ಯಯ
ಈ ಹಿನ್ನೆಲೆಯಲ್ಲಿ, ನೀರೊದಗಿಸುವ ಸಾಧ್ಯತೆಯಿರುವ ಕಡೆ ಮಳೆಗಾಗಿ ಕಾಯದೇ ಕೂಡಲೇ ನೀರು ಒದಗಿಸುವುದು, ಭೂಮಿಯ ಫಲವತ್ತತೆ ಪರೀಕ್ಷೆ ಪ್ರತಿ ಮೂರು ವರ್ಷಕ್ಕೊಮ್ಮೆಯಾದರು ಮಾಡಿಸುವುದು, ನೀರು ಒದಗಿಸಿದ ಗದ್ದೆಗಳಿಗೆ ಯುರಿಯಾ 30 ಕೆ.ಜಿ ಹಾಗೂ ಎಂ.ಒ.ಪಿ 15 ಕಿ.ಗ್ರಾಂ ಪ್ರತಿ ಎಕರೆಗೆ ಮೇಲು ಗೊಬ್ಬರವಾಗಿ ನೀಡುವುದು ಹಾಗೂ ಗದ್ದೆಗಳಲ್ಲಿ ಕಳೆ ನಿಯಂತ್ರಣ ಮಾಡುವ ಮೂಲಕ ವೈಜ್ಷಾನಿಕ ಸಲಹೆಗಳನ್ನು ಅನುಸರಿಸುವಂತೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಮೀನುಗಾರಿಕಾ ದೋಣಿ ಮಾಲೀಕರ ಗಮನಕ್ಕೆ : ಸೆಪ್ಟೆಂಬರ್ 4, 5 ರಂದು ದೋಣಿಗಳ ಪರಿಶೀಲನೆ
ಕರಾವಳಿ ಭಾಗದಲ್ಲಿ ಹಲವು ವರ್ಷಗಳ ನಂತರ ಮಳೆಯ ಕೊರತೆ ಎದುರಾಗಿದೆ. ನಿತ್ಯವೂ ಅನ್ನದಾತರು ಆಗಸದತ್ತ ಮುಖ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಜೂನ್, ಜುಲೈ ತಿಂಗಳಿನಲ್ಲಿ ಸುರಿದ ಮಳೆಯಿಂದಾಗಿ ಬಂಪರ್ ಲಾಭದ ನಿರೀಕ್ಷೆಯಲ್ಲಿದ್ದ ಅನ್ನದಾತರು ಇದೀಗ ಮಳೆಯಿಲ್ಲದೇ ಕಂಗಾಲಾಗಿದ್ದಾರೆ. ಮಳೆ ಕಣ್ಣಾಮುಚ್ಚಾಲೆಯಾಟ ಮುಂದುವರಿದ್ರೆ ಕೃಷಿಯ ಜೊತೆಗೆ ಕರಾವಳಿ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗುವ ಸಾಧ್ಯತೆಯಿದೆ.
Udupi: Here is the scientific advice of scientists for the paddy crop which is drying up due to lack of rain