ರಾಜ್ಯವೂ ಸೇರಿದಂತೆ ಕಳೆದ ಒಂದೂವರೆ ವರ್ಷದಿಂದ ಕೊರೋನಾ ಸಂಕಷ್ಟ ಆವರಿಸಿಕೊಂಡಿದೆ. ಹೀಗಾಗಿ ಜನರು ಬದುಕಿಗಾಗಿ ಪರದಾಡುತ್ತಿದ್ದಾರೆ. ಇದಕ್ಕೆ ಮೃಗಾಲಯದ ಪ್ರಾಣಿಗಳು ಹೊರತಲ್ಲ. ರಾಜ್ಯದ ಝೂಗಳು ಕೊರೋನಾದಿಂದ ಸಂಕಷ್ಟಕ್ಕೊಳಗಾಗಿರೋದರಿಂದ ಅವುಗಳ ನಿರ್ವಹಣೆಗೆ ನೆರವಾಗಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ ಮನವಿ ಮಾಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ ಪ್ರಾಣಿಪ್ರಿಯರು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ತಮ್ಮ ಮೈಸೂರಿನ ಫಾರಂ ಹೌಸ್ ನಲ್ಲಿ ಕುದುರೆ,ಗಿಳಿ ಸೇರಿದಂತೆ ಹಲವು ರೀತಿಯ ಪ್ರಾಣಿಗಳು ಸಾಕಿರೋ ದರ್ಶನ್, ಮೈಸೂರು ಮೃಗಾಲಯದ ಹಲವು ಪ್ರಾಣಿಗಳನ್ನ ದತ್ತು ಕೂಡ ಪಡೆದಿದ್ದಾರೆ.

ಈಗ ರಾಜ್ಯದಲ್ಲಿರುವ ಒಟ್ಟು 9 ಮೃಗಾಲಯಗಳ ಸಂಕಷ್ಟಕ್ಕೆ ಮರುಗಿದ ದರ್ಶನ, ಪ್ರಾಣಿಗಳನ್ನು ಸಾಕಲು ಸಹಾಯಮಾಡಿ ಎಂದು ಪ್ರಾಣಿಪ್ರಿಯರಲ್ಲಿ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ 9 ಮೃಗಾಲಯವಿದ್ದು, ಇದರಲ್ಲಿ 5 ಸಾವಿರಕ್ಕೂ ಅಧಿಕ ಪ್ರಾಣಿಗಳಿವೆ.

ಆದರೆ ಕೊರೋನಾ ಲಾಕ್ ಡೌನ್ ಜಾರಿಯಾದಾಗಿನಿಂದ ಪ್ರವಾಸಿಗರು ಝೂಗೆ ಭೇಟಿ ನೀಡದೇ ಇರೋದರಿಂದ ಪ್ರಾಣಿಗಳನ್ನು ಸಾಕೋದು ಹಾಗೂ ಅದರ ಕೆಲಸ ಮಾಡುವ ಕಾರ್ಮಿಕರಿಗೆ ಝೂ ಸಿಬ್ಬಂದಿಗೆ ಸಂಬಳ ನೀಡೋದು ಕಷ್ಟವಾಗುತ್ತಿದೆ.

ಹೀಗಾಗಿ ಈ ಪ್ರಾಣಿಸಂಗ್ರಹಾಲಯದ ಪ್ರಾಣಿಗಳ ನೆರವಿಗೆ ಧಾವಿಸಿ ಎಂದಿರುವ ದರ್ಶನ್, ಝೂನಲ್ಲಿರೋ ಪ್ರಾಣಿಗಳನ್ನು ದತ್ತು ಪಡೆಯಿರಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ಗಿಳಿಗೆ ವಾರ್ಷಿಕ 1 ಸಾವಿರರೂಪಾಯಿಗಳಾದ್ರೇ, ಹುಲಿಗೆ 1 ಲಕ್ಷ ಆನೆಗೆ 1.75 ಲಕ್ಷ. ಹೀಗೆ ವಿವಿಧ ಹಂತದಲ್ಲಿ ಪ್ರಾಣಿ,ಪಕ್ಷಿಗಳು ದತ್ತು ಪಡೆಯಲು ಸಿಗುತ್ತವೆ.
https://www.facebook.com/223631631870616/posts/831496914417415/?sfnsn=wiwspwa
ಕರ್ನಾಟಕ ಝೂ ಎಂಬ ಮೊಬೈಲ್ ಆಪ್ ಅಥವಾ ನಿಮ್ಮ ಹತ್ತಿರದ ಮೃಗಾಲಯಕ್ಕೆ ತೆರಳಿ ಯಾವುದಾದರೂ ಒಂದು ನಿಮ್ಮ ನೆಚ್ಚಿನ ಪ್ರಾಣಿ-ಪಕ್ಷಿಯನ್ನು ದತ್ತು ಪಡೆಯಿರಿ. ಆ ಮೂಲಕ ಮುಂದಿನ ತಲೆಮಾರಿಗೆ ಪ್ರಾಣಿ-ಪಕ್ಷಿಗಳನ್ನು ಉಳಿಸುವ ಮಹತ್ಕಾರ್ಯ ಮಾಡಿ ಎಂದು ದರ್ಶನ ಮನವಿ ಮಾಡಿದ್ದಾರೆ.