ಕೇರಳ : ದುಬೈನಿಂದ ಕೇರಳದ ಕೋಯಿಕ್ಕೋಡ್ ನ ಕರಿಪುರ್ ವಿಮಾನ ನಿಲ್ದಾಣದಲ್ಲಿ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನ ಪತನವಾಗಿದೆ. ವಿಮಾನದಲ್ಲಿ ಒಟ್ಟ 174 ಮಂದಿ ಪ್ರಯಾಣಿಕರು ಹಾಗೂ 6 ಮಂದಿ ವಿಮಾನ ಸಿಬ್ಬಂಧಿ ಪ್ರಯಾಣಿಸುತ್ತಿದ್ದರು ಎನ್ನಲಾಗುತ್ತಿದೆ. ಘಟನೆಯಲ್ಲಿ ವಿಮಾನದ ಫೈಲೆಟ್ ಸೇರಿದಂತೆ 3 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ವಿಮಾನದ ಲ್ಯಾಂಡಿಂಗ್ ವೇಳೆಯಲ್ಲಿ ಫೈಲೆಟ್ ನಿಯಂತ್ರಣ ತಪ್ಪಿ ವಿಮಾನದ ಮುಂಭಾಗದ ನೆಲಕ್ಕೆ ಬಡಿದು ಈ ದುರ್ಘಟನೆ ಸಂಭವಿಸಿದೆ. ಕೊರೊನಾ ವೈರಸ್ ಸೋಂಕಿನಿಂದ ಹೇರಿಕೆಯಾಗಿರುವ ಲಾಕ್ ಡೌನ್ ನಿಂದಾಗಿ ದುಬೈನಲ್ಲಿ ಸಿಲುಕಿದ್ದವರನ್ನು ವಂದೇ ಭಾರತ್ ಮಿಷನ್ ಯೋಜನೆಯಡಿಯಲ್ಲಿ ತಾಯ್ನಾಡಿಗೆ ಕರೆತರಲಾಗುತ್ತಿತ್ತು.

ಇಂದು ಸಂಜೆ 7.45ರ ಸುಮಾರಿಗೆ ವಿಮಾನ ಲ್ಯಾಂಡ್ ಆಗಿತ್ತು. ಢಿಕ್ಕಿಯ ರಭಸಕ್ಕೆ ವಿಮಾನ ಎರಡು ತುಂಡಾಗಿದ್ದು, ಇದುವರೆಗೆ 35 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಮಾನ ದುರಂತದಲ್ಲಿ ಗಾಯಗೊಂಡಿರುವ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಈಗಾಗಲೇ ನಡೆಸಲಾಗುತ್ತಿದ್ದು, ಸುಮಾರು 15 ಅಂಬ್ಯುಲೆನ್ಸ್ ಈಗಾಗಲೇ ವಿಮಾನ ದುರಂತದ ಸ್ಥಳಕ್ಕೆ ಆಗಮಿಸಿವೆ.
ವಿಮಾನ ದುರಂತದ ಕುರಿತು ಮಾಹಿತಿಯನ್ನು ಪಡೆದುಕೊಳ್ಳುವವರಿಗಾಗಿ ಈಗಾಗಲೇ ಹೆಲ್ಪಲೈನ್ ನಂಬರ್ ನೀಡಲಾಗಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿರುವವರ ಕುರಿತು ಇದುವರೆಗೂ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಈಗಾಗಲೇ ಡಿಜಿಸಿಎ ವಿಮಾನ ದುರಂತದ ಬಗ್ಗೆ ಪ್ರತಿಕ್ರಿಯಿಸಿದ್ದು, ಹವಾಮಾನ ವೈಫರಿತ್ಯವೇ ಘಟನೆಗೆ ಕಾರಣವೆಂದಿದೆ.