ಬೆಂಗಳೂರು: ಸಾಲು-ಸಾಲು ಸೋಲುಂಡು ಕಂಗಾಲಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಶತಾಯ-ಗತಾಯ ಗೆಲುವಿನ ದಾರಿ ತೋರಲು ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಂಕಣಬದ್ಧರಾಗಿದ್ದು, ಅಳೆದು-ಸುರಿದು-ತೂಗಿ ಬೇರೆ ಪಕ್ಷದ ಪ್ರಭಾವಿ ನಾಯಕರನ್ನು ಸೆಳೆಯುವ ಕಸರತ್ತು ಆರಂಭಿಸಿದ್ದಾರೆ.

ಕಾಂಗ್ರೆಸ್ ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಸೋತು ಸುಣ್ಣವಾಗಿದೆ. ಏಕಾಏಕಿ ಬಂಡಾಯ ಹೂಡಿ ಪಕ್ಷದಿಂದ ಎದ್ದು ಹೋದ ಶಾಸಕರಿಂದ ಕೈಪಾಳಯ ಬಡವಾಗಿದ್ದಂತೂ ನಿಜ. ಸಧ್ಯ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ ಹೊಣೆ ಹೊತ್ತಿರುವ ಕನಕಪುರ ಬಂಡೆ ಡಿಕೆಶಿವಕುಮಾರ್ ಬೇರೆ ಪಕ್ಷದ ನಾಯಕರನ್ನು ಕೈತೆಕ್ಕೆಗೆ ಸೆಳೆಯುವ ಸರ್ಕಸ್ ಆರಂಭಿಸಿದ್ದಾರೆ.

ಈಗಾಗಲೇ ಹಾಲಿ ಶಾಸಕ ಶರತ್ ಬಚ್ಚೇಗೌಡರನ್ನು ಕಾಂಗ್ರೆಸ್ ಗೆ ಸೇರಿಸಿಕೊಂಡ ಡಿಕೆಶಿ, ಸಧ್ಯ ಜೆಡಿಎಸ್ ಕೆಲವೇ ಕೆಲವು ಪ್ರಭಾವಿ ನಾಯಕರಲ್ಲಿ ಒಬ್ಬರಾಗಿರುವ ಮಧು ಬಂಗಾರಪ್ಪರನ್ನು ಕಾಂಗ್ರೆಸ್ ಗೆ ಆಹ್ವಾನಿಸಿದ್ದಾರೆ. ಈ ವಿಚಾರವನ್ನು ಸ್ವತಃ ಮಧು ಬಂಗಾರಪ್ಪ ಖಚಿತಪಡಿಸಿದ್ದಾರೆ.

ಡಿ.ಕೆ.ಶಿವಕುಮಾರ್ ನನ್ನ ತಂದೆಯೊಂದಿಗೆ ರಾಜಕಾರಣ ಮಾಡಿದವರು. ನನ್ನ ಕುಟುಂಬಕ್ಕೆ ಸ್ನೇಹಿತರು. ಆ ಸಲುಗೆಯಿಂದ ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಆದರೆ ಕಾಂಗ್ರೆಸ್ ಸೇರುವ ಬಗ್ಗೆ ನಾನಿನ್ನು ನಿರ್ಧರಿಸಿಲ್ಲ. ಸಧ್ಯ ಜೆಡಿಎಸ್ ನಲ್ಲೇ ಇದ್ದೇನೆ. ಆದರೆ ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ ಎಂದಿದ್ದಾರೆ.

ಇನ್ನು ಶಿವಮೊಗ್ಗ ಭಾಗದಲ್ಲಿ ತಕ್ಕ ಮಟ್ಟಿಗೆ ಪ್ರಭಾವ ಹಾಗೂ ಹಿಡಿತ ಉಳಿಸಿಕೊಂಡಿರೋ ಮಧು ಬಂಗಾರಪ್ಪ ಅವರನ್ನು ಕಾಂಗ್ರೆಸ್ ಗೆ ಸೆಳೆದುಕೊಂಡು ಮುಂದಿನ ಚುನಾವಣೆ ವೇಳೆಗೆ ಅಲ್ಲಿಯೂ ಕಾಂಗ್ರೆಸ್ ಗೆಲುವಿನ ತಂತ್ರ ಹೆಣೆಯುವುದು ಡಿಕೆಶಿ ವಿಚಾರವಾಗಿದ್ದು, ಇದಕ್ಕೆ ಮಧು ಕಾಂಗ್ರೆಸ್ ಸೇರ್ಪಡೆ ಬಲಕೊಡಲಿದೆ.

ಈ ಮಧ್ಯೆ ಜೆಡಿಎಸ್ ನಲ್ಲಿ ಮಧು ಬಂಗಾರಪ್ಪ ಇದ್ದು ಇಲ್ಲದಂತೆ ವರ್ತಿಸುತ್ತಿರೋದರ ಬಗ್ಗೆ ಮಾಜಿ ಸಿಎಂ ಎಚ್ಡಿಕೆ ಈಗಾಗಲೇ ಬಹಿರಂಗವಾಗಿಯೇ ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ. ಕೆಲದಿನಗಳ ಹಿಂದೆ ಮಾಧ್ಯಮಗಳ ಜೊತೆ ಮಾತನಾಡಿದ ಎಚ್ಡಿಕೆ 2018 ರ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಮಧು ಬಂಗಾರಪ್ಪ ನನ್ನನ್ನು ಸಂಪರ್ಕಿಸಿಲ್ಲ. ಅವರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ನಂಗೇನೂ ಮಾಹಿತಿ ಇಲ್ಲ. ಮಧುಗೆ ಅವರ ತಂದೆಯೂ ನೀಡದಷ್ಟು ಪ್ರೋತ್ಸಾಹ ರಾಜಕೀಯವಾಗಿ ನಾನು ನೀಡಿದ್ದೇನೆ ಎಂದು ಕುಟುಕಿದ್ದರು.

ಸಧ್ಯ ಮಧು ಕಾಂಗ್ರೆಸ್ ಸೇರ್ಪಡೆ ವಿಚಾರವನ್ನು ಒಪ್ಪಿಕೊಂಡಿಲ್ಲ. ಹಾಗಂತ ನಿರಾಕರಿಸಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಶಾಸಕ-ಸಂಸದರಾಗುವ ಕನಸಿನಲ್ಲಿರೋ ಮಧು ಬಂಗಾರಪ್ಪ ಕೈಪಾಳಯ ಸೇರಿಕೊಂಡರೇ ಅಚ್ಚರಿಪಡಬೇಕಿಲ್ಲ.