ಉಡುಪಿ : ಕೋವಿಡ್ ವೈರಸ್ ರೋಗ ಲಕ್ಷಣ ಇರುವ ರೋಗಿಗಳನ್ನು ಪರೀಕ್ಷೆಗೆ ಒಳಪಡಿಸದೆ ಸ್ಥಳೀಯವಾಗಿ ಚಿಕಿತ್ಸೆ ನೀಡುವುದು ಕಂಡು ಬಂದರೆ ಅಂತಹ ವೈದ್ಯರ ವಿರುದ್ದ ಕಠಿಣ ಕ್ರಮಕೈಗೊಳ್ಳಲಾಗು ವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಎಚ್ಚರಿಕೆ ನೀಡಿದ್ದಾರೆ.
ಜ್ವರ, ಶೀತ ಮತ್ತು ಕೆಮ್ಮು ಸೇರಿದಂತೆ ಇತರ ಕೊರೊನಾ ರೋಗ ಲಕ್ಷಣ ಹೊಂದಿರುವ ರೋಗಿಗಳು ಸ್ಥಳೀಯ ವೈದ್ಯರ ಬಳಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಕೊರೊನಾ ಸೋಂಕಿತ ವ್ಯಕ್ತಿಗಳು ಕೊನೆಯ ಕ್ಷಣದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಆಗುತ್ತಿರುವುದು ಕಂಡುಬರುತ್ತಿದೆ. ಖಾಸಗಿ ವೈದ್ಯರು ಕೊರೊನಾ ಟೆಸ್ಟ್ ಮಾಡದೆ ಚಿಕಿತ್ಸೆ ನೀಡುವಂತಿಲ್ಲ. ಅಲ್ಲದೇ ಜನರು ಆರೋಗ್ಯ ಪರಿಸ್ಥಿತಿ ಗಂಭೀರವಾದ ನಂತರ ಆಸ್ಪತ್ರೆಗೆ ದಾಖಲಾಗುವ ಬದಲು ಆದಷ್ಟು ಬೇಗನೇ ಚಿಕಿತ್ಸೆ ಪಡೆದುಕೊಳ್ಳಿ ಎಂದಿದ್ದಾರೆ.
ಆರಂಭದಲ್ಲಿಯೇ ಸೋಂಕು ಪತ್ತೆಯಾದರೆ ಚಿಕಿತ್ಸೆ ನೀಡುವುದು ಸುಲಭ. ಇದರಿಂದ ಚೇತರಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು. ಸರಿಯಾದ ಔಷಧಿ ಸಿಗದಿದ್ದರೆ ರೋಗಲಕ್ಷಣಗಳು ತೀವ್ರವಾಗುತ್ತವೆ. ಒಟಿಸಿ ಟ್ಯಾಬ್ಲೆಟ್ ಗಳು ತಾತ್ಕಾಲಿಕ ಪರಿಹಾರವನ್ನು ಮಾತ್ರ ನೀಡುತ್ತದೆ. ಹೀಗಾಗಿ ಕೊರೋನವೈರಸ್ ರೋಗ ಲಕ್ಷಣಗಳು ಕಂಡುಬಂದರೆ, ಅಂತಹ ರೋಗಿಗಳನ್ನು ಪರೀಕ್ಷೆಗೆ ಒಳಗಾಗುವಂತೆ ವೈದ್ಯರು ಸೂಚಿಸ ಬೇಕು. ಯಾವುದೇ ಪ್ರಕರಣಗಳಿಗೆ ಸ್ಥಳೀಯವಾಗಿ ಚಿಕಿತ್ಸೆ ನೀಡಿದರೆ ಮತ್ತು ನಂತರ ಗಂಭೀರವಾಗಿ ರೋಗಿಯು ಮೃತಪಟ್ಟರೆ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಲಾಗುವುದು ಎಂದು ಡಿಸಿ ಎಚ್ಚರಿಸಿದ್ದಾರೆ.
