ಮಂಡ್ಯ: ಮಂಡ್ಯ ಜಿಲ್ಲೆಯ ಕಿಲಾರದಲ್ಲಿ ಒಂದೇ ಕುಟುಂಬದ ಸಹೋದರರಿಗೆ ಸೇರಿದ ಜಾನುವಾರುಗಳು ಒಂದಾದ ಮೇಲೊಂದರಂತೆ ಸಾವನ್ನಪ್ಪುತ್ತಿದ್ದು, ಊರಿಗೇ ಊರೇ ಕಂಗಾಲಾಗಿದೆ.
ಕಿಲಾರ ಗ್ರಾಮದ ಶಂಕರೇ ಗೌಡ ಹಾಗೂ ಕೃಷ್ಣೇ ಗೌಡ ಎಂಬುವವರಿಗೆ ಸೇರಿದ ಒಟ್ಟು 29 ಜಾನುವಾರುಗಳು ವಿಚಿತ್ರ ರೀತಿಯಲ್ಲಿ ಸಾವನ್ನಪ್ಪಿದ್ದು, ಕಂಗಾಲಾದ ಕುಟುಂಬಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಾಂತ್ವನ ಹೇಳಿದ್ದಾರೆ.
ಕಳೆದ ಎರಡೂವರೆ ವರ್ಷದಿಂದ ಈ ಇಬ್ಬರು ಸಹೋದರರಿಗೆ ಸೇರಿದ ಜಾನುವಾರುಗಳು ಮಾತ್ರ ವಿಚಿತ್ರ ರೀತಿಯಲ್ಲಿ ಸಾವನ್ನಪ್ಪುತ್ತಿರುವುದು ಗ್ರಾಮಸ್ಥರ ಹಾಗೂ ಈ ಕುಟುಂಬದ ಆತಂಕಕ್ಕೆ ಕಾರಣವಾಗಿದೆ. ಲಕ್ಷಾಂತರ ರೂಪಾಯಿ ನೀಡಿ ಖರೀದಿಸಿದ ಎತ್ತುಗಳು ಸೇರಿ ಒಟ್ಟು 29 ಜಾನುವಾರುಗಳು ಸಾವನ್ನಪ್ಪಿವೆ.
ಶಂಕರೇ ಗೌಡರಿಗೆ ಸೇರಿದ 22 ಜಾನುವಾರು ಹಾಗೂ ಕೃಷ್ಣೇ ಗೌಡರಿಗೆ ಸೇರಿದ 7 ಜಾನುವಾರುಗಳು ಇದುವರೆಗೂ ಸಾವನ್ನಪ್ಪಿದೆ. ತರುವಾಗ ಆರೋಗ್ಯವಾಗಿರುವ ಆಕಳು,ಎತ್ತುಗಳು ಇವರ ಮನೆಗೆ ಬಂದ ಕೆಲವೇ ದಿನದಲ್ಲಿ ಸಾವನ್ನಪ್ಪುತ್ತಿರುವುದು ವಾಮಾಚಾರ ಸೇರಿದಂತೆ ಕೃತ್ರಿಮ ಪ್ರಯೋಗದ ಭಯ ಹುಟ್ಟಿಸಿದೆ.
ಸ್ಥಳಕ್ಕೆ ಭೇಟಿ ನೀಡಿದ ಮಾಜಿಸಿಎಂ ಕುಮಾರಸ್ವಾಮಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಪ್ರಾಣಿಗಳ ಸಾವಿಗೆ ನಿಖರ ಕಾರಣ ಪತ್ತೆಹಚ್ಚುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
( 29 Pets Death in two and half year in farmer home at mandya )