ಚಿಕ್ಕಮಗಳೂರು : ಕೊರೊನಾ ವೈರಸ್ ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ಆದರೆ ಜನರು ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರೋದಕ್ಕೆ ಭಯ ಪಡ್ತಿಲ್ಲ. ಬದಲಾಗಿ ಕೊರೊನಾ ಸೋಂಕಿತರಿಗೆ ಆಸ್ಪತ್ರೆಗಳು ಮಾಡುತ್ತಿರುವ ಬಿಲ್ ಗೆ ಹೆದರುತ್ತಿದ್ದಾರೆ. ಇದಕ್ಕೆ ಸ್ಪಷ್ಟ ಉದಾಹರಣೆಯಾಗಿರೋದು ಈ ಸ್ಟೋರಿ. ಕೊರೊನಾ ಸೋಂಕಿತನೋರ್ವನಿಗೆ ಆಸ್ಪತ್ರೆಯೊಂದು ಬರೋಬ್ಬರಿ 9 ಲಕ್ಷ ರೂಪಾಯಿ ಬಿಲ್ ಮಾಡಿದೆ. ದುರಂತವೆಂದ್ರೆ ಕೊರೊನಾ ಸೋಂಕಿತನ ಬಿಲ್ ಗೆ ಆಸ್ಪತ್ರೆ ಕೊಟ್ಟಿದ್ದು ಕೇವಲ 1 ರೂಪಾಯಿ ಡಿಸ್ಕೌಂಟ್.

ಹೌದು, ಇಂತಹ ಅಮಾನವೀಯ ಘಟನೆ ನಡೆದಿರೋದು ಕಾಫಿನಾಡು ಚಿಕ್ಕಮಗಳೂರು ನಗರದಲ್ಲಿರುವ ಆಶ್ರಯ ಆಸ್ಪತ್ರೆಯಲ್ಲಿ. ಕೊರೊನಾ ವೈರಸ್ ಸೋಂಕಿತರ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳು ಲಕ್ಷ ಲಕ್ಷ ರೂಪಾಯಿ ಲೂಟಿ ಹೊಡೆಯುತ್ತಿವೆ. ಹೀಗಾಗಿಯೇ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯಲಾರದೆ ಜನರು ಪರದಾಡುತ್ತಿದ್ದಾರೆ.

ಖಾಸಗಿ ಆಸ್ಪತ್ರೆಯ ಹಣದ ದಾಹಕ್ಕೆ ಈ ಘಟನೆ ಬೆಸ್ಟ್ ಎಕ್ಸಾಂಪಲ್. ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಪಿಳ್ಳೆನಹಳ್ಳಿಯ 70 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿತ್ತು. ಅವರು ಆಶ್ರಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಅವರ ಚಿಕಿತ್ಸೆಗೆ ಆಸ್ಪತ್ರೆ ಮಾತ್ರ ಬರೋಬ್ಬರಿ 9 ಲಕ್ಷ ರೂ. ಬಿಲ್ ವಿಧಿಸಿದೆ.

ಕೊರೊನಾದಿಂದ ಮೃತಪಟ್ಟಿರೋ ಕುಟುಂಬಕ್ಕೆ ಖಾಸಗಿ ಆಸ್ಪತ್ರೆಯ ಬಿಲ್ ನೋಡಿ ಶಾಕ್ ಆಗಿದೆ. ಕೊರೊನಾದಿಂದ ಮೃತಪಟ್ಟ ವ್ಯಕ್ತಿಗೆ 9,25,601 ರೂ. ಬೀಲ್ ನೀಡಲಾಗಿತ್ತು. ಬಳಿಕ ಒಟ್ಟು ಬಿಲ್ ಮೊತ್ತದಲ್ಲಿ ಆಸ್ಪತ್ರೆ 1 ರೂ. ವಿನಾಯಿತಿ ನೀಡಿದೆ. ಕಾಂಗ್ರೆಸ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷರ ಒಡೆತನದಲ್ಲಿರುವ ಖಾಸಗಿ ಆಸ್ಪತ್ರೆ ಬಿಲ್ ವಿರುದ್ದ ಇದೀಗ ಸಾರ್ವಜನಿಕರಿಂದಲೂ ಭಾರೀ ಅಸಮಾಧಾನ ವ್ಯಕ್ತವಾಗಿದೆ. ಬಿಲ್ನಿಂದ ಕಂಗೆಟ್ಟಿರುವ ಕುಟುಂಬಸ್ಥರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ರಾಜ್ಯ ಸರಕಾರ ಹಾಗೂ ಆರೋಗ್ಯ ಇಲಾಖೆ ಜನರಲ್ಲಿ ಕೊರೊನಾ ತಪಾಸಣೆಯನ್ನು ಮಾಡಿಸುವಂತೆ ವಿನಂತಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಖಾಸಗಿ ಆಸ್ಪತ್ರೆಗಳು ಕೊರೊನಾ ಹೆಸರಲ್ಲಿ ಮಾಡುವ ಲೂಟಿಯಿಂದಲೇ ಜನರು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಖಾಸಗಿ ಆಸ್ಪತ್ರೆಯ ವಿರುದ್ದ ಸರಕಾರ ಸೂಕ್ತ ಕ್ರಮಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಜನರು ಆಗ್ರಹಿಸಿದ್ದಾರೆ.