ಬೆಂಗಳೂರು : ಕೊರೊನಾ ಮಹಾಮಾರಿಯ ಆರ್ಭಟ ಹೆಚ್ಚುತ್ತಿದ್ದು, ರಾಜ್ಯದಲ್ಲಿಂದು ಕೊರೊನಾ ಪೀಡಿತರ ಸಂಖ್ಯೆ ದ್ವಿಶತಕದ ಗಡಿದಾಟಿದೆ. ಬಳ್ಳಾರಿ, ಕಲಬುರಗಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಸೋಂಕಿತರರು ಪತ್ತೆಯಾಗಿದ್ದಾರೆ. ಒಂದೆಡೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ರೆ, ಇನ್ನೊಂದೆಡೆ ಡೆಡ್ಲಿ ಮಹಾಮಾರಿ ರಾಜ್ಯದಲ್ಲಿಂದು ಬರೋಬ್ಬರಿ 12 ಮಂದಿಯನ್ನು ಬಲಿ ಪಡೆದಿದೆ. ಈ ಮೂಲಕ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 114ಕ್ಕೆ ಏರಿಕೆಯಾಗಿದೆ.

ದಿನೇ ದಿನೇ ಕೊರೊನಾ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಜಿಂದಾಲ್ ಕಾರ್ಖಾನೆಯ ಸೋಂಕು ಬಳ್ಳಾರಿ ಜಿಲ್ಲೆಗೆ ಆತಂಕವನ್ನು ತಂದೊಡ್ಡಿದೆ. ಇಂದು ಜಿಲ್ಲೆಯಲ್ಲಿ 48 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇನ್ನು ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಜಿಲ್ಲೆಯಲ್ಲಿಂದು 48 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1074ಕ್ಕೆ ಏರಿಕೆ ಕಂಡಿದೆ. ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕಲಬುರಗಿ ಜಿಲ್ಲೆ ರಾಜ್ಯದಲ್ಲಿಯೇ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕಳೆದೊಂದು ವಾರದಿಂದಲೂ ಕೊರೊನಾ ಸೋಂಕು ವ್ಯಾಪಿಸುತ್ತಿದ್ದು, 23 ಮಂದಿಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 401ಕ್ಕೆ ಏರಿಕೆಯನ್ನು ಕಂಡಿದೆ.

ಉಳಿದಂತೆ ರಾಮನಗರ ಜಿಲ್ಲೆಯಲ್ಲಿ 21, ಬೆಂಗಳೂರು ನಗರ 17, ಯಾದಗರಿ 8, ಮಂಡ್ಯ7, ಬೀದರ್ 6, ಗದಗ 5, ರಾಯಚೂರು 4, ಹಾಸನ 4, ಧಾರವಾಡ 4, ದಾವಣಗೆರೆ 3, ಚಿಕ್ಕಮಗಳೂರು 3, ವಿಜಯಪುರ 2, ಉತ್ತರ ಕನ್ನಡ 2, ಮೈಸೂರು 2 ಮತ್ತು ಬಾಗಲಕೋಟೆ, ಶಿವಮೊಗ್ಗ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿಂದು 179 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 7944ಕ್ಕೆ ಏರಿಕೆಯಾಗಿದೆ. ಆದರೆ 2843 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.