ಭಾನುವಾರ, ಏಪ್ರಿಲ್ 27, 2025
HomeBreakingಡಿಕೆಶಿಗೆ ಕೈತಪ್ಪಿದ ಕೆಪಿಸಿಸಿ ಪಟ್ಟ !

ಡಿಕೆಶಿಗೆ ಕೈತಪ್ಪಿದ ಕೆಪಿಸಿಸಿ ಪಟ್ಟ !

- Advertisement -

ನವದೆಹಲಿ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಫೈಟ್ ಜೋರಾಗಿದೆ. ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅಧ್ಯಕ್ಷ ಸ್ಥಾನಕ್ಕೇರುವುದು ಬಹುತೇಕ ಪಕ್ಕಾ ಆಗಿತ್ತು. ಆದ್ರೆ ಸಿದ್ದರಾಮಯ್ಯ ಉರುಳಿಸಿದ ದಾಳದಿಂದ ಇದೀಗ ಡಿ.ಕೆ.ಶಿವಕುಮಾರ್ ಗೆ ಕೆಪಿಸಿಸಿ ಪಟ್ಟ ಕೈತಪ್ಪೋ ಸಾಧ್ಯತೆಯಿದೆ.

ಹೌದು, ರಾಜ್ಯದಲ್ಲಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿರೋ ಕೆಪಿಸಿಸಿಗೆ ಹೊಸ ಚೈತನ್ಯ ನೀಡೋ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿಗೆ ಹೊಸ ಸಾರಥಿಯನ್ನು ತರಲು ಮುಂದಾಗಿತ್ತು. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೆಸರು ಬಲವಾಗಿಯೇ ಕೆಳಿಬಂದಿತ್ತು. ಆದರೆ ಡಿ.ಕೆ.ಶಿವಕುಮಾರ್ ಅಧ್ಯಕ್ಷಗಾದಿಗೇರುವುದು ಮಾಜಿ ಸಿಎಂ ಸಿದ್ದರಾಮಯ್ಯಗೆ ಸುತಾರಾಂ ಇಷ್ಟವಿಲ್ಲ. ಹೀಗಾಗಿ ಸಿದ್ದರಾಮಯ್ಯ ಹೇಗಾದ್ರೂ ಮಾಡಿ ಡಿಕೆಶಿಗೆ ಕೆಪಿಸಿಸಿ ಪಟ್ಟ ಕೈತಪ್ಪಿಸೋ ಸಲುವಾಗಿಯೇ ಉರುಳಿಸಿದ್ದ ಲಿಂಗಾಯಿತ ದಾಳ ಇದೀಗ ಫಲಕೊಡುತ್ತಿದೆ. ಮಾತ್ರವಲ್ಲ ಕಾಂಗ್ರೆಸ್ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆಗೆ ಪಟ್ಟಕಟ್ಟುವ ಪ್ಲಾನ್ ಕೂಡ ಸಕ್ಸಸ್ ಆಗೋ ಸಾಧ್ಯತೆಯಿದೆ.

ಡಿ.ಕೆ.ಶಿವಕುಮಾರ್ ಭಾರೀ ಲೆಕ್ಕಚಾರದೊಂದಿಗೆ ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ತೆರಳಿದ್ದರು. ಇನ್ನೇನೂ ಪಟ್ಟ ಫಿಕ್ಸ್ ಆಗಿಯೇ ಬಿಡ್ತು ಅನ್ನುವಾಗಲೇ ಹೈಕಮಾಂಡ್ ಉಲ್ಟಾ ಹೊಡೆದಿದೆ. ಹೀಗಾಗಿ ಕಳೆದ ಐದು ದಿನಗಳಿಂದ ದೆಹಲಿಯಲ್ಲೇ ಬಿಡಾರ ಹೂಡಿದ್ದ ಡಿ.ಕೆ.ಶಿವಕುಮಾರ್ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಹೈಕಮಾಂಡ್ ಭೇಟಿಗೂ ಅವಕಾಶವೂ ಸಿಗದೇ ವಾಪಾಸಾಗಿದ್ದಾರೆ. ಹೀಗಾಗಿಯೇ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಅಧಿನಾಯಕಿ ಸೋನಿಯಗಾಂಧಿ ಆಪ್ತ ಅಹ್ಮದ್ ಪಟೇಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಮೂಲಕ ಭೇಟಿಗೆ ಪ್ರಯತ್ನ ಮಾಡಿದರು. ಆದರೆ ಸೋನಿಯಗಾಂಧಿ ಮಾತ್ರ ಭೇಟಿ ಸಮಯ ನೀಡಿಲ್ಲ. ಇದರಿಂದ ಡಿಕೆಶಿ ಬೇಸರಗೊಂಡಿದ್ದಾರೆ.

ಅಲ್ಲದೇ ಈ ಹಿಂದೆಯೇ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಗೆ ಕೆಪಿಸಿಸಿ ಪಟ್ಟ ನೀಡದಂತೆ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಪ್ರಾಬಲ್ಯವಿರುವ ಲಿಂಗಾಯಿತ ಮುಖಂಡ ಎಂ.ಬಿ.ಪಾಟೀಲ್ ಗೆ ಕೆಪಿಸಿಸಿ ಅಧ್ಯಕ್ಷಗಾಧಿ ನೀಡುವಂತೆಯೂ ಡಿಮ್ಯಾಂಡ್ ಇಟ್ಟಿದ್ದಾರೆ. ಆದರೆ ಲಿಂಗಾಯಿತ ಲೆಕ್ಕಾಚಾರ ಕೈಕೊಡುತ್ತೆ ಅನ್ನುವಾಗಲೇ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ನೀವೇ ಕೆಪಿಸಿಸಿ ಅಧ್ಯಕ್ಷರಾಗಿ ಅನ್ನೋ ಮಾತನ್ನು ಹೇಳಿದ್ದಾರೆ. ಆದ್ರೀಗ ಖರ್ಗೆ ಕೆಪಿಸಿಸಿ ಅಧ್ಯಕ್ಷರಾಗೋದಕ್ಕೆ ಕಾಂಗ್ರೆಸ್ ಹಿರಿಯ ನಾಯಕರೂ ಒಪ್ಪಿಗೆ ಕೊಟ್ಟಿದ್ದಾರೆ. ಕಾಂಗ್ರೆಸ್ ನ ಎರಡೂ ಬಣಗಳು ಇದ್ದಕ್ಕೆ ಒಪ್ಪಿಗೆ ಸೂಚಿಸೋ ಸಾಧ್ಯತೆಯಿರೋದ್ರಿಂದಾಗಿಯೇ ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷಗಾದಿ ಸಿಗೋದು ಡೌಟು.

ಕಾಂಗ್ರೆಸ್ ಹೈಕಮಾಂಡ್ ಸೋನಿಯಾ ಗಾಂಧಿ ದೆಹಲಿ ಭೇಟಿಯ ನೆಪದಲ್ಲಿ ಡಿಕೆಶಿ ಅವರನ್ನು ಭೇಟಿ ಮಾಡಿಲ್ಲ ಎನ್ನಲಾಗುತ್ತಿದೆ. ಆದ್ರೆ ಸಿದ್ದರಾಮಯ್ಯ ಉರುಳಿಸಿದ ದಾಳಕ್ಕೆ ಸೋನಿಯಾ ಮಣೆ ಹಾಕಿದ್ರಾ ಅನ್ನೋ ಅನುಮಾನವೂ ಇದೆ. ಒಟ್ಟಿನಲ್ಲಿ ಡಿಕೆಶಿ ಮುನಿಸು ಇದೀಗ ರಾಜ್ಯ ಕಾಂಗ್ರೆಸ್ ಗೆ ಇನ್ನಷ್ಟು ಸಂಕಷ್ಟವನ್ನು ತಂದೊಡ್ಡುವುದರಲ್ಲಿ ಅನುಮಾನವೇ ಇಲ್ಲಾ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular