ಬೆಂಗಳೂರು : ಖ್ಯಾತ ಆಹಾರ ತಜ್ಞ, ವಿಶ್ಲೇಷಕ ಕೆಸಿ ರಘು (KC Raghu) ಅವರು ನಿಧನರಾಗಿದ್ದಾರೆ. ಕಳೆದ ಕೆಲವು ಸಮಯಗಳಿಂದಲೂ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಕುಟುಂಬಸ್ಥರು ದೇಹವನ್ನು ದಾನ ಮಾಡಲು ಮುಂದಾಗಿದ್ದು, ಕೆಸಿ ರಘು ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದಿದ್ದಾರೆ.
ಕೆಸಿ ರಘು ಅವರ ಪತ್ನಿ ಆಶಾ ರಘು ( Asha Raghu) ಅವರು ಸಾಮಾಜಿಕ ಜಾಲತಾಣದಲ್ಲಿ ( Social Medai)ತಮ್ಮ ಪತಿಯ ಸಾವಿನ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇಂದು ಬೆಳಗ್ಗೆ 7.20 ಕ್ಕೆ ಅವರು ವಿಧಿವಶರಾಗಿದ್ದು, ಅವರ ಅಂತಿಮ ದರ್ಶನ ಪಡೆಯುವವರು ಕಳೆಗಿನ ವಿಳಾಸಕ್ಕೆ ಬರಬಹುದು ಎಂದು ಮನವಿ ಮಾಡಿಕೊಂಡಿದ್ದರು. ಆಹಾರ ತಜ್ಞ ಕೆಸಿ ರಘು ಅವರು ಕಳೆದ ಸಮಯಗಳಿಂದಲೂ ಶ್ವಾಸಕೋಶದ ಕ್ಯಾನ್ಸರ್ನಿಂದ (Lungs Cancer) ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದೇ ಅವರು ಇಂದು ಬೆಂಗಳೂರಿನ ದಾಸರಹಳ್ಳಿಯ ಅಮೃತನಗರದಲ್ಲಿರುವ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಕನ್ನಡದ ಟಿವಿ ವಾಹಿನಿಗಳಲ್ಲಿ ಹಲವು ಕಾರ್ಯಕ್ರಮಗಳಲ್ಲಿಯೂ ಅವರು ವಿಶ್ಲೇಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಹಿಂದೆ ಪುಡ್ ಆಂಡ್ ನ್ಯೂಟ್ರೆಷನ್ ವರ್ಲ್ಡ್ ಆಂಗ್ಲ ನಿಯತಕಾಲಿಕದಲ್ಲಿ ಸಂಪಾದಕ ರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ದಿನಪತ್ರಿಕೆಗಳಲ್ಲಿ ಅಂಕಣ ಬರಹಗಾರರಾಗಿಯೂ ಅವರು ಗುರುತಿಸಿಕೊಂಡಿದ್ದರು. ಆಹಾರಕ್ಕೆ ಸಂಬಂದಿಸಿದಂತೆ ಮಾಹಿತಿಯನ್ನು ನೀಡುವ ಕಾಯಕವನ್ನು ಮಾಡುತ್ತಿದ್ದರು.
ಇದನ್ನೂ ಓದಿ : ಪತಿ ತನ್ನ ಪತ್ನಿಯ ಪೋನ್ ಸಂಭಾಷಣೆ ರೆಕಾರ್ಡ್ ಮಾಡುವುದು ಅಪರಾಧ : ಹೈಕೋರ್ಟ್ ಮಹತ್ವದ ತೀರ್ಪು
ಕೆಸಿ ರಘು ಅವರು ಸ್ಥಾಪನೆ ಮಾಡಿರುವ ಪ್ರಿಸ್ಟೀನ್ ಆರ್ಗ್ಯಾನಿಕ್ಸ್ ಅನ್ನೋ ಸಂಸ್ಥೆಯ ಮೂಲಕ ನವಜಾತ ಶಿಶುಗಳಲ್ಲಿ ಕಂಡು ಬರುವ ಮಾರಕಕಾಯಿಲೆಗಳಿಗೆ ಪೌಷ್ಠಿಕಾಂಶದ ಪರಿಹಾರವನ್ನು ತಮ್ಮ ಸಂಶೋಧನೆಯಿಂದ ಕಂಡು ಹಿಡಿದಿದಿದ್ದಾರೆ. ಈ ಮೂಲಕ ಸುಮಾರು ಐದು ಸಾವಿರಕ್ಕೂ ಅಧಿಕ ನವಜಾತ ಶಿಶುಗಳನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದರು.

ಕೆಸಿ ರಘು ಅವರು ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಕೆಸಿ ರಘು ಅವರ ಪತ್ನಿ ಆಶಾರಘು ಅವರು ಕಾದಂಬರಿಗಾರ್ತಿಯಾಗಿದ್ದಾರೆ. ಬದುಕಿದ್ದಾಗಲೂ ಇತರರಿಗೆ ಮಾದರಿಯಾಗುವಂತಹ ಕಾರ್ಯಗಳನ್ನು ಮಾಡಿದ್ದ ರಘು ಅವರ ಇಚ್ಚೆಯಂತೆ ಅವರ ದೇಹವನ್ನು ಬೆಂಗಳೂರಿನ ಎಂಎಸ್ ರಾಮಯ್ಯ ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಗುತ್ತದೆ.
ಇದನ್ನೂ ಓದಿ : ನಿಮ್ಮ ಹೆಣ್ಣು ಮಗಳ ಮದುವೆಗೆ ಸಿಗುತ್ತೆ 25 ಲಕ್ಷ ರೂ. : ಪ್ರಧಾನಿ ನರೇಂದ್ರ ಮೋದಿ ಸರಕಾರದಿಂದ ಹೊಸ ಯೋಜನೆ
ಹೊಸ ಹೊಸ ವಿಚಾರಗಳ ಕುರಿತು ಅವರು ಸದಾ ಸಂಶೋಧನೆ ಮಾಡುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ತಮ್ಮ ಸಂಶೋಧನೆಯ ಜೊತೆ ಜೊತೆಗೆ ತುತ್ತು, ಆಹಾರ ರಾಜಕೀಯ, ರಸ ತತ್ವ ಸೇರಿದಂತೆ ಹಲವು ಕೃತಿಗಳನ್ನು ಅವರು ರಚಿಸಿದ್ದಾರೆ. ಇದೀಗ ತಮ್ಮ ದೇಹವನ್ನು ದಾನ ಮಾಡುವ ಮೂಲಕವೂ ಕೆಸಿ ರಘು ಅವರು ಸಾವಿನಲ್ಲಿಯೂ ಸಾರ್ಥಕತೆಯನ್ನು ಮರೆದಿದ್ದಾರೆ.
famous food Expert KC Raghu Passed Away in Bangalore