ಕೋಲಾರ : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣ ಹೆಚ್ಚುತ್ತಿದೆ. ಅದ್ರಲ್ಲೂ ಕಾಲೇಜುಗಳೇ ಕೊರೊನಾ ಹಾಟ್ಸ್ಪಾಟ್ ಆಗಿ ಪರಿಣಮಿಸಿದೆ. ಬೆಂಗಳೂರು, ಹುಬ್ಬಳ್ಳಿ, ಮಂಗಳೂರು ಬೆನ್ನಲ್ಲೇ ಕೋಲಾರದ ದೇವರಾಜ ಅರಸು ಮೆಡಿಕಲ್ ಕಾಲೇಜಿನ 33 ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ (33 Students Corona) ಸೋಂಕು ದೃಢಪಟ್ಟಿದೆ.
ಮೆಡಿಕಲ್ ಕಾಲೇಜಿನ ಕೆಲವು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕಿನ ಲಕ್ಷಣ ಪತ್ತೆಯಾದ ಹಿನ್ನೆಲೆಯಲ್ಲಿ ಕೊರೊನಾ ಟೆಸ್ಟ್ ಮಾಡಿಸಲಾಗಿತ್ತು. ಮೆಡಿಕಲ್ ಕಾಲೇಜಿನ 1105 ವಿದ್ಯಾರ್ಥಿ ಗಳನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗಿದ್ದು, ಈ ಪೈಕಿ 33 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದೀಗ ಕಾಲೇಜಿನ ಹಾಸ್ಟೆಲ್ಗಳನ್ನು ಕಂಟೋನ್ಮೆಂಟ್ ಝೋನ್ ಮಾಡಲಾಗಿದೆ. ಕಾಲೇಜಿನ ವಿದ್ಯಾರ್ಥಿಗಳನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದ್ದು, ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಕಾಲೇಜಿನ ಇತರ ವಿದ್ಯಾರ್ಥಿಗಳ ಮೇಲೆಯೂ ನಿಗಾ ಇರಿಸಲಾಗುತ್ತಿದೆ. ಸೋಂಕು ಹರಡದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ.
ಫೆಬ್ರವರಿಯಿಂದ ದೇಶದಲ್ಲಿ ಕೊರೊನಾ ಮೂರನೇ ಅಲೆ
ಕೊರೊನಾ ಓಮಿಕ್ರಾನ್ ರೂಪಾಂತರಿ ವಿಶ್ವಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚಲು ಈಗಾಗಲೇ ಆರಂಭಿಸಿದ್ದು ಆತಂಕ ಮನೆ ಮಾಡಿದೆ. ದೇಶದಲ್ಲಿ ಓಮಿಕ್ರಾನ್ ಅಪಾಯದ ಬಗ್ಗೆ ಮುನ್ಸೂಚನೆ ನೀಡಿದ ಕೋವಿಡ್ 19 ಸೂಪರ್ ಮಾಡೆಲ್ ಸಮಿತಿ ಸದಸ್ಯರು ಕೊರೊನಾ ಡೆಲ್ಟಾ ರೂಪಾಂತರಿಯ ಜಾಗಕ್ಕೆ ಸಂಪೂರ್ಣವಾಗಿ ಓಮಿಕ್ರಾನ್ ಬಂದ ಬಳಿಕ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಎಂದು ಹೇಳಿದ್ದಾರೆ. ಅಲ್ಲದೆ ಮುಂದಿನ ವರ್ಷದ ಆರಂಭದಲ್ಲಿಯೇ ಕೋವಿಡ್ ಮೂರನೇ ಅಲೆ ಬರುವ ಸಾಧ್ಯತೆ ಇದೆ ಎಂದೂ ಹೇಳಿದ್ದಾರೆ.
ರಾಷ್ಟ್ರೀಯ ಕೋವಿಡ್ 19 ಸೂಪರ್ ಮಾಡೆಲ್ ಸಮಿತಿ ಮುಖ್ಯಸ್ಥರಾಗಿರುವ ವಿದ್ಯಾಸಾಗರ್ , ದೇಶದಲ್ಲಿ ಮೂರನೇ ಅಲೆಯು ಕೋವಿಡ್ ಒಮಿಕ್ರಾನ್ ರೂಪಾಂತರಿಯನ್ನು ಹೊಂದಿರುತ್ತದೆ. ಆದರೆ ಇದು ಎರಡನೇ ಅಲೆಗಿಂತ ಸೌಮ್ಯವಾಗಿ ಇರಲಿದೆ ಎಂದು ಹೇಳಿದ್ದಾರೆ. ದೇಶದಲ್ಲಿ ಕೊರೊನಾ ಮೂರನೇ ಅಲೆಯು ಮುಂದಿನ ವರ್ಷದ ಆರಂಭದಲ್ಲಿಯೇ ಅಪ್ಪಳಿಸುವ ನಿರೀಕ್ಷೆ ಇದೆ. ಆದರೆ ಇದು ಎರಡನೇ ಅಲೆಗಿಂತ ಸೌಮ್ಯವಾಗಿ ಇರಲಿದೆ. ದೇಶದ ಜನತೆಯಲ್ಲಿ ಇದೀಗ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಇರುವುದರಿಂದ ಕೋವಿಡ್ ಮೂರನೇ ಅಲೆಯು ಅಷ್ಟೊಂದು ಸಮಸ್ಯೆಯನ್ನು ತಾರಲಾರದು. ಖಂಡಿತವಾಗಿಯೂ ದೇಶಕ್ಕೆ ಮೂರನೆ ಅಲೆ ಬಂದೇ ಬರುತ್ತದೆ. ಪ್ರಸ್ತುತ ದೇಶದಲ್ಲಿ ಪ್ರತಿ ದಿನಕ್ಕೆ ಸರಿ ಸುಮಾರು 7500 ಕೇಸುಗಳು ವರದಿಯಾಗುತ್ತಿದೆ. ಆದರೆ ಯಾವಾಗ ಡೆಲ್ಟಾ ರೂಪಾಂತರಿಯ ಬದಲು ಸಂಪೂರ್ಣ ಓಮಿಕ್ರಾನ್ ರೂಪಾಂತರಿಯು ಬರುತ್ತದೆಯೋ ಆದ ದೈನಂದಿನ ಕೊರೊನಾ ಕೇಸ್ಗಳಲ್ಲಿ ಏರಿಕೆ ಕಂಡು ಬರಲಿದೆ ಎಂದು ವಿದ್ಯಾಸಾಗರ್ ಹೇಳಿದ್ದಾರೆ.
ನಾವು ಎರಡನೆ ಅಲೆಯಲ್ಲಿ ವರದಿ ಮಾಡಿದ ಕೋವಿಡ್ ಕೇಸ್ಗಳಿಗಿಂತ ಹೆಚ್ಚು ಸೋಂಕಿತರನ್ನು ಮೂರನೇ ಅಲೆಯ ಸಂದರ್ಭದಲ್ಲಿ ವರದಿ ಮಾಡಲಿದ್ದೇವೆ. ಕೊರೊನಾ ಎರಡನೆ ಅಲೆಯ ಸಂದರ್ಭದಲ್ಲಿ ಮುಂಚೂಣಿ ಕಾರ್ಯಕರ್ತರನ್ನು ಹೊರತುಪಡಿಸಿ ಮತ್ಯಾರಿಗೂ ಲಸಿಕೆ ಕೂಡ ಆಗಿರಲಿಲ್ಲ. ಹೀಗಾಗಿ ದೇಶದ ಬಹುತೇಕ ಜನತೆಯು ಕೊರೊನಾ ಎರಡನೆ ಅಲೆಯ ಅಪಾಯಕ್ಕೆ ಸಿಲುಕಿಕೊಂಡಿದೆ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ದೇಶದ ಬಹುತೇಕ ಜನತೆ ಕೊರೊನಾ ಲಸಿಕೆಯನ್ನು ಪಡೆದಿದ್ದಾರೆ. ಅಲ್ಲದೇ ಬಹುತೇಕರಿಗೆ ಡೆಲ್ಟಾ ರೂಪಾಂತರಿ ಸೋಂಕು ತಗುಲಿ ಗುಣಮುಖರಾದ ಹಿನ್ನೆಲೆಯಲ್ಲಿ ಅವರಲ್ಲಿ ಆ್ಯಂಟಿಬಾಡಿ ಅಭಿವೃದ್ಧಿಗೊಂಡಿದೆ. ಹೀಗಾಗಿ ದೇಶದಲ್ಲಿ ಕೊರೊನಾ ಮೂರನೇ ಅಲೆಯು ಅಷ್ಟೊಂದು ಗಂಭೀರ ಪ್ರಮಾಣದ ಅಪಾಯ ಉಂಟು ಮಾಡೋದಿಲ್ಲ ಎಂದು ಹೇಳಿದ್ದಾರೆ.
(Corona for 33 students from the Medical College of Kolar)