ಬೆಂಗಳೂರು : ರಾಜ್ಯದಲ್ಲಿ ಸೋಮವಾರದಿಂದಲೇ ಅನ್ ಲಾಕ್ ಆದೇಶ ಜಾರಿಗೆ ಬರಲಿದೆ. 11 ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಆದೇಶ ಜಾರಿಯಾಗಿದ್ದು, ಉಳಿದ ಜಿಲ್ಲೆಗಳಲ್ಲಿ ನೈಟ್ ಕರ್ಪ್ಯೂ ಹಾಗೂ ವೀಕೆಂಡ್ ಕರ್ಪ್ಯೂ ಜಾರಿ ಮಾಡಲಾಗಿದೆ. ರಾಜ್ಯ ಸರಕಾರ ಅನ್ ಲಾಕ್ ಕುರಿತು ಮಾರ್ಗಸೂಚಿ ಪ್ರಕಟಿಸಿದೆ.

ರಾಜ್ಯದಲ್ಲಿ ಅನ್ ಲಾಕ್ ಪ್ರಕ್ರಿಯೆ ಜಾರಿಗೆ ಬರಲಿದ್ದರೂ ಕೂಡ ಬಸ್ ಸಂಚಾರಕ್ಕೆ ಸಂಪೂರ್ಣವಾಗಿ ನಿಷೇಧ ಹೇರಲಾಗಿದೆ. ಆದರೆ ಅಗತ್ಯ ವಸ್ತುಗಳ ಖರೀದಿಯ ಅವಧಿಯನ್ನು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೂ ಮುಂದುವರಿಸಲಾಗಿದೆ. ಅಲ್ಲದೇ ಸಂಜೆ 7 ಗಂಟೆಯಿಂದ ಬೆಳಗ್ಗೆ 6 ಗಂಟೆಯ ವರೆಗೆ ನೈಟ್ ಕರ್ಪ್ಯೂ ಜಾರಿಗೆ ಬರಲಿದೆ. ಅಲ್ಲದೇ ಶುಕ್ರವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿರಲಿದೆ.

11 ಜಿಲ್ಲೆಗಳಲ್ಲಿ ಲಾಕ್ ಡೌನ್ ..?
ಪಾಸಿಟಿವಿಟಿ ಹೆಚ್ಚಾಗಿರುವ ದಕ್ಷಿಣ ಕನ್ನಡ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಬೆಳಗಾವಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಮುಂದುರಿಸುವಂಯೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಹಿಂದಿನ ಮಾರ್ಗಸೂಚಿಯಂತೆಯೇ ಲಾಕ್ ಡೌನ್ ಮುಂದುವರಿಯಲಿದ್ದು, ಜಿಲ್ಲಾಡಳಿತಗಳು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚಿಸಿ ಇನ್ನಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರಲು ಕೂಡ ಅವಕಾಶ ಕಲ್ಪಿಸಲಾಗಿದೆ.

ಅನ್ ಲಾಕ್ ನಲ್ಲಿ ಯಾವುದಕ್ಕೆ ಅವಕಾಶ ?
ಅನ್ ಲಾಕ್ ಆದೇಶ ಜಾರಿಯಲ್ಲಿದ್ದರೂ ಕೂಡ ಲಾಕ್ ಡೌನ್ ಮಾರ್ಗಸೂಚಿಯಲ್ಲಿನ ಕೆಲವು ವಲಯ ಹಾಗೂ ನಿಯಮಗಳಿಗೆ ಮಾತ್ರವೇ ಅವಕಾಶವನ್ನು ನೀಡಲಾಗುತ್ತಿದೆ. ಅಂಗಡಿ ಮುಂಗಟ್ಟು ಹಾಗೂ ಬೀದಿ ಬದಿ ವ್ಯಾಪಾರವನ್ನು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ತೆರೆಯಬಹುದಾಗಿದೆ. ಕೈಗಾರಿಕೆಗಳನ್ನು ಶೇ.50 ಹಾಗೂ ಗಾರ್ಮೆಂಟ್ಸ್ ಗಳನ್ನು ಶೇ.30ರ ಹಾಜರಾತಿಯೊಂದಿಗೆ ಆರಂಭಿಸಬಹುದಾಗಿದೆ. ಕಟ್ಟಡ ಕಾಮಗಾರಿಗೆ ಸಂಪೂರ್ಣವಾಗಿ ವಿನಾಯಿತಿಯನ್ನು ನೀಡಬಹುದಾಗಿದೆ.

ಮದುವೆ, ಅಂತ್ಯ ಸಂಸ್ಕಾರದ ಮೇಲಿನ ನಿರ್ಬಂಧವನ್ನು ಮುಂದುವರಿಸಲಾಗಿದ್ದು, ಮದುವೆಗೆ ಗರಿಷ್ಠ 40 ಜನ ಹಾಗೂ ಅಂತ್ಯ ಸಂಸ್ಕಾರಕ್ಕೆ ಕೇವಲ 5 ಮಂದಿಗೆ ಮಾತ್ರವೇ ಭಾಗವಹಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ವಾಕಿಂಗ್ ಮಾಡುವ ನಿಟ್ಟಿನಲ್ಲಿ ಪಾರ್ಕ್ ಗಳನ್ನು ಬೆಳಗ್ಗೆ 5 ಗಂಟೆಯಿಂದ 10 ಗಂಟೆಯ ವರೆಗೆ ಬಳಸಿಕೊಳ್ಳಲು ಅನುಮತಿಯನ್ನು ನೀಡಲಾಗಿದ್ದು, ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿದೆ. ಬಸ್ ಸಂಚಾರ ಆರಂಭವಾಗದ ಹಿನ್ನೆಲೆಯಲ್ಲಿ ಟ್ಯಾಕ್ಸಿ ಹಾಗೂ ರಿಕ್ಷಾಗಳ ಸಂಚಾರಕ್ಕೆ ಅನುಮತಿ ಯನ್ನು ನೀಡಲಾಗಿದೆ. ಆದರೆ ಇಬ್ಬರು ಮಾತ್ರವೇ ಪ್ರಯಾಣಿಸಬೇಕಾಗಿದೆ. ಟ್ರೈನ್, ವಿಮಾನಯಾನ ಪ್ರಯಾಣಿಕರು ತಮ್ಮ ಟಿಕೆಟ್ ತೋರಿಸಿ ಸಂಚಾರ ನಡೆಸಬಹುದಾಗಿದೆ.