ಬ್ರಹ್ಮಾವರ : ಕ್ಯಾನ್ಸರ್ ನಿಂದ ಬಳಲುತ್ತಿದ್ದ ವೃದ್ದೆಯೋರ್ವರು ಕಳೆದ ನಾಲ್ಕು ದಿನಗಳ ಹಿಂದೆಯಷ್ಟೆ ಸಂಬಂಧಿಕರ ಮನೆಗೆ ಮರಳಿದ್ದರು. ಮನೆಗೆ ಮರಳುವಾಗ ವೃದ್ದೆಯ ಗಂಟಲು ಮಾದರಿಯನ್ನು ಪಡೆದಿದ್ದರು. ಆದ್ರೆ ಮನೆಗೆ ಮರಳುತ್ತಿದ್ದಂತೆಯೇ ವೃದ್ದೆಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ವೃದ್ದೆಯೊಂದಿಗೆ ಮನೆಯಲ್ಲಿದ್ದ ನಾಲ್ವರಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಡಿಬೆಂಗ್ರೆಯ ನಿವಾಸಿಯಾಗಿರುವ ವೃದ್ದೆಯೋರ್ವರು ಅನಾರೋಗ್ಯದ ಹಿನ್ನೆಲೆಯಲ್ಲಿ ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುಣಮುಖರಾಗುತ್ತಿದ್ದಂತೆಯೇ ಬಾರಕೂರಿನಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದಾರೆ. ಆದರೆ ಮನೆಗೆ ಬಂದಿದ್ದ ವೃದ್ದೆಗೆ ಶಂಕಿತ ಕೊರೊನಾ ಲಕ್ಷಣಗಳು ಗೋಚರಿಸಿತ್ತು. ಈ ಹಿನ್ನೆಲೆಯಲ್ಲಿ ವೃದ್ದೆಯನ್ನು ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.

ಇಂದು ಬೆಳಗ್ಗೆ ವೃದ್ದೆ ವಾಸವಾಗಿದ್ದ ಮನೆಯಲ್ಲಿದ್ದ ಇಬ್ಬರು ಮಕ್ಕಳಿಗೆ ಜ್ವರ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಜೊತೆಗೆ ತಂದೆ ತಾಯಿಯನ್ನೂ ರಾಪಿಡ್ ಟೆಸ್ಟ್ ಗೆ ಒಳಪಡಿಸಲಾಗಿದ್ದು, ನಾಲ್ಕು ಜನರಿಗೂ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ನಾಲ್ವರನ್ನೂ ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಂದೇ ಮನೆಯ 5 ಮಂದಿಗೆ ಕೊರೊನಾ ಸೋಂಕು ದೃಢಪಡುತ್ತಿದ್ದಂತೆಯೇ ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೋರಯ್ಯ ಅವರ ನೇತೃತ್ವದಲ್ಲಿ ಸೋಂಕಿತರ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ. ಅಲ್ಲದೇ ಕೊರೊನಾ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಸೋಂಕಿತರ ಮನೆಯ ಅಕ್ಕಪಕ್ಕದಲ್ಲಿ ಇರುವ 13 ಮನೆ ಹಾಗೂ 19 ಅಂಗಡಿಗಳನ್ನೂ ಕೂಡ ಸೀಲ್ ಡೌನ್ ಮಾಡಲಾಗಿದೆ.
ಕಾರ್ಯಾಚರಣೆಯಲ್ಲಿ ಕೋಟ ಕಂದಾಯ ನಿರೀಕ್ಷರಾದ ರಾಜು, ಬ್ರಹ್ಮಾವರ ಠಾಣೆಯ ಪಿಎಸ್ಐ ರಾಘವೇಂದ್ರ, ಆರೋಗ್ಯ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಭಾಗಿಯಾಗಿದ್ದಾರೆ. ಕೊರೊನಾ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದವರನ್ನು ಆರೋಗ್ಯ ಸಿಬ್ಬಂದಿಗಳು ಪತ್ತೆ ಹಚ್ಚುವ ಕಾರ್ಯವನ್ನು ಮಾಡುತ್ತಿದ್ದಾರೆ.

ಬಾರಕೂರು ಪೇಟೆಯ ಬಾರಕೂರು ಹಾಗೂ ಸಾಸ್ತಾನ ರಸ್ತೆಯಲ್ಲಿನ ಅಂಗಡಿಗಳನ್ನು ಸೀಲ್ ಡೌನ್ ಮಾಡಲಾಗಿದೆ.
ಅಧಿಕಾರಿಗಳಿಂದ ಸೀಲ್ ಡೌನ್ ಕಾರ್ಯಾಚರಣೆ.

ಕೊರೊನಾ ಸೋಂಕಿತರು ವಾಸಿಸುತ್ತಿದ್ದ ಬಾರಕೂರು ಪೇಟೆಯಲ್ಲಿರುವ ಮನೆ .
