ತುಮಕೂರು: ಉಪಚುನಾವಣೆ ಮತದಾನಕ್ಕೆ ದಿನಗಣನೆ ನಡೆದಿರುವ ಬೆನ್ನಲ್ಲೇ, ಜೆಡಿಎಸ್ ಪಾಳಯಕ್ಕೆ ಆತಂಕ ಎದುರಾಗಿದ್ದು, ತುಮಕೂರಿನ ಶಿರಾ ಕ್ಷೇತ್ರದ ಜೆಡಿಎಸ್ ಸಮಾವೇಶದ ವೇದಿಕೆಯಲ್ಲೇ ಅಭ್ಯರ್ಥಿ ಅಮ್ಮಾಜಮ್ಮಾ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನವೆಂಬರ್ 3 ರಂದು ಶಿರಾ ಕ್ಷೇತ್ರದ ಉಪಚುನಾವಣೆ ನಡೆಯಲಿದ್ದು, ಇಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಇಂದು ಶಿರಾದಲ್ಲಿ ಬೃಹತ ಜೆಡಿಎಸ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಪ್ರಚಾರ ಸಮಾವೇಶದಲ್ಲಿ ಮಾಜಿ ಪ್ರಧಾನಿ ದೇವೆಗೌಡರು ಸಹ ಪಾಲ್ಗೊಂಡಿದ್ದರು.

ಸಮಾವೇಶಕ್ಕೂ ಮೊದಲು ಐಬಿ ಸರ್ಕಲ್ ನಿಂದ ರಾಮಚಂದ್ರಪ್ಪ ಬಯಲು ರಂಗಮಂದಿರದ ತನಕ ಬೃಹತ್ ಜಾಥಾ ನಡೆಸಲಾಗಿತ್ತು. ಈ ಜಾಥಾದಲ್ಲಿ ಮಾಜಿಸಿಎಂ ಕುಮಾರಸ್ವಾಮಿ ಸಹ ಪಾಲ್ಗೊಂಡಿದ್ದರು. ಬಳಿಕ ನಡೆದ ಸಮಾವೇಶದಲ್ಲಿ ಇದ್ದಕ್ಕಿದ್ದಂತೆ ಅಮ್ಮಾಜಮ್ಮಾ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿರಂತರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದ ಅಮ್ಮಾಜಮ್ಮಾ ವಯೋಸಹಜ ಅನಾರೋಗ್ಯ ಹಾಗೂ ಸುಸ್ತಿನಿಂದ ಕುಸಿದು ಬಿದ್ದಿರಬಹುದೆಂದು ಶಂಕಿಸಲಾಗಿದೆ. ಸತ್ಯನಾರಾಯಣ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಅವರ ಪತ್ನಿ ಅಮ್ಮಾಜಮ್ಮಾಗೆ ಜೆಡಿಎಸ್ ಟಿಕೆಟ್ ನೀಡಿದೆ.

ಜೆಡಿಎಸ್ ಅಮ್ಮಾಜಮ್ಮಾಗೆ ಟಿಕೇಟ್ ಘೋಷಣೆ ಮಾಡಿದ ದಿನವೇ ಅವರು ಕೊವೀಡ್ ಗೆ ತುತ್ತಾಗಿದ್ದು, ಬಳಿಕ ಚೇತರಿಸಿಕೊಂಡಿದ್ದರು. ಬಿಜೆಪಿಯಿಂದ ಡಾ.ರಾಜೇಶ್ ಗೌಡ್, ಕಾಂಗ್ರೆಸ್ ನಿಂದ ಟಿ.ಬಿ.ಜಯಚಂದ್ರ ಕಣದಲ್ಲಿದ್ದಾರೆ. ಇನ್ನು ಸಮಾವೇಶದಲ್ಲೇ ಅಮ್ಮಾಜಮ್ಮಾ ಕುಸಿದು ಬಿದ್ದಿರೋದಿಕ್ಕೆ ಹಾಗೂ ಅವರ ಅನಾರೋಗ್ಯಕ್ಕೆ ಮಾಜಿ ಪ್ರಧಾನಿ ದೇವೆಗೌಡರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.