ಹಾಸನ : ಕೊರೋನಾ ಮಹಾಮಾರಿ ದಿನೇ ದಿನೇ ಆತಂಕವನ್ನು ಹೆಚ್ಚಿಸುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಮಾಡಲಾಗಿದೆ. ಕೊರೊನಾ ಎಷ್ಟು ಭೀಕರವಾಗುತ್ತಿದ್ದೆಯೆಂದ್ರೆ ಹಾಸನದಲ್ಲಿ ಹೋಮ್ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಮಂಚೇನಹಳ್ಳಿಯಲ್ಲಿ ದುರಂತ ಘಟನೆ ನಡೆದಿದ್ದು, ವಿಷಕಂಠ (55) ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷಕಂಠ ಕಳೆದ ಹಲವು ವರ್ಷಗಳಿಂದ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ. ಈ ವರ್ಷದ ಯುಗಾದಿ ಹಬ್ಬಕ್ಕೆಂದು ಮುಂಬೈನಿಂದ ತನ್ನ ಹುಟ್ಟೂರಿಗೆ ಬಂದಿದ್ದ.

ಹೊರ ರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸಿದ್ದರಿಂದ ಆತನ ಮುಂಗೈ ಮೇಲೆ ಹೋಂ ಕ್ವಾರಂಟೈನ್ ಎಂದು ಸೀಲ್ ಹಾಕಲಾಗಿತ್ತು. ಜೊತೆಗೆ ಮನೆಯಲ್ಲೇ ಇರುವಂತೆ ಆರೋಗ್ಯಾಧಿಕಾರಿಗಳು ಸೂಚನೆ ನೀಡಿದ್ದರು. ವಿಷಕಂಠ ಅಸ್ತಮಾ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಹೋಮ್ ಕ್ವಾರಂಟೈನ್ ಹಿನ್ನೆಲೆಯಲ್ಲಿ ಕುಟುಂಬಸ್ಥರನ್ನು ಹಾಗೂ ಸಂಬಂಧಿಕರಿಂದ ವಿಷಕಂಠನನ್ನು ದೂರ ಇರಿಸಲಾಗಿತ್ತು. ಆದರೆ ಆತ ತನಗೆ ಕೊರೋನಾ ಬಂದೇ ಬಿಟ್ಟಿದೆ ಎಂದು ತಪ್ಪು ತಿಳಿದು ನೇಣಿಗೆ ಶರಣಾಗಿದ್ದಾನೆ.

ಕೊರೋನಾ ಹರಡುವ ಭೀತಿಯಿಂದಾಗಿ ಜನರು ಮನೆಯಿಂದ ಹೊರಗೆ ಹೋಗಬೇಡಿ ಎಂದು ಜನರಲ್ಲಿ ಮನವಿ ಮಾಡಲಾಗಿದೆ. ಹೊರ ರಾಜ್ಯ ಮತ್ತು ವಿದೇಶಗಳಿಂದ ಬರುವ ವ್ಯಕ್ತಿಗಳನ್ನು 14 ದಿನಗಳ ಕಾಲ ಗೃಹ ದಿಗ್ಭಂದನಲ್ಲಿ ಇರಿಸಲಾಗುತ್ತಿದೆ. ಆ ವೇಳೆ ಕೊರೋನಾ ವೈರಸ್ ಇರುವುದು ಖಚಿತವಾದರೆ ಅಂತಹವರನ್ನು ಐಸೋಲೇಷನ್ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಹಾಸನದಲ್ಲಿ ಹೋಂ ಕ್ವಾರಂಟೈನ್ನಲ್ಲಿದ್ದ ವ್ಯಕ್ತಿ ಹೋಮ್ ಕ್ವಾರಂಟೈನ್ ಆರ್ಥ ಮಾಡಿಕೊಳ್ಳದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶ್ರವಣಬೆಳಗೊಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.