ನವದೆಹಲಿ : ಕೊರೊನಾ ಬಗ್ಗೆ ಯಾವುದೇ ರೀತಿಯಲ್ಲಿಯೂ ಭಯಪಡುವ ಅಗತ್ಯವಿಲ್ಲ. ಕೊರೊನಾ ಸೋಂಕಿಗೆ ಭಾರತದಲ್ಲಿಯೇ ಲಸಿಕೆ ಸಿದ್ಧವಾಗುತ್ತಿದೆ. ಒಂದಲ್ಲ, ಎರಡಲ್ಲ ಮೂರು ಲಸಿಕೆಗಳು ತಯಾರುತ್ತಿವೆ. ಲ್ಯಾಬ್ಗಳಲ್ಲಿ ಋಷಿಮುನಿಗಳ ರೀತಿಯಲ್ಲಿ ಸಂಶೋಧನೆ ನಡೆಯುತ್ತಿದೆ. ಶೀಘ್ರದಲ್ಲೇ ಜನರ ಕೈಗೆ ಕರೊನಾ ಔಷಧಿ ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
74ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿರುವ ಕೆಂಪುಕೋಟೆಯಲ್ಲಿ ಧ್ವಜಾರೋಹಣವನ್ನು ನೆರವೇರಿಸಿ, ರಾಷ್ಟ್ರವನ್ನು ದ್ದೇಶಿಸಿ ಮೋದಿ ಮಾತನಾಡಿದ್ದಾರೆ. ನಾವಿಂದು ಸ್ವತಂತ್ರ ಭಾರತದಲ್ಲಿ ಉಸಿರಾಡುತ್ತಿದ್ದೇವೆ. ಇದರ ಹಿಂದೆ ಲಕ್ಷಾಂತರ ಜನರ ತ್ಯಾಗವಿದೆ. ನಮ್ಮ ಸೇನೆ ಭಾರತ ಮಾತೆಯನ್ನು ರಕ್ಷಿಸುತ್ತಿದೆ. ವೀರರ ತ್ಯಾಗ ಬಲಿದಾನದಿಂದಾಗಿ ನಾವಿಂದು ಸಂಭ್ರಮ ಪಡುತ್ತಿದ್ದೇವೆ ಎಂದು ದೇಶಕ್ಕೆ ಸ್ವತಂತ್ರ ತಂದುಕೊಟ್ಟವರನ್ನು ಸ್ಮರಿಸಿದ್ದಾರೆ.
ದೇಶದಾದ್ಯಂತ ಕೊರೊನಾ ಸಂಕಷ್ಟದ ಪರಿಸ್ಥಿತಿಯನ್ನು ತಂದಿಟ್ಟಿದ್ದು, ಕೊರೊನಾ ವಾರಿಯರ್ಸ್ ಸುದೀರ್ಘ ಸಮಯದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಭಾರತದ ಧರ್ಮ ಎಂಬಂತೆ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕೊರೊನಾ ನಡುವಲ್ಲೇ ದೇಶದ ಹಲವೆಡೆಗಳಲ್ಲಿ ಪ್ರಾಕೃತಿಕ ವಿಕೋಪಗಳು ಕೂಡ ನಡೆದಿವೆ. ಆದರೆ ಭಾರತದ 130 ಕೋಟಿ ಜನರ ಸಂಕಲ್ಪದಿಂದಾಗಿ ಕರೊನಾ ಮಹಾಮಾರಿಯನ್ನಿಂದು ನಾವು ಜಯಿಸಿದ್ದೇವೆ ಎಂದರು.
ಕೊರೊನಾ ವಿರುದ್ಧ ಭಾರತ ತನ್ನ ಸಾಮೂಹಿಕ ಶಕ್ತಿಯನ್ನು ತೋರಿದೆ. ಭಾರತದ ಪ್ರತಿಯೊಬ್ಬರಿಗೂ ಆತ್ಮನಿರ್ಭರ ಮಂತ್ರವಾಗಿದೆ. ಕರೊನಾ ಸಂದರ್ಭದಲ್ಲೂ ಆತ್ಮನಿರ್ಭರ ಸಂಕಲ್ಪ ಕೈಗೊಳ್ಳಲಾಗಿದೆ. ಭಾರತ ಆತ್ಮನಿರ್ಭರ ಆಗಲೇಬೇಕಿದೆ. ಭಾರತ ಒಂದು ಬಾರಿ ನಿರ್ಧಾರ ಕೈಗೊಂಡರೆ, ಸಾಧಿಸಿಯೇ ತೀರುತ್ತದೆ. ಈ ದಿಶೆಯಲ್ಲಿ ನಮ್ಮನ್ನು ನಾವು ತಯಾರಿ ಮಾಡಿಕೊಳ್ಳುವುದು ಅಗತ್ಯವಾಗಿದೆ.
ಯುವಶಕ್ತಿಯನ್ನು ಹೊಂದಿರುವ ಭಾರತದ ಮೊದಲ ಮಂತ್ರ ಆತ್ಮನಿರ್ಭರವಾಗಿದೆ. ಇಡೀ ಜಗತ್ತಿನ ಕಲ್ಯಾಣಕ್ಕಾಗಿ ಭಾರತ ಆತ್ಮನಿರ್ಭರ ಆಗಬೇಕಿದೆ. ಆತ್ಮನಿರ್ಭರ ಭಾರತ ಕೃಷಿ ಕ್ಷೇತ್ರದಲ್ಲಿ ಸಾಧಿಸಿ ತೋರಿಸಿದೆ. ದೇಶದ ಹೊಟ್ಟೆಯನ್ನು ನಮ್ಮ ರೈತರು ತುಂಬಿಸುತ್ತಿದ್ದಾರೆ. ಅಲ್ಲದೆ, ಜಗತ್ತಿಗೂ ನಮ್ಮ ರೈತರ ಕೊಡುಗೆ ಇದೆ ಎಂದರು. ಇದೇ ವೇಳೆ ವೋಕಲ್ ಫಾರ್ ಲೋಕಲ್ ಮತ್ರ ಜಪಿಸಿದ ಮೋದಿ, ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡುವಂತೆ ಕರೆ ನೀಡಿದರು. ಸ್ಥಳೀಯ ವಸ್ತುಗಳನ್ನು ಖರೀದಿಸುವ ಮೂಲಕ ಸ್ಥಳೀಯರಿಗೆ ಬೆಂಬಲ ನೀಡಿ ಎಂದು ಮೋದಿ ಮನವಿ ಮಾಡಿಕೊಂಡಿದ್ದಾರೆ.
ದೇಶದ ಕೃಷಿ ಕ್ಷೇತ್ರ ಆಧುನೀಕರಣವಾಗುತ್ತಿದೆ. ಹಲವೆಡೆ ಸೋಲಾರ್ ಘಟಕಗಳನ್ನು ಅಳವಡಿಸಲಾಗಿದೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ. ಪ್ರಧಾನ ಮಂತ್ರಿ ಜಲಜೀವನ್ ಮಿಷನ್ ತನ್ನ ಗುರಿ ಸಾಧಿಸಿದೆ. ಗ್ರಾಮೀಣ ಭಾಗದ ಜನರಿಗೆ ಶುದ್ಧ ನೀರು ದೊರೆಯುತ್ತದೆ. ಕಾಡಿನಲ್ಲಿ ದೂರ ದೂರ ವಾಸಿಸುವವರಿಗೂ ಇದರ ಸೌಲಭ್ಯ ಲಭ್ಯವಾಗಿದೆ. ಶುದ್ಧ ನೀರುವ ಸಿಗುತ್ತಿರುವುದರಿಂದ ರೋಗಗಳು ಕಡಿಮೆಯಾಗುತ್ತವೆ. ದೂರದೂರುಗಳಿಂದ ನಗರಗಳಿಗೆ ವಲಸೆ ಬರುವವರಿಗೆ ವಸತಿ ಯೋಜನೆ ಕಲ್ಪಿಸಲಾಗಿದೆ. ಮನೆ ಕಟ್ಟಿಕೊಳ್ಳಬೇಕೆಂಬ ಮಧ್ಯಮ ವರ್ಗದ ಜನರ ಕನಸು ವಸತಿ ಯೋಜನೆಯ ಮೂಲಕ ನನಸಾಗುತ್ತಿದೆ ಎಂದರು.
ಇದೇ ವೇಳೆ ಕೆಂಪು ಚೀನಾ ರಾಷ್ಟ್ರದ ವಿರುದ್ದವೂ ಪರೋಕ್ಷವಾಗಿ ಮೋದಿ ಗುಡುಗಿದ್ದಾರೆ. ವಿಸ್ತಾರವಾದದಲ್ಲಿ ನಂಬಿಕೆ ಇಟ್ಟವರು ಸಹ ಎರಡು ಯುದ್ಧಗಳಲ್ಲಿ ಹಿನ್ನೆಡೆ ಕಂಡಿದ್ದಾರೆ. ವಿಸ್ತಾರವಾದಕ್ಕೆ ಸವಾಲಾಗಿದ್ದೇ ಭಾರತ ದೇಶ. ವಿಸ್ತಾರವಾದದಲ್ಲಿ ನಂಬಿಕೆ ಇಟ್ಟವರು ಎಂದಿಗೂ ಉನ್ನತಿ ಕಾಣಲು ಸಾಧ್ಯವಿಲ್ಲ ಎಂದು ಟೀಕಿಸಿದರು.