ಮಡಿಕೇರಿ : ಕಾಫಿತೋಟಕ್ಕೆ ಸೌದೆ ತರಲು ತೆರಳುತ್ತಿದ್ದ ವೇಳೆಯಲ್ಲಿ ದಾಳಿ ನಡೆಸಿದ ಹುಲಿ ಬಾಲಕನೋರ್ವನನ್ನು ಕೊಂದು ಹಾಕಿರುವ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಬಳಿಯಲ್ಲಿ ನಡೆದಿದೆ.
ಶ್ರೀಮಂಗಲ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 8 ನೇ ತರಗತಿಯ ವಿದ್ಯಾರ್ಥಿಯಾಗಿರುವ ಅಯ್ಯಪ್ಪ (14 ವರ್ಷ) ಎಂಬಾತನೇ ಹುಲಿದಾಳಿಗೆ ಬಲಿಯಾದ ವಿದ್ಯಾರ್ಥಿ.
ಕೋಟ್ರಾಂಗಡ ಅಶ್ವತ್ ಎಂಬವರ ಕಾಫಿ ತೋಟದಲ್ಲಿ ಸೌದೆಗಾಗಿ ತೆರಳಿದ ಸಂದರ್ಭದಲ್ಲಿ ಸಂಜೆ 5.30 ವೇಳೆ ತೋಟದಲ್ಲಿ ಎದುರಾದ ಹುಲಿವೊಂದು ಬಾಲಕನ ಮೇಲೆರಗಿ ದಾಳಿ ನಡೆಸಿದೆ. ಕುಮಟೂರಿನ ಕೋಟ್ರಾಂಗಡ ಬಿದ್ದಪ್ಪ ಅವರ ತೋಟ ಕಾರ್ಮಿಕರಾಗಿರುವ ಪಣಿ ಎರವರ ಬಸವ ಅವರ ಪುತ್ರ ಅಯ್ಯಪ್ಪ ಎಂಬ ಬಾಲಕನೇ ಹುಲಿ ದಾಳಿಯಿಂದಾಗಿ ದಾರುಣವಾಗಿ ಸಾವನ್ನಪ್ಪಿದ್ದಾನೆ.
ಕಳೆದ ಹಲವು ಸಮಯಗಳಿಂದಲೂ ದಕ್ಷಿಣ ಕೊಡಗಿನಾದ್ಯಂತ ನಿರಂತರವಾಗಿ ಜಾನುವಾರುಗಳನ್ನು ಬಲಿ ಪಡೆಯುತ್ತಿದ್ದ ಹುಲಿ ಇದೀಗ ನರಬಲಿ ಪಡೆದಿರೋದು ಜನರ ಆತಂಕಕ್ಕೆ ಕಾರಣವಾಗಿದೆ. ಹುಲಿದಾಳಿಗೆ ಬಾಲಕ ಬಲಿಯಾಗಿರುವ ಕುರುಹು ಪತ್ತೆಯಾಗಿದ್ದು, ಜನರು ಅರಣ್ಯ ಇಲಾಖೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.