ಕೆಪಿಸಿಸಿ ಅಧ್ಯಕ್ಷರಾಗಿ ೨೦೨೩ ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಪ್ರಯತ್ನ ಆರಂಭಿಸಿರುವ ಡಿಕೆಶಿ ಬೀಗರು ಹಾಗೂ ರಾಜಕೀಯ ಗುರು ಎಸ್ಎಂಕೆಹಾದಿಯಲ್ಲೇ ನಡೆದಿದ್ದಾರೆ.

ರಾಜಕೀಯದ ಶಕ್ತಿಕೇಂದ್ರ ಎಂದೇ ಕರೆಯಿಸಿಕೊಳ್ಳುವ ಕೋಲಾರದ ಮುಳಬಾಗಿಲಿನ ಕುರುಡುಮಲೆಯ ಗಣೇಶನ ದರ್ಶನ ಪಡೆದು ಪೂಜೆ ಸಲ್ಲಿಸಿ ಪಾಂಚಜನ್ಯ ಮೊಳಗಿಸಿ ೨೦೨೩ ರ ರಣಾಂಗಣಕ್ಕೆ ನಾವು ಸಜ್ಜು ಎಂಬ ಸಂದೇಶ ನೀಡಿದ್ದಾರೆ.

ದೇವಮೂಲೆ ಹಾಗೂ ರಾಜಕೀಯದ ದೃಷ್ಟಿಯಿಂದ ಅತ್ಯಂತ ಶ್ರೇಯಸ್ಕರ ಎಂದು ನಂಬಲಾದ ಕುರುಡುಮಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಚುನಾವಣೆ ವೇಳೆ ಪೂಜೆ ಸಲ್ಲಿಸಿ ಗೆಲುವಿಗಾಗಿ ಪ್ರಾರ್ಥಿಸೋದು ಕಾಮನ್.

ಆದರೆ ೨೦೨೩ ರ ವಿಧಾನಸಭಾ ಚುನಾವಣೆಗೆ ಈಗಾಗಲೇ ಸಿದ್ಧತೆ ಆರಂಭಿಸಿರೋ ಡಿಕೆಶಿ ಮೊದಲ ಹಂತದಲ್ಲೇ ಕುರುಡುಮಲೆ ಗಣೇಶ್ ದರ್ಶನ್ ಪಡೆದು ಪಕ್ಷ ಅಧಿಕಾರಕ್ಕೆ ತರುವಂತೆ ಬೇಡಿಕೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಮಾಜಿಸಿಎಂ ಎಸ್.ಎಂ.ಕೃಷ್ಣ್ ಕೆಪಿಸಿಸಿಅಧ್ಯಕ್ಷರಾಗಿದ್ದಾಗಲೂ ಕುರುಡುಮಲೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಪಾಂಡ ಜನ್ಯ ಮೊಳಗಿಸಿದ್ದರು. ಹೀಗಾಗಿ ಮೊನ್ನೆ ಮೊನ್ನೆಯಷ್ಟೇ ಮಗಳನ್ನುಧಾರೆ ಎರೆದು ಎಸ್.ಎಂಕೆಜೊತೆ ಬೀಗತನ ಬೆಳೆಸಿರೋ ಡಿಕೆಶಿ ಅವರ ಸಲಹೆಯಂತೆ ಪಕ್ಷ ಸಂಘಟನೆ,ಚುನಾವಣೆ ಸಿದ್ದತೆಯನ್ನು ಕುರುಡುಮಲೆಯಿಂದಲೇ ಆರಂಭಿಸಿದ್ದಾರೆ.

ಪೂಜೆ ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್, ಪಕ್ಷವನ್ನು ಅಧಿಕಾರಕ್ಕೆ ತರೋದು ನಮ್ಮ ಗುರಿ. ಕಾಂಗ್ರೆಸ್ ನಲ್ಲಿ ಯಾವುದೇ ಗುಂಪು ಇಲ್ಲ. ಇರೋದೊಂದೆ ಕಾಂಗ್ರೆಸ್. ಮೊದಲು ಅಧಿಕಾರ ಹಿಡಿಯಬೇಕು.ಆಮೇಲೆ ಸಿಎಂ ಸ್ಥಾನದ ಪ್ರಶ್ನೆ ಎಂದಿದ್ದಾರೆ.

ಮಾರ್ಚ್ ೩ ರಿಂದ ದೇವನಹಳ್ಳಿಯಿಂದ ಪಕ್ಷದ ಪಾದಯಾತ್ರೆ ಸೇರಿದಂತೆ ಪಕ್ಷಸಂಘಟನೆಯ ಚಟುವಟಿಕೆ ಹಮ್ಮಿಕೊಂಡಿದ್ದೇವೆ.ಕಾಂಗ್ರೆಸ್ ಸೋತ ಪ್ರದೇಶಗಳನ್ನು ಗುರುತಿಸಿ ನೂರಕ್ಕೆ ಹೆಚ್ಚು ವಿಧಾನಸಭಾ ಪ್ರದೇಶಕ್ಕೆ ಭೇಟಿ ನೀಡುತ್ತೇವೆ ಎಂದಿಲ್ಲದೇ ಸಿದ್ಧರಾಮಯ್ಯ ದೆಹಲಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಕಾಂಗ್ರೆಸ್ನಲ್ಲಿಒಗ್ಗಟ್ಟಿದೆ ಎಂದು ಪುನರುಚ್ಛರಿಸಿದ್ದಾರೆ.

ಮೂಲಗಳ ಪ್ರಕಾರ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿರೋದರಿಂದ ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಇನ್ನಷ್ಟು ಬಲಗೊಳಿಸುವ ಉದ್ದೇಶದಿಂದ ದೇವರ ಮೊರೆ ಹೋಗುತ್ತಿದ್ದು ಮುಂದಿನ ದಿನದಲ್ಲಿ ಎಲ್ಲ ಶಕ್ತಿಪೀಠಗಳಿಗೂ ಡಿಕೆಶಿ ಕಾಂಗ್ರೆಸ್ ಗೆಲುವಿನ ಬೇಡಿಕೆ ಇಡಲಿದ್ದಾರೆ ಎನ್ನಲಾಗುತ್ತಿದೆ.