ಬೆಂಗಳೂರು : ಸ್ಯಾಂಡಲ್ವುಡ್ ನಟ ಪುನೀತ್ ರಾಜ್ ಕುಮಾರ್ ಅವರ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನು ತುಂಬಿದೆ. ಅಪ್ಪುವನ್ನು ಮಗುವಾಗಿ ಇದ್ದಾಗಿನಿಂದಲೂ ನೋಡಿದ್ದೇವೆ. ಉತ್ತಮ ಭವಿಷ್ಯವಿತ್ತು. ಕಡಿಮೆ ವಯಸ್ಸಿನಲ್ಲಿಯೇ ಬಹು ಎತ್ತರಕ್ಕೆ ಬೆಳೆದ ನಟ ಪುನಿತ್ ರಾಜ್ ಕುಮಾರ್. ಆದರೆ ವಿಧಿ ಅವರ ಬಾಳಲ್ಲಿ ಕ್ರೂರವಾಗಿ ಆಟವಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ವಿಕ್ರಂ ಆಸ್ಪತ್ರೆಗೆ ಭೇಟಿ ನೀಡಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರಿಗೆ ಹೃದಯಾಘಾತ ಆಗುತ್ತಿದ್ದಂತೆಯೇ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರನ್ನು ಬದುಕಿಸಲು ಬೇಕಾದ ಎಲ್ಲಾ ಪ್ರಯತ್ನಗಳನ್ನೂ ಮಾಡಿದ್ದೇವೆ. ಆದರೆ ಅವರು ಬಾರದ ಲೋಕಕ್ಕೆ ಪಯಣಿಸಿದ್ದಾರೆ.
ಅತ್ಯಂತ ಕಡಿಮೆ ವಯಸ್ಸಿನಲ್ಲಿಯೇ ಅತ್ಯಂತ ಎತ್ತರದ ಸಾಧನೆಯನ್ನು ಮಾಡಿದ್ದಾರೆ. ಪುನಿತ್ ನಿಧನಕ್ಕೆ ರಾಜ್ಯದ ಜನತೆ ದುಃಖದಲ್ಲಿದ್ದಾರೆ. ಯುವಕರಿಗೆ ಮಾದರಿಯಾಗಿದ್ದವರು. ನಿನ್ನೆಷ್ಟಯೇ ಭಜರಂಗಿ -2 ಸಿನಿಮಾದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಪುನೀತ್ ರಾಜ್ ಕುಮಾರ್ ಅವರು ಶಿವರಾಜ್ ಕುಮಾರ್ ಹಾಗೂ ಯಶ್ ಅವರ ಜೊತೆಗೆ ಕುಣಿದು ಕುಪ್ಪಳಿಸಿದ್ದರು. ನವೆಂಬರ್ 1 ರಂದು ಅವರ ವೆಬ್ಸೈಟ್ ಉದ್ಘಾಟನೆಯ ಕುರಿತು ಇಂದು ನನ್ನ ಹಾಗೂ ಪುನೀತ್ ಭೇಟಿಗೆ ಸಮಯ ನಿಗದಿಯಾಗಿತ್ತು. ಆದರೆ ಇಂದು ಪುನೀತ್ ಇಲ್ಲಾ ಅನ್ನೋ ಸುದ್ದಿಯನ್ನು ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಪುನೀತ್ ರಾಜ್ ಕುಮಾರ್ ನಿಧನ ನನಗೆ ಆಘಾತವನ್ನು ನೀಡಿದೆ. ಕಲಾರಂಗಕ್ಕೆ ದೊಡ್ಡ ಹೊಡೆತವನ್ನು ಕೊಟ್ಟಿದೆ. ನಾಯಕ ನಟನಾಗಿ ಮಾತ್ರವಲ್ಲದೇ, ನಾಯಕತ್ವ ಗುಣವನ್ನು ಹೊಂದಿರುವ ನಟನನ್ನು ನಾವು ಕಳೆದುಕೊಂಡಿದ್ದೇವೆ. ಕನ್ನಡದ ಮೇರು ನಟ ಡಾ.ರಾಜ್ ಕುಮಾರ್ ಅವರ ಸಂಸ್ಕಾರದಲ್ಲಿಯೇ ಬೆಳೆದವರು, ತಂದೆ ಹಾಕಿ ಕೊಟ್ಟ ಹಾದಿಯಲ್ಲಿಯೇ ನಡೆಯುತ್ತಿದ್ದವರು. ವಿನಯ ಪೂರ್ವಕವಾದ ನಡೆ ನುಡಿಯನ್ನು ಹೊಂದಿದವರು. ನನಗೆ ರಾಜ್ ಕುಮಾರ್ ಅವರ ಕುಟುಂಬಕ್ಕೆ ಹಳೆಯ ಸಂಬಂಧವಿದೆ. ನನಗೆ ರಾಜ್ ಕುಮಾರ್ ಕುಟುಂಬಕ್ಕೆ ಹಳೆಯ ಸಂಬಂಧವಿದೆ. ಅಪ್ಪು ಅವರನ್ನು ನಾನು ಸಣ್ಣ ಮಗುವಾಗಿ ನೋಡಿದ್ದೆ. ಅವರಿಗೆ ಭವ್ಯ ಭವಿಷ್ಯವಿತ್ತು. ವಿಧಿ ಅವರ ಬಾಳಲ್ಲಿ ಕ್ರೂರ ಆಟವಾಡಿದೆ ಎಂದಿದ್ದಾರೆ.
ಮೇರು ನಟನ ಸಾವು ರಾಜ್ಯದ ಜನರಿಗೆ ಸಹಜವಾಗಿಯೇ ದುಖಃವಾಗಿದೆ. ಯಾರೂ ಕೂಡ ಸಂಯಮವನ್ನು ಕಳೆದುಕೊಳ್ಳಬಾರದು. ಯಾವುದೇ ಅಹಿತರ ಘಟನೆಯು ನಡೆಯದ ರೀತಿಯಲ್ಲಿ ಅವರನ್ನು ಶಾಂತಿಯಿಂದಲೇ ಕಳುಹಿಸಿ ಕೊಡೋಣಾ ಎಂದಿದ್ದಾರೆ. ಸರಕಾರ ಅವರ ಅಂತ್ಯಕ್ರೀಯೆಗೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡುತ್ತದೆ. ನಾಳೆ ಇಡೀ ದಿನ ಪುನೀತ್ ರಾಜ್ ಕುಮಾರ್ ಅವರ ಪಾರ್ಥಿವ ಶರೀರವನ್ನು ಕಂಠೀರವ ಕ್ರೀಡಾಂಗಣದಲ್ಲಿ ಪಾರ್ಥಿವ ಶರೀರವನ್ನು ಇರಿಸಲಾಗುತ್ತದೆ. ಅಭಿಮಾನಿಗಳು ಅಂತಿಮ ದರ್ಶನವನ್ನು ಪಡೆಯಬಹುದಾಗಿದೆ ಎಂದಿದ್ದಾರೆ.