ಹಾಲಿ ಸಂಸದೆ ಹಾಗೂ ಮಾಜಿ ಸಿಎಂ ನಡುವೆ ಸಮರಕ್ಕೆ ಕಾರಣವಾಗಿದ್ದ ಕೆಆರ್ಎಸ್ ಆಣೆಕಟ್ಟು ಹಾಗು ಕಲ್ಲುಗಣಿಗಾರಿಕೆ ವಿಚಾರ ಸದ್ಯಕ್ಕೆ ನಿಲ್ಲುವ ಲಕ್ಷಣವಿಲ್ಲ. ಕಳೆದ ವಾರ ಕೆಲ ಕಲ್ಲುಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿದ್ದ ಸಂಸದೆ ಸುಮಲತಾ ಜುಲೈ 13 ಹಾಗೂ 14 ರಂದು ಬೇಬಿ ಬೆಟ್ಟ, ಕೆಆರ್ಎಸ್ ಆಣೆಕಟ್ಟಿಗೆ ಭೇಟಿ ನೀಡಲಿದ್ದು, ವಿವಾದ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

ಸುಮಲತಾ ಪ್ರವಾಸದ ವಿವರವನ್ನು ಸಂಸದೆ ಸುಮಲತಾ ಕಚೇರಿ ಬಿಡುಗಡೆ ಮಾಡಿದ್ದು, ಇದರ ಪ್ರಕಾರ ಜುಲೈ 14 ರಂದು ಸಂಸದೆ ಸುಮಲತಾ ಕೃಷ್ಣರಾಜಸಾಗರ ಆಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಲಿದ್ದು, ಬಳಿಕ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.

14 ರಂದು ಕೆಆರ್ಎಸ್ ವೀಕ್ಷಣೆ ಬಳಿಕ ಸುಮಲತಾ ಅವರು, ಕಲ್ಲುಗಣಿಗಾರಿಕೆ ನಡೆಯುತ್ತಿದೆ ಎನ್ನಲಾಗಿರುವ ಬೇಬಿ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ಇದಕ್ಕೂ ಮುನ್ನ ಮಂಗಳವಾರ ಮಂಡ್ಯದಲ್ಲಿ ಸಂಸದೆ ಸುಮಲತಾ, ಮಧ್ಯಾಹ್ನ 2.30 ಕ್ಕೆ ಜಿಲ್ಲೆಯ ಕಲ್ಲುಗಣಿಗಾರಿಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು, ಹಿರಿಯ ಭೂಗರ್ಭತಜ್ಞರು, ಪರಿಸರವಾದಿಗಳು,ಉಪವಿಭಾಗಾಧಿಕಾರಿಗಳು ಸೇರಿದಂತೆ ಹಲವರ ಜೊತೆ ಸಭೆ ನಡೆಸಿ ವಿವರಣೆ ಪಡೆಯಲಿದ್ದಾರೆ.

ಈಗಾಗಲೇ ಸಂಸದೆ ಸುಮಲತಾ ಹಾಗೂ ಮಾಜಿಸಿಎಂ ಎಚ್ಡಿಕೆ ನಡುವಿನ ವಿವಾದ ತಾರಕಕ್ಕೇರಿದೆ. ಇನ್ನು ಸುಮಲತಾ ಆಣೆಕಟ್ಟು ಹಾಗೂ ಕಲ್ಲುಗಣಿಗಾರಿಕೆ ಸ್ಥಳಕ್ಕೆ ಭೇಟಿ ನೀಡಲಿರೋದು ಮತ್ತಷ್ಟು ಕುತೂಹಲ ಮೂಡಿಸಿದ್ದು, ಭೇಟಿ ಬಳಿಕ ಸುಮಲತಾ ನೀಡೋ ಹೇಳಿಕೆ ದೊಡ್ಡ ಸಂಚಲನ ಮೂಡಿಸುವ ನೀರಿಕ್ಷೆ ಇದೆ.