ಬೆಂಗಳೂರು : ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರಿಗೂ ಕೊರೊನಾ ಶಾಕ್ ಕೊಟ್ಟಿದೆ. ಕಳೆದೆರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಪುಟ್ಟಣ್ಣ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಎಂಎಲ್ ಸಿ ಸಂಪರ್ಕದಲ್ಲಿದ್ದ ಶಿಕ್ಷಕರಿಗೆ ಇದೀಗ ನಡುಕ ಶುರುವಾಗಿದೆ.

ಕೊರೊನಾ ವೈರಸ್ ಸೋಂಕಿನ ಆರ್ಭಟ ಜೋರಾಗಿದೆ. ಇದೀಗ ಕೊರೊನಾ ಮಹಾಮಾರಿ ಜನಪ್ರತಿನಿಧಿಗಳ ಬೆನ್ನಿಗೆ ಬಿದ್ದಿದೆ. ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಪುಟ್ಟಣ್ಣ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಕೊರೊನಾ ತಪಾಸಣಾ ವರದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಖುದ್ದು ಪುಟ್ಟಣ್ಣ ಅವರೇ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಪುಟ್ಟಣ್ಣ ಅವರ ಸಂಪರ್ಕದಲ್ಲಿರುವವರನ್ನು ಆರೋಗ್ಯಾಧಿಕಾರಿಗಳು ಕ್ವಾರಂಟೈನ್ ಗೆ ಒಳಪಡಿಸುತ್ತಿದ್ದಾರೆ. ಇನ್ನು ಎಂಎಲ್ ಸಿ ಪುಟ್ಟಣ್ಣ ಅವರು ಕೆಲ ದಿನಗಳ ಹಿಂದೆಯಷ್ಟೆ ಶಿಕ್ಷಕರನ್ನು ಭೇಟಿಯಾಗಿ ಅವರ ಸಮಸ್ಯೆಯನ್ನು ಆಲಿಸಿದ್ದರು. ಹೀಗಾಗಿ ಪುಟ್ಟಣ್ಣ ಅವರನ್ನು ಭೇಟಿಯಾಗಿರುವ ಶಿಕ್ಷಕರಿಗೂ ಕೊರೊನಾ ಆತಂಕ ಶುರುವಾಗಿದೆ.