ಬೆಂಗಳೂರು : ಚುನಾವಣೆಗೆ ಒಂದೂವರೆ ವರ್ಷ ಬಾಕಿ ಇರುವಾಗಲೇ ರಾಜ್ಯದಲ್ಲಿ ಪಕ್ಷಾಂತರ ಪರ್ವದ ಸಿದ್ಧತೆಗಳು ಆರಂಭಗೊಂಡಿದೆ.ವಲಸಿಗರು ವಾಪಸ ಬರ್ತಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ, ಬಿಜೆಪಿ ಎಮ್ ಎಲ್ ಎ ಗಳು ನಮ್ಮ ಸಂಪರ್ಕ ನಲ್ಲಿದ್ದಾರೆ ಎಂಬ ಸಿದ್ಧರಾಮಯ್ಯನವರ ಹೇಳಿಕೆಗೆ ಜೀವ ತುಂಬುವಂತಹ ಬೆಳವಣಿಗೆಯೊಂದು ನಡೆದಿದ್ದು ರಾಜ್ಯ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಮಹತ್ವದ ನಡೆಯೊಂದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (Anand Singh DK Sivakumar) ಅವರನ್ನು ಭೇಟಿ ಮಾಡಿದ್ದಾರೆ.
ಸೋಮವಾರ ಬೆಳಗ್ಗೆ ಸದಾಶಿವ ನಗರದ ಡಿಕೆಶಿ ನಿವಾಸಕ್ಕೆ ಆನಂದ ಸಿಂಗ್ ಖಾಸಗಿ ಕಾರಿನಲ್ಲಿ ಆಗಮಿಸಿದ್ದು ತಮ್ಮ ಸರ್ಕಾರಿ ಕಾರು,ಸಿಬ್ಬಂದಿಯನ್ನು ಬಿಟ್ಟು ಆಗಮಿಸಿದ್ದರು. ಅಂದಾಜು ಅರ್ಧ ಗಂಟೆಗೂ ಅಧಿಕ ಕಾಲ ಸಚಿವ ಆನಂದಸಿಂಗ್ ಡಿಕೆಶಿ ಜೊತೆ ರಹಸ್ಯ ಚರ್ಚೆ ನಡೆಸಿದ್ದಾರೆ. ಹೀಗಾಗಿಚುನಾವಣೆಗೆ ಮುನ್ನವೇ ಆನಂದ ಸಿಂಗ್ ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಾರಾ ಎಂಬ ಚರ್ಚೆ ಆರಂಭಗೊಂಡಿದೆ.
ಎರಡನೇ ಸಚಿವ ಸಂಪುಟ ವಿಸ್ತರಣೆ ವೇಳೆ ಅನಂದ ಸಿಂಗ್ ಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಪ್ರವಾಸೋದ್ಯಮ ಇಲಾಖೆ ನೀಡಿದ್ದಕ್ಕೆ ಆನಂದಸಿಂಗ್ ತೀವ್ರ ಅಸಮಧಾನ ಗೊಂಡಿದ್ದರು. ಅರಣ್ಯ ಹಾಗೂ ಪ್ರವಾಸೋದ್ಯಮ ಇಲಾಖೆ ಬೇಡ. ಜಲಸಂಪನ್ಮೂಲ ಇಲಾಖೆಯೇ ಬೇಕು ಎಂದು ಪಟ್ಟು ಹಿಡಿದಿದ್ದರು. ಅಲ್ಲದೇ ಅಧಿಕಾರ ಸ್ವೀಕರಿಸಲು ಹಿಂದೇಟು ಹಾಕಿದ್ದ ಆನಂದ ಸಿಂಗ್ ಒಂದೂವರೆ ತಿಂಗಳ ಬಳಿಕ ಅಸಮಧಾನದಿಂದಲೇ ಅಧಿಕಾರ ಸ್ವೀಕರಿಸಿದ್ದರು.
ಈಗ ದಿಢೀರ್ ಆನಂದ ಸಿಂಗ್ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ್ದು ತೀವ್ರ ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಬಿಜೆಪಿ ನಾಯಕರ ಮೇಲೆ ಕಣ್ಣಿಟ್ಟಿದ್ದು, ಸಂಪುಟ ವಿಸ್ತರಣೆ ಹಾಗೂ ಸಚಿವ ಸ್ಥಾನದ ಅಸಮಧಾನಿತರನ್ನೇ ಟಾರ್ಗೆಟ್ ಮಾಡಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಇದಕ್ಕೆ ಬಲ ತುಂಬುವಂತೆ ಆನಂದಸಿಂಗ್ ಡಿಕೆಶಿ ಭೇಟಿ ಮಾಡಿದ್ದು, ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ತಮ್ಮ ನಡೆಯ ಮೂಲಕ ಸ್ಪಷ್ಟ ಸಂದೇಶ ನೀಡುವಂತ ಪ್ರಯತ್ನ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇತ್ತ ಡಿಕೆಶಿ ಕೂಡ 2023 ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶತಾಯ ಗತಾಯ ಪ್ರಯತ್ನ ಆರಂಭಿಸಿದ್ದು, ಎಲ್ಲ ಜಿಲ್ಲೆಗಳಲ್ಲಿ ಗೆಲ್ಲುವ ಅಭ್ಯರ್ಥಿ ಗಳನ್ನೇ ಕಾಂಗ್ರೆಸ್ ಗೆ ತರಲು ರಣತಂತ್ರ ಹೂಡಿದ್ದಾರೆ. ಈ ರಣತಂತ್ರದ ಭಾಗವಾಗಿಯೇ ಆನಂದ ಸಿಂಗ್ ರನ್ನು ಕಾಂಗ್ರೆಸ್ ಗೆ ಕರೆತರುವ ಪ್ರಯತ್ನ ಇದು ಎನ್ನಲಾಗುತ್ತಿದೆ. ಗಣಿಪ್ರಕರಣದಲ್ಲಿ ಜೈಲು ಸೇರಿದ್ದ ಆನಂದ ಸಿಂಗ್ ಜೈಲಿನಿಂದ ವಾಪಸ್ಸಾದ ಬಳಿಕ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಈಗ ಮತ್ತೆ ಬಿಜೆಪಿ ತೊರೆಯುತ್ತಾರಾ ಎಂಬ ಅನುಮಾನ ಸೃಷ್ಟಿಯಾಗಿದೆ.
ಇದನ್ನೂ ಓದಿ : ಸ್ವಪಕ್ಷಿಯರ ವಿರುದ್ಧವೇ ಗುಡುಗಿದ ಶಾಸಕ ರೇಣುಕಾಚಾರ್ಯ: 15 ಸಚಿವರ ವಿರುದ್ಧ ರಾಜ್ಯಾಧ್ಯಕ್ಷ ರಿಗೆ ದೂರು
ಇದನ್ನೂ ಓದಿ : ಒಂದು ಎಲೆಕ್ಷನ್ ಗೆ 30 ಕೋಟಿ ಖರ್ಚು ಮಾಡಿದ್ದೇನೆ : ವೈರಲ್ ಆಯ್ತು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಆಡಿಯೋ
( BJP Minister Anand Singh visits KPCC president DK Sivakumar house )