ರಾಜ್ ಕೋಟ್ : ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 6 ಮಂದಿ ಕೊರೊನಾ ಸೋಂಕಿತರರು ಬೆಂಕಿಯ ಕೆನ್ನಾಲಗೆಗೆ ಸುಟ್ಟು ಕರಕಲಾಗಿದ್ದಾರೆ.

ಗುಜರಾತ್ ನ ರಾಜ್ ಕೋಟ್ ಜಿಲ್ಲೆಯ ಮಾವ್ಡಿಯ ಉದಯ್ ಶಿವಾನಂದ್ ಕೋವಿಡ್-19 ಆಸ್ಪತ್ರೆಯಲ್ಲಿ ಈ ದುಂತರ ಸಂಭವಿಸಿದೆ. ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಒಟ್ಟು 33 ಮಂದಿ ಕೊರೊನಾ ಸೋಂಕಿತರರು ಚಿಕಿತ್ಸೆಯನ್ನು ಪಡೆಯುತ್ತಿದ್ದರು, ಶುಕ್ರವಾರ ನಿಗಾ ಘಟಕದಲ್ಲಿ ಮುಂಜಾನೆ ಬೆಂಕಿ ಕಾಣಿಸಿಕೊಂಡಿತ್ತು.

ನೋಡು ನೋಡುತ್ತಿದ್ದಂತೆ ಬೆಂಕಿ ಅತೀ ವೇಗವಾಗಿ ಹಬ್ಬಿದ್ದು, ಆರು ಮಂದಿಯ ಪ್ರಾಣ ಕಿತ್ತುಕೊಂಡಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಕಾರ್ಯಾಚರಣೆ ನಡೆಸಿ ಹಲವರನ್ನು ರಕ್ಷಿಸಿದ್ದಾರೆ. ಕೊರೊನಾ ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಬೇರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ರಕ್ಷಣಾ ಸಿಬ್ಬಂದಿಗಳು ತಿಳಿಸಿದ್ದಾರೆ. ಆದರೆ ಬೆಂಕಿ ಕೆನ್ನಾಲಿಗೆಗೆ ಆಸ್ಪತ್ರೆಯ ವಾರ್ಡ್ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೇ ಸಾವನಪ್ಪಿದವರಿಗೆ ನಾಲ್ಕು ಲಕ್ಷ ಪರಿಹಾರ ಘೋಷಿಸಿದ್ದಾರೆ.

ಇನ್ನು ಬೆಂಕಿ ಅವಘಡಕ್ಕೆ ಕಾರಣ ಏನು ಎಂದು ತಿಳಿದುಬಂದಿಲ್ಲ. ಆಗಸ್ಟ್ನಲ್ಲಿ ಗುಜರಾತ್ನ ಅಹಮದಾಬಾದ್ನಲ್ಲಿ ಆಸ್ಪತ್ರೆಯೊಂದರ ನಾಲ್ಕನೇ ಮಹಡಿಯಲ್ಲಿ ಬೆಂಕಿ ಅವಘಡ ಹಿನ್ನೆಲೆ ಎಂಟು ಮಂದಿ ಕೊರೊನಾ ರೋಗಿಗಳು ಸಾವನಪ್ಪಿದ್ದರು. ಈ ಘಟನೆ ಬಳಿಕ ಇದೀಗ ಮತ್ತೊಂದು ಅವಘಡ ನಡೆದಿದೆ.