ಧರ್ಮಸ್ಥಳ : ಲಾಕ್ ಡೌನ್ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿದ್ದ ವಾರ್ಷಿಕ ವಿಷು ಮಾಸದ ಜಾತ್ರೆಯನ್ನು ರದ್ದುಗೊಳಿಸಲಾಗಿದೆ. ಅಲ್ಲದೇ ಧರ್ಮದೇವತೆಗಳ, ಅಣ್ಣಪ್ಪ ಸ್ವಾಮಿಯ ನೇಮ ಹಾಗೂ ಕೋಲವನ್ನೂ ರದ್ದು ಮಾಡಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ತಿಳಿಸಿದ್ದಾರೆ.

ಪತ್ರಿಕಾ ಪ್ರಕಟನೆ ಹೊರಡಿಸಿರುವ ವೀರೇಂದ್ರ ಹೆಗ್ಗಡೆ ಅವರು, ಮಂಜುನಾಥ ಸ್ವಾಮಿಯ ರಥೋತ್ಸವ, ಕಟ್ಟೆ, ವಿಹಾರ, ಅವಭೃತ ವಿವಾಹರವನ್ನೂ ರದ್ದುಗೊಳಿಸಲಾಗಿದೆ. ದೇವ ಪ್ರಶ್ನೆಯ ಮೂಲಕ ಪರಿಶೀಲಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ಸೂಚನೆಯವರೆಗೂ ಭಕ್ತರಿಗೆ ದೇವಸ್ಥಾನಕ್ಕೆ ಪ್ರವೇಶ ಹಾಗೂ ದೇವರ ದರ್ಶನವನ್ನೂ ರದ್ದುಗೊಳಿಸಲಾಗಿದೆ. ದೈವ ದೇವರುಗಳು ಈ ರೀತಿಯ ಪರಿವರ್ತೆನೆಗೆ ಒಪ್ಪಿದ್ದಾರೆ.

ಸಾಂಕೇತಿಕ ಸೇವೆಗಳಿಗೆ ಒಪ್ಪಿ ಅನುಗ್ರಹವನ್ನು ನೀಡಿದ್ದಾರೆ. ಕೊರೊನಾ ಸೋಂಕು ಮುಕ್ತಿಗಾಗಿ ಪ್ರಾರ್ಥನೆ ಮಾಡಿ ಸರಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಪಾಲಿಸಿ, ಮುಂದಿನ ದಿನಗಳ ಸುಭೀಕ್ಷೆಗಾಗಿ ಸರಕಾರದ ಆದೇಶವನ್ನು ಪರಿಪಾಲಿಸಿ ಭಕ್ತರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಕರೆ ನೀಡಿದ್ದಾರೆ.