ಹೊಸಕೋಟೆ: ಮೂರು ರಾಷ್ಟ್ರೀಯ ಪಕ್ಷಗಳ ಬಾಗಿಲು ಬಡಿದ ಬಳಿಕ ಕೊನೆಯದಾಗಿ ಕೈಪಾಳಯ ಸೇರಲು ಸಿದ್ಧವಾಗಿರೋ ಶರತ್ ಬಚ್ಚೇಗೌಡ್ ಹೊಸಕೋಟೆ ಕಾಂಗ್ರೆಸ್ ನಾಯಕರುಗಳ ಷರತ್ತು ಕೇಳಿ ಕಂಗಾಲಾಗಿದ್ದು, ಕಾಂಗ್ರೆಸ್ ಶರತ್ ಪಾಲಿಗೆ ಬಿಸಿತುಪ್ಪವಾಗೋ ಲಕ್ಷಣ ದಟ್ಟವಾಗಿದೆ.

ಬಿಜೆಪಿಯಿಂದ ಬಂಡಾಯ ಎದ್ದು ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದ ಯುವ ಒಕ್ಕಲಿಗ ನಾಯಕ ಶರತ್ ಬಚ್ಚೇಗೌಡ ಸಾಕಷ್ಟು ವಿಚಾರ ವಿಮರ್ಶೆ ಬಳಿಕ ಕೈ ಪಾಳಯಕ್ಕೆ ಸೇರಲು ನಿರ್ಧರಿಸಿದ್ದರು. ಆದರೆ ಇನ್ನೇನು ಕಾಂಗ್ರೆಸ್ ಸೇರ್ಪಡೆಯಾಗಬೇಕು ಅನ್ನೋ ಕ್ಷಣದಲ್ಲಿ ಎದುರಾದ ಆತಂಕ ಶಾಸಕರ ಎದೆಯಲ್ಲಿ ನಡುಕ ಮೂಡಿಸಿದೆ.

ಹೊಸಕೋಟೆ ಕಾಂಗ್ರೆಸ್ ವಲಯದಲ್ಲಿ ಶರತ್ ಬಚ್ಚೇಗೌಡ ಪಕ್ಷ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ಪಾಲಿಗೆ ಮುಳ್ಳಿನಂತಿದ್ದ ಶರತ್ ಪಕ್ಷ ಸೇರಿಸಿಕೊಳ್ಳೋದೇ ಬೇಡ ಎಂದು ಹೊಸಕೋಟೆ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖುದ್ದು ಈ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಕೊನೆಯಲ್ಲಿ ಒಂದಿಷ್ಟು ಷರತ್ತುಗಳಿಗೆ ಶರತ್ ಒಪ್ಪಿಕೊಂಡ್ರೆ ಪಕ್ಷಕ್ಕೆ ಸೇರಿಸಿಕೊಳ್ಳಲು ಅನುಮತಿ ನೀಡಿದ್ದಾರೆ ಎನ್ನಲಾಗ್ತಿದೆ.

ಹೊಸಕೋಟೆಯಲ್ಲಿ ತಲೆತಲಾಂತರದಿಂದ ಕಾಂಗ್ರೆಸ್ ಮೇಲುಗೈ ಸಾಧಿಸುತ್ತ ಬಂದಿದ್ದರೂ ಇತ್ತೀಚಿಗೆ ಆದ ಸ್ಥಿತ್ಯಂತರ ಹಾಗೂ ರಾಜಕೀಯ ಬದಲಾವಣೆಯಿಂದ ಬಿಜೆಪಿ ಬಲಗೊಂಡಿದೆ. ಹೀಗಾಗಿ ಈಗ ಬಿಜೆಪಿಯನ್ನು ಬಲಗೊಳಿಸಿದ ಶಾಸಕ ಶರತ್ ಖುದ್ದು ಕಾಂಗ್ರೆಸ್ ಗೆ ಬರುತ್ತಿರುವುದು ಸಹಜವಾಗಿಯೇ ಹೊಸಕೋಟೆಯ ಕಾಂಗ್ರೆಸ್ ಮೂಲವಾಸಿಗಳು ಆತಂಕಕ್ಕೊಳಗಾಗಿದ್ದಾರೆ.

ಹೀಗಾಗಿ ಒಂದಿಷ್ಟು ಷರತ್ತುಗಳನ್ನು ಮುಂದಿಟ್ಟಿದ್ದು, ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಾಕಲಾದ ಕೇಸ್ ಗಳನ್ನು ಹಿಂಪಡೆಯಬೇಕು. ಚುನಾವಣೆ ವೇಳೆ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿದ್ದ ನಾಯಕರ ವಿರುದ್ಧ ದ್ವೇಷರಾಜಕಾರಣ ಮಾಡಬಾರದು. ಕಾಂಗ್ರೆಸ್ ಬಂದ ಮೇಲೆ ಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮುಖ್ಯವಾಗಿ ಹೊಸಕೋಟೆಯ ಹಿರಿಯ ಕಾಂಗ್ರೆಸ್ಸಿಗರಿಗೆ ಅವಕಾಶ ನೀಡಬೇಕೇ ವಿನಃ ಬಿಜೆಪಿಯಿಂದ ಬಂದವರಿಗೆ ಆದ್ಯತೆ ನೀಡಬಾರದು.

ಮುಖ್ಯವಾಗಿ ಶಾಸಕ ಶರತ್ ಬಚ್ಚೇಗೌಡರ ತಂದೆಸಂಸದ ಬಚ್ಚೇಗೌಡರು ಬಿಜೆಪಿಯಲ್ಲಿರೋದರಿಂದ ಶಾಸಕರು ಬಿಜೆಪಿ ಕಾರ್ಯಕರ್ತ ರನ್ನು ಬೆಂಬಲಿಸುವ, ಪ್ರೋತ್ಸಾಹಿಸುವ ಕಾರ್ಯಮಾಡಬಾರದು. ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಹೊಂದಿರುವವರನ್ನು ಶಾಸಕರು ಬದಲಾಯಿಸಬಾರದು ಸೇರಿದಂತೆ ಹಲವು ಷರತ್ತು ವಿಧಿಸಲಾಗಿದೆ.

ಈ ಷರತ್ತುಗಳಿಗೆ ಒಪ್ಪಿಕೊಂಡ್ರೇ ಶಾಸಕ ಶರತ್ ಬಚ್ಚೇಗೌಡರನ್ನು ಪಕ್ಷಕ್ಕೆ ಧಾರಾಳವಾಗಿ ಸೇರಿಸಿಕೊಳ್ಳಿ. ಇಲ್ಲದಿದ್ದಲ್ಲಿ ನಾವು ಬೇರೆ ದಾರಿ ನೋಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಹೀಗಾಗಿ ಈಗ ಕೆಪಿಸಿಸಿ ಅಧ್ಯಕ್ಷರು ಕಾಂಗ್ರೆಸ್ ಸೇರಬಯಸುತ್ತಿರುವ ಶಾಸಕ ಶರತ್ ಹಾಗೂ ಹೊಸಕೋಟೆಯ ಕಾಂಗ್ರೆಸ್ಸಿಗರ ಮಧ್ಯೆ ಸಂಧಾನ ಹಾಗೂ ಮಾತುಕತೆಯ ಸರ್ಕಸ್ ಆರಂಭಿಸಿದ್ದು ಎಷ್ಟರ ಮಟ್ಟಿಗೆ ಯಶಸ್ವಿಯಾಗ ಲಿದೆ ಕಾದು ನೋಡಬೇಕಿದೆ.