ರಾಮನಗರ: Bande mutt swamiji: ಮಾಗಡಿಯ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಸಾವಿನ ಜಾಲ ಹೊರಟ ಪೊಲೀಸರಿಗೆ ಬಗೆದಷ್ಟು ಮಾಹಿತಿಗಳು ಸಿಗುತ್ತಿವೆ. ಒಂದೆಡೆ ಮಹಿಳೆಯೊಬ್ಬರ ಜೊತೆ ಸ್ವಾಮೀಜಿ ವಿಡಿಯೋ ಕಾಲ್ ಮಾಡಿ ಮಾತನಾಡಿರುವ ವಿಡಿಯೋ ಲಭಿಸಿದರೆ, ಮೂವರು ಮಹಿಳೆಯರು ಸೇರಿದಂತೆ ಒಟ್ಟು 7 ಮಂದಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಅ.24ರ ಸೋಮವಾರ ಮುಂಜಾನೆ ಮಠದ ಕಿಟಕಿಗೆ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಸ್ವಾಮೀಜಿಗಳ ಮೃತದೇಹ ಪತ್ತೆ ಆಗಿತ್ತು. ಅವರ ಮೃತದೇಹದ ಬಳಿ ಪತ್ತೆಯಾದ ಡೆತ್ನೋಟಿನಲ್ಲಿ ಮಾನಸಿಕ ಕಿರುಕುಳದಿಂದ ಬೇಸತ್ತು ಸಾವಿಗೆ ಶರಣಾಗುತ್ತಿರುವುದಾಗಿ ಉಲ್ಲೇಖವಿತ್ತು. ಆದರೂ ಇದು ಆತ್ಮಹತ್ಯೆ ಅಲ್ಲ ಎಂಬ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. 3 ಪುಟಗಳ ಡೆತ್ನೋಟಿನಲ್ಲಿ ಮೊದಲ ಪುಟದಲ್ಲೇ ಮಹಿಳೆಯೊಬ್ಬರು ತನ್ನನ್ನು ಹನಿಟ್ರ್ಯಾಪ್ ಮಾಡಿದ್ದಾಗಿ ಸ್ವಾಮೀಜಿ ಸ್ಪಷ್ಟವಾಗಿ ಉಲ್ಲೇಖಿಸಿದ್ದರು ಎಂದು ಈಗ ತಿಳಿದುಬಂದಿದೆ. ಡೆತ್ನೋಟು ಸಿಕ್ಕ ಸಮಯದಲ್ಲಿ ಪೊಲೀಸರು ಮುಖ್ಯವಾದ ಸಂಗತಿಗಳನ್ನು ಬಹಿರಂಗಪಡಿಸಿರಲಿಲ್ಲ. ಮುಂದಿನ 2 ಪುಟಗಳನ್ನು ತನಗೆ ಕಿರುಕುಳ ನೀಡಿದ್ದು ಯಾರು.? ಬ್ಲಾಕ್ ಮೇಲ್ ಮಾಡಿದ್ದು ಯಾರು..? ಎಂಬ ಬಗ್ಗೆ ಮಾಹಿತಿ ಇದ್ದರೂ ಎಫ್ಐಆರ್ನಲ್ಲಿ ಆ ಮಾಹಿತಿಗಳು ಉಲ್ಲೇಖವಾಗಿಲ್ಲ ಎನ್ನಲಾಗಿದೆ. ಹೀಗಾಗಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನಗಳು ನಡೆಯುತ್ತಿದೆಯಾ ಎಂಬ ಅನುಮಾನ ಹುಟ್ಟಿಕೊಂಡಿದೆ ಎನ್ನಲಾಗಿದೆ.
ಬಸವಲಿಂಗ ಸ್ವಾಮೀಜಿ ಬರೆದಿದ್ದಾರೆ ಎನ್ನಲಾದ ಡೆತ್ನೋಟಿನ ವಿವರ ನಿನ್ನೆ ಬಹಿರಂಗಗೊಂಡಿತ್ತು. ಇಂದು ಸುಮಾರು 60 ಸೆಕೆಂಡ್ಗಳ ಶ್ರೀಗಳ ವಿಡಿಯೋ ತುಣುಕು ಲಭಿಸಿದೆ. ಇದರಲ್ಲಿ ಒಬ್ಬ ಮಹಿಳೆ ಜೊತೆ ಸ್ವಾಮೀಜಿ ಮಾತನಾಡುತ್ತಿರುವಂತಿದೆ. ಆದರೆ ಆ ಮಹಿಳೆ ಯಾರು ಎಂಬ ಸ್ಪಷ್ಟನೆ ಸಿಕ್ಕಿಲ್ಲ ಎನ್ನಲಾಗಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 306ರಡಿ ಕೇಸ್ ದಾಖಲಾಗಿದೆ. ಎಫ್ಐಆರ್ನಲ್ಲಿ ಅನಾಮಧೇಯ ಹೆಸರಿನಲ್ಲಿ ಎ1 ಆರೋಪಿ ಎಂದು ನಮೂದಿಸಲಾಗಿದೆ. ಸ್ವಾಮೀಜಿಗಳು ಡೆತ್ನೋಟಿನಲ್ಲಿ ಹಲವರ ಹೆಸರುಗಳು ನಮೂದಿಸಿದ್ದರೂ ಎಫ್ಐಆರ್ನಲ್ಲಿ ಒಬ್ಬರ ಹೆಸರನ್ನೂ ಉಲ್ಲೇಖಿಸದಿರುವುದು ಹಲವು ಗುಮಾನಿಗಳಿಗೆ ಎಡೆಮಾಡಿಕೊಟ್ಟಿದೆ ಎನ್ನಲಾಗಿದೆ.
ಸ್ವಾಮೀಜಿಗಳು ಡೆತ್ನೋಟಿನಲ್ಲಿ ಉಲ್ಲೇಖಿಸಿದಂತೆ ಕಳೆದ 6 ತಿಂಗಳಿನಿಂದ ಶ್ರೀಗಳ ವಿರುದ್ಧ ಕುತಂತ್ರ ನಡೆಯುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ. ಅಲ್ಲದೇ ತಮ್ಮ ಮೊದಲ ಪುಟದಲ್ಲೇ ತಾನು ಸೋತೆ ಎಂಬರ್ಥದಲ್ಲಿ ಬರೆದಿದ್ದರು ಎಂದು ತಿಳಿದುಬಂದಿದೆ. ಇವೆಲ್ಲದರ ನಡುವೆ ಒಬ್ಬ ಮಹಿಳೆಯ ಜೊತೆ ಸ್ವಾಮೀಜಿಗಳು ಇದ್ದಾರೆ ಎಂಬ ಒಂದು ವಿಡಿಯೋ ಕ್ಲಿಪ್ ಯಾರಿಗೋ ಸಿಕ್ಕಿದ್ದು, ಅದಾದ ಬಳಿಕ ಅವರು ಖಿನ್ನರಾಗಿದ್ದರು. ಸದ್ಯ ಸ್ವಾಮೀಜಿಗಳು ಬಳಸುತ್ತಿದ್ದ 2 ಮೊಬೈಲ್ಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಕಳೆದೊಂದು ವರ್ಷದ ಕಾಲ್ ಹಿಸ್ಟರಿ ತೆಗೆದು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಸಾಕಷ್ಟು ಜಮೀನು, ಹಣ ಹೊಂದಿದ್ದ ಸ್ವಾಮೀಜಿಗಳನ್ನು ಖೆಡ್ಡಾಗೆ ಬೀಳಿಸಲು ತೀರಾ ಆಪ್ತರೇ ಮೋಸದ ಜಾಲದಲ್ಲಿ ಸಿಲುಕಿಸಿದ್ದಾರಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ವಿಡಿಯೋ ಆಧರಿಸಿ ಮೂವರು ಮಹಿಳೆಯರನ್ನು ಗೌಪ್ಯ ಸ್ಥಳದಲ್ಲಿರಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಇನ್ನುಳಿದ ನಾಲ್ವರ ಮೇಲೆಯೂ ತನಿಖೆ ಮುಂದುವರೆಸಿದ್ದಾರೆ.
ಇನ್ನು ಬಸವಲಿಂಗ ಸ್ವಾಮೀಜಿಗಳ ಆರಾಧನಾ ಕಾರ್ಯಕ್ರಮ ನಡೆಸುವ ಸಲುವಾಗಿ ಇಂದು ಮಠದ ಆವರಣದಲ್ಲಿ ಲಿಂಗಾಯತ ಮುಖಂಡರು ಸಭೆ ನಡೆಸಿದ್ದಾರೆ. ನವೆಂಬರ್ 3ರಂದು ಶ್ರೀಗಳ ಪುಣ್ಯತಿಥಿ ಕಾರ್ಯಕ್ರಮ ನಡೆಯಲಿದ್ದು, ಬೆಂಗಳೂರಿನ ಬಿನ್ನಿಮಿಲ್ ಗುರುವಣ್ಣದೇವರ ಮಠದ ಶ್ರೀ ನಂಜುಂಡ ಸ್ವಾಮೀಜಿ ಕಾರ್ಯಕ್ರಮದ ಉಸ್ತುವಾರಿ ವಹಿಸಲಿದ್ದಾರೆ. ಪುಣ್ಯತಿಥಿ ಮುಗಿದ ಬಳಿಕ ಮಠಕ್ಕೆ ಮುಂದಿನ ಉತ್ತರಾಧಿಕಾರಿ ನೇಮಕ ಮಾಡುವ ಸಾಧ್ಯತೆಗಳಿವೆ.
ಇದನ್ನೂ ಓದಿ: Delhi CM: ಹಿಂದುತ್ವ ಅಜೆಂಡಾ: ಪ್ರಧಾನಿ ಮೋದಿಗೆ ದೆಹಲಿ ಸಿಎಂ ಕೇಜ್ರಿವಾಲ್ ಮನವಿ ಮಾಡಿದ್ದೇನು
big twist in bande mutt swamiji suicide case: a video viral