ಬೆಂಗಳೂರು: ಕೊರೋನಾ ಅಟ್ಟಹಾಸ ಆರಂಭವಾದಾಗಿನಿಂದ ಐಷಾರಾಮಿ ಮಾಲ್, ಶಾಪಿಂಗ್ ಕಾಂಪ್ಲೆಂಕ್ಸ್ ಗಳಿಗಿಂತ ಹೆಚ್ಚು ಸಂಕಷ್ಟಕ್ಕಿಡಾಗಿರೋರು ಸಣ್ಣ ಪ್ರಮಾಣದ ಕೈಗಾರಿಕೆಗಳು ಮತ್ತು ಕಾರ್ಮಿಕರು. ಅಂತಹ ತುತ್ತಿನ ಊಟಕ್ಕೆ ದುಡಿಯುವ ನೇಕಾರರ ಬೆಂಬಲಕ್ಕೆ ನಿಂತಿರುವ ಬ್ಲ್ಯಾಕ್ ಕೋನ್ರಾ ದುನಿಯಾ ವಿಜಯ್, ನಾಡು-ನುಡಿ ಮಾತ್ರವಲ್ಲ ನೀವು ಹಾಕುವ ಬಟ್ಟೆಯೂ ಕನ್ನಡವಾಗಿರಲಿ ಎಂದಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ದುನಿಯಾ ವಿಜಯ್, ನಾವು ಮಾತಾಡೋ ಭಾಷೆ ಕನ್ನಡ. ಕುಡಿಯೋ ನೀರು ಕಾವೇರಿ. ನಿಂತಿರೋ ನೆಲ ಕರ್ನಾಟಕವಾಗಿರುವಾಗ ನಾವು ಹಾಕೋ ಬಟ್ಟೆ ಕೂಡ ಕನ್ನಡವಾಗಿರಬೇಕು. ಇದು ನಮ್ಮ ಜನ ನಮ್ಮ ನೆಲದಲ್ಲಿ ಬೆಳೆದ ಹತ್ತಿಯಿಂದಚರಕದಲ್ಲಿ ನೂಲು ತೆಗೆದು, ಕೈಮಗ್ಗದಲ್ಲಿ ನೇಯ್ದು ತಯಾರಿಸಿದ ನಮ್ಮ ಜನರ ಬೆವರಿನ ಫಲ. ನೇಕಾರರ ಬಟ್ಟೆ ಖರೀದಿಸಿ ಪ್ರೋತ್ಸಾಹಿಸಿ ಎಂದಿದ್ದಾರೆ.
ಅಷ್ಟೇ ಅಲ್ಲ ನೀವೆಲ್ಲರೂ ಒಂದೊಂದು ಬಟ್ಟೆ ಖರೀದಿಸಿದರೂ ಸಹಾಯವಾಗುತ್ತದೆ. ಹನಿ-ಹನಿಗೂಡಿದರೇ ಹಳ್ಳ ಎನ್ನುವ ಹಾಗೆ ಎಂದಿರುವ ದುನಿಯಾ ವಿಜಯ್, ಬೆಂಗಳೂರಿನ ಸೌತ್ ಎಂಡ್ ಸರ್ಕಲ್, ಸೀತಾ ಸರ್ಕಲ್, ಕೆಂಗೇರಿ, ಮಲ್ಲೇಶ್ವರಂನ ದೇಸಿ ಅಂಗಡಿಗಳಲ್ಲಿ ಬಟ್ಟೆ ಖರೀದಿಸಿ ನೇಕಾರರಿಗೆ ನೆರವಾಗಿ ನಮ್ಮತನ ಉಳಿಸಿಕೊಳ್ಳೋಣ ಎಂದು ಮನವಿ ಮಾಡಿದ್ದಾರೆ.

ಕೇವಲ ಅಭಿಮಾನಿಗಳಿಗೆ ಹೇಳಿರೋದು ಮಾತ್ರವಲ್ಲ ತಾವು ಕೂಡ ನೇಕಾರರಿಂದ ಖರೀದಿಸಿದ ಖಾದಿ ಜುಬ್ಬಾ ಪೈಜಾಮ್ ದಲ್ಲಿ ನಿಂತು ಸಖತ್ ಪೋಸು ನೀಡಿದ್ದಾರೆ. ಖಡಕ್ ಲುಕ್ ಗೆ ಖಾದಿ ಬಟ್ಟೆ ಸಖತ್ ಸೂಟ್ ಆಗ್ತಿದ್ದು, ದುನಿಯಾ ವಿಜಿ ಮತ್ತಷ್ಟು ಖಡಕ್ ಆಗಿ ಕಾಣ್ತಿದ್ದಾರೆ.

ಇತ್ತೀಚಿಗೆ ನಾಡು-ನುಡಿ ವಿಚಾರದಲ್ಲಿ , ಕನ್ನಡಿಗರ, ಬಡವರ ರೈತರ ವಿಚಾರದಲ್ಲಿ ಸಖತ್ ಆಕ್ಟಿವ್ ಆಗಿರೋ ದುನಿಯಾ ವಿಜಿ, ಹಿಂದಿ ದಿವಸ್ ಆಚರಣೆ ವಿರುದ್ಧವೂ ಧ್ವನಿ ಎತ್ತಿದ್ದರು. ಈಗ ನೇಕಾರನ್ನು ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಸಹಾಯಕ್ಕೆ ನಿಂತಿದ್ದಾರೆ.

ಸಧ್ಯ ಸಲಗ ಚಿತ್ರದಲ್ಲಿ ಬ್ಯುಸಿಯಾಗಿರುವ ದುನಿಯಾ ವಿಜಯ್, ಸಪ್ಟೆಂಬರ್ ನಲ್ಲಿ ಪುನಿತ್ ರಾಜಕುಮಾರ್ ಅವರಿಂದ ಸಲಗ ಚಿತ್ರದ ಮಳೆಯೇ ಮಳೆಯೇ ಹಾಡು ಬಿಡುಗಡೆ ಮಾಡಿಸಿದ್ದರು.