ಬ್ರಹ್ಮಾವರ : ರೈತರು ಬೆಳೆದ ಭತ್ತಕ್ಕೆ 2500 ರೂ. ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಕರಾವಳಿ ಭಾಗದ ರೈತರು ಹೋರಾಟಕ್ಕೆ ಇಳಿದಿದ್ದಾರೆ. ಬ್ರಹ್ಮಾವರ ಬಸ್ ನಿಲ್ದಾಣದ ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ನ್ನು ತಡೆದು, ಹೆದ್ದಾರಿಯಲ್ಲಿಯೇ ಭತ್ತವನ್ನು ಮಂಚಕ್ಕೆ ಬಡಿಯುವ ಮೂಲಕ ಪ್ರತಿಭಟನೆಯನ್ನು ನಡೆಸಿದ್ದಾರೆ. ಸರಕಾರ ಕೂಡಲೇ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಆಗ್ರಹಿಸಿದ್ದಾರೆ.

ಅಕಾಲಿಕ ಮಳೆಯಿಂದಾಗಿ ಬೆಳೆದ ಬೆಳೆ ನೆಲಕಚ್ಚಿದೆ. ಇನ್ನು ಬೆಳೆದ ಭತ್ತಕ್ಕೂ ಸರಿಯಾದ ಬೆಲೆ ಮಾರುಕಟ್ಟೆಯಲ್ಲಿ ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕರಾವಳಿ ಭಾಗದ ರೈತರು, ರೈತ ಮುಖಂಡರು ಪಕ್ಷಾತೀತವಾಗಿ ಹೋರಾಟಕ್ಕೆ ಧುಮುಕಿದ್ದಾರೆ. ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ರೈತರು ಪಾಲ್ಗೊಂಡು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ರೈತ ಮುಖಂಡರು ತಮ್ಮ ಸಮಸ್ಯೆಯನ್ನು ಜನರ ಮುಂದೆ ಇಡುವ ಕಾರ್ಯವನ್ನು ಮಾಡಿದ್ದಾರೆ. ಇದೇ ವೇಳೆಯಲ್ಲಿ ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂರ್ತಿಯವರ ಮೂಲಕ ರಾಜ್ಯ ಸರಕಾರ ಭತ್ತಕ್ಕೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಮನವಿಯನ್ನು ಸಲ್ಲಿಸಿದ್ದಾರೆ.

ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ಬಾಳೆಕುದ್ರು ಶ್ರೀ ಮಠದ ನೃಸಿಂಹಾಶ್ರಮ ಸ್ವಾಮೀಜಿಯವರು ಮಾತನಾಡಿ, ದೇಶದ ಬೆನ್ನೆಲುಬು ಎಂದು ಕರೆಸಿಕೊಳ್ಳುವ ರೈತ ಬೆಳೆದ ಬೆಳೆಯ ಲಾಭ ಮಧ್ಯವರ್ತಿಗಳ ಪಾಲಾಗುತ್ತಿದೆ. ರೈತನಿಗೆ ತಾವು ಬೆಳೆದ ಬೆಳೆಗೆ ಸರಕಾರ ಬೆಂಬಲ ಬೇಲೆ ನೀಡುವುದರಲ್ಲಿ ಸರಕಾರಕ್ಕೆ ನಷ್ಟ ಇರುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ : ರೈತರ ಮಕ್ಕಳ ಉನ್ನತ ಶಿಕ್ಷಣ ಪ್ರೋತ್ಸಾಹಕ್ಕೆ ಹೊಸ ಶಿಷ್ಯ ವೇತನ : ರಾಜ್ಯ ಸರ್ಕಾರದ ಆದೇಶ
ಇದನ್ನೂ ಓದಿ : Boat Fire : ಅರಬ್ಬಿ ಸಮುದ್ರದಲ್ಲಿ ಬೆಂಕಿ ಅವಘಡ : ಸುಟ್ಟು ಕರಕಲಾಯ್ತು ಬೋಟ್ : 7 ಮೀನುಗಾರರ ರಕ್ಷಣೆ