ಬೆಂಗಳೂರು : ಉಪಚುನಾವಣಾ ಪ್ರಚಾರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದೂರ ಉಳಿಯುವ ಸ್ಥಿತಿ ಎದುರಾಗಿದೆ. ಒಂದೊಮ್ಮೆ ಎಚ್ಡಿಕೆ ಎಲ್ಲಾದ್ರೂ ಕಾಣಿಸಿಕೊಂಡ್ರೆ ಆರೆಸ್ಟ್ ವಾರೆಂಟ್ ಜಾರಿ ಮಾಡಬೇಕಾಗುತ್ತದೆ ಎಂದು ನ್ಯಾಯಾಧೀಶರು ಎಚ್ಚರಿಕೆಯನ್ನು ನೀಡಿದ್ದಾರೆ.

ಹಲಗೆವಡೇರಹಳ್ಳಿ ಡಿ ನೋಟಿಫಿಕೇಷನ್ ಪ್ರಕರಣ ಸಂಬಂಧ ಮಾಜಿ ಸಿಎಂ ಕುಮಾರಸ್ವಾಮಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಪದೇ ಪದೇ ಗೈರು ಹಾಜರಾಗುತ್ತಿದ್ದಾರೆ. ಕೊರೋನಾ ನಿಯಮಗಳನ್ನು ಉಲ್ಲಂಘಿಸಿ ಊರೆಲ್ಲಾ ಸುತ್ತಾಡುತ್ತಿರುವ ಕುಮಾರಸ್ವಾಮಿ ನ್ಯಾಯಾಲಯಕ್ಕೆ ಮಾತ್ರ ಹಾಜರಾಗುತ್ತಿರಲಿಲ್ಲ. ಖುದ್ದು ಹಾಜರಾತಿಗೆ ಸಮನ್ಸ್ ಕೊಟ್ಟರೂ ಮಾಜಿ ಸಿಎಂ ಅದಕ್ಕೆ ಕ್ಯಾರೇ ಅನ್ನುತ್ತಿಲ್ಲ. ಇದರಿಂದಾಗಿ ಕುಮಾರಸ್ವಾಮಿ ಗೈರು ಹಾಜರಿಯನ್ನು ಗುರುವಾರ ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ. ಕೊರೋನಾ ಕಾರಣದಿಂದ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ ಅನ್ನುವ ಉತ್ತರ ಕುಮಾರಸ್ವಾಮಿ ಪರ ವಕೀಲರಿಂದ ಬಂದಿದೆ.
ವಕೀಲರ ಹೇಳಿಕೆಯನ್ನು ಕೇಳುತ್ತಿದ್ದಂತೆಯೇ ನ್ಯಾಯಾಧೀಶ ಶ್ರೀಧರ್ ಗೋಪಾಲಕೃಷ್ಣ ಭಟ್ ಅವರು ಚಾಟಿ ಬೀಸಿದ್ದಾರೆ. ಕುಮಾರಸ್ವಾಮಿ ಪರ ವಕೀಲರ ಈ ಉತ್ತರದಿಂದ ಕೆಂಡಾಮಂಡಲರಾದ ನ್ಯಾಯಮೂರ್ತಿಗಳು ನಾನು ಟಿವಿ ನೋಡುತ್ತೇನೆ ಪತ್ರಿಕೆ ಓದುತ್ತೇನೆ, ಎಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುತ್ತೇನೆ, ಕುಮಾರಸ್ವಾಮಿ ಅವರು ಎಲ್ಲಿಯಾದ್ರೂ ಕಾಣಿಸಿಕೊಂಡ್ರೆ ಅರೆಸ್ಟ್ ವಾರೆಂಟ್ ಜಾರಿ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇದೀಗ ನ್ಯಾಯಾಧೀಶರ ಆದೇಶದಿಂದಾಗಿ ಕುಮಾರಸ್ವಾಮಿ ಅವರು ಉಪಚುನಾವಣಾ ಪ್ರಚಾರದಿಂದ ಕುಮಾರಸ್ವಾಮಿ ಅವರು ದೂರ ಉಳಿಯಬೇಕಾದ ಅನಿವಾರ್ಯತೆ ಎದುರಾಗಿದ್ದು, ಕುಮಾರಸ್ವಾಮಿ ಸಂಕಷ್ಟಕ್ಕೆ ಸಿಲುಕಿದ್ದಾರೆ.