ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ನಡೆದಿರುವ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಪೊಲೀಸರ ಗೋಲಿಬಾರ್ ಗೆ 3 ಮಂದಿ ಸಾವ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಒಟ್ಟು 110 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ವಿಚಾರವನ್ನು ಮುಂದಿಟ್ಟು ದಾಂಧಲೆ ನಡೆಸಿರುವ ಕಿಡಿಗೇಡಿಗಳ ಆರ್ಭಟಕ್ಕೆ ಕಾವಲ್ ಭೈರಸಂದ್ರದಲ್ಲಿರುವ ಮೂರು ಅಂತಸ್ತಿನ ಮನೆ ಬೆಂಕಿಗಾಹುತಿಯಾಗಿದೆ. ಶಾಸಕರ ಮನೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಪಾಳು ಮನೆಯಂತೆ ಭಾಸವಾಗುತ್ತಿದೆ. ಪರಿಣಾಮ ಅಕ್ಕಪಕ್ಕದ ರಸ್ತೆ, ಮನೆಗಳಲ್ಲಿ ನೀರವ ಮೌನ ಆವರಿಸಿದೆ. ಸದ್ಯಕ್ಕೆ ಪೊಲೀಸರು ಕೆಜಿ ಹಳ್ಳಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನ ಬಂದ್ ಮಾಡಿದ್ದಾರೆ.

ಘಟನೆ ನಡೆಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಪೊಲೀಸರ ಮೇಲೆಯೂ ಕಿಡಿಗೇಡಿಗಳು ದಾಳಿಯನ್ನು ನಡೆಸಿದ್ದಾರೆ. ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದಾಗಿ ಹಲವು ಪೊಲೀಸರ ತಲೆ, ಬೆನ್ನು ಹಾಗೂ ಮುಖಕ್ಕೆ ಗಾಯವಾಗಿದ್ದು, ಗಂಭೀರವಾಗಿ ಗಾಯಗೊಂಡಿರುವವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಾತ್ರವಲ್ಲ ವರದಿ ಮಾಡಲು ಘಟನಾ ಸ್ಥಳಕ್ಕೆ ತೆರಳಿದ್ದ ಮಾಧ್ಯಮದವರ ಮೇಲೆಯೂ ಕಿಡಿಗೇಡಿಗಳು ಹಲ್ಲೆ ಹಲ್ಲೆ ನಡೆಸಿದ್ದಾರೆ.

ಕೇವಲ ಶಾಸಕರ ಮನೆಯಷ್ಟೇ ಅಲ್ಲಾ ಅಕ್ಕಪಕ್ಕದಲ್ಲಿ ನಿಂತಿದ್ದ ನೂರಾರು ವಾಹನಗಳಿಗೂ ಪುಂಡರು ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದಾರೆ. ಘಟನೆಯನ್ನು ತಹಬದಿಗೆ ತರಲು ಪೊಲೀಸರು ನಡೆಸಿದ ಗೋಲಿಬಾರ್ ನಲ್ಲಿ ಒಟ್ಟು 3 ಮಂದಿ ಬಲಿಯಾಗಿದ್ದು, 110 ಮಂದಿಯನ್ನು ಬಂಧಿಸಿಲಾಗಿದೆ.

ಗಲಭೆಯಲ್ಲಿ 10 ಮಂದಿ ಆರೋಪಿಗಳಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಚಿಕಿತ್ಸೆ ಪಡೆಯುತ್ತಿದ್ದ 6 ಮಂದಿ ಆರೋಪಿಗಳು ಆಸ್ಪತ್ರೆಯಿಂದೇ ಪರಾರಿಯಾಗಿದ್ದಾರೆ. ಇನ್ನು ಘಟನೆಗೆ ಕಾರಣವಾಗಿದ್ದ ಆರೋಪಿ ನವೀನ್ ನನ್ನು ಪೊಲೀಸರು ಬಂಧಿಸಿದ್ದಾರೆ.