ಬೆಂಗಳೂರು : ಹಿರಿಯ ಪತ್ರಕರ್ತ, ಖ್ಯಾತ ಬರಹಗಾರ ರವಿ ಬೆಳಗೆರೆ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಹಾಯ್ ಬೆಂಗಳೂರು ಕಚೇರಿಯಲ್ಲಿದ್ದ ವೇಳೆಯಲ್ಲಿ ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಅಪೊಲೋ ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ಪ್ರಾರ್ಥನಾ ಶಾಲೆಯಲ್ಲಿ ರವಿ ಬೆಳಗೆರೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಶುಕ್ರವಾರ ಬೆಳ್ಳಗ್ಗೆ 9 ಗಂಟೆಯಿಂದ ರವಿ ಬೆಳಗೆರೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಬಳ್ಳಾರಿಯಲ್ಲಿ ಮಾರ್ಚ್ 15, 1958ರಲ್ಲಿ ಜನನಿಸಿದ ರವಿ ಬೆಳಗೆರೆ ಪತ್ರಿಕರ್ತರಾಗಿ ಅತೀ ಹೆಚ್ಚು ಓದುಗರ ಬಳಗವನ್ನು ಹೊಂದಿದ್ದರು. ಪತ್ರಿಕಾರಂಗದ ಹಲವು ವಿಭಾಗದಲ್ಲಿ ಕೆಲಸ ಮಾಡಿದವರು.

ಹುಟ್ಟೂರಾಗಿರುವ ಬಳ್ಳಾರಿಯಲ್ಲಿಯೇ ಶಿಕ್ಷಣವನ್ನು ಪೂರೈಸಿದ ರವಿಬೆಳಗೆರೆ ಅವರು ಉಪನ್ಯಾಸಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ನಂತರ ಲಂಕೇಶ್ ಪತ್ರಿಕೆಯ ಮೂಲಕ ಪತ್ರಿಕಾರಂಗಕ್ಕೆ ಕಾಲಿಟ್ಟ ರವಿ ಬೆಳಗೆರೆ, 1995 ರಲ್ಲಿ ಹಾಯ್ ಬೆಂಗಳೂರು ವಾರ ಪತ್ರಿಕೆ ಪ್ರಾರಂಭ ಮಾಡುತ್ತಾರೆ.
ಕೇವಲ ಪತ್ರಕರ್ತರಾಗಿ ಮಾತ್ರವಲ್ಲದೇ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕ್ರೈಂ ಡೈರಿ ಕಾರ್ಯಕ್ರಮದ ಮೂಲಕ ನಿರೂಪಕರಾಗಿಯೂ ಗುರುತಿಸಿಕೊಂಡಿದ್ದರು. ಅವರ ನಿರೂಪಣೆಯಲ್ಲಿ ಬರುತ್ತಿದ್ದ ಕ್ರೈಂ ಡೈರಿ ರವಿ ಬೆಳಗೆರೆ ಅವರಿಗೆ ದೊಡ್ಡ ಮಟ್ಟದ ಹೆಸರನ್ನು ತಂದುಕೊಟ್ಟಿತ್ತು. ಅಲ್ಲದೇ ಕಾರ್ಯಕ್ರಮದ ಮೂಲಕ ಅತೀ ಹೆಚ್ಚು ವಿಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಕಿರುತೆರೆಯಲ್ಲಿಯೂ ಬೆಳಗೆರೆ ಕಾಣಿಸಿಕೊಂಡಿದ್ದು ಅವರ ನಿರೂಪಣೆ ಮೆಚ್ಚುಗೆಗೆ ಪಾತ್ರವಾಗಿತ್ತು. ಬಿಗ್ ಬಾಸ್ ನ ಕೊನೆಯ ಸೀಸನ್ ನಲ್ಲಿಯೂ ಬೆಳಗೆರೆ ಭಾಗವಹಿಸಿದ್ದರು.
ಅಪರಾಧ ಜಗತ್ತಿನ ಬಗ್ಗೆ ಅವರು ಬರೆದ ಪುಸ್ತಕಗಳು ಲೆಕ್ಕವೇ ಇಲ್ಲ. ಸರ್ಪ ಸಂಬಂಧ, ಭೀಮಾತೀರದ ಹಂತಕರು, ನೀ ಹಿಂಗ ನೋಡಬೇಡ ನನ್ನ, ಡಿ ಕಂಪನಿ, ರಾಜ್ ಲೀಲಾ ವಿನೋದ ಸೇರಿದಂತೆ ಹಲವು ಕೃತಿಗಳನ್ನು ಬರೆದಿದ್ದಾರೆ. ಯುವ ಮನಸುಗಳಿಗಾಗಿ ಅವರು ಆರಂಭಿಸಿದ್ದ ಓ ಮನಸೆ ಪಾಕ್ಷಿಕ ಸಹ ಜನಮನ್ನಣೆಗೆ ಪಾತ್ರವಾಗಿತ್ತು.
ಕರ್ಮವೀರ, ಕಸ್ತೂರಿ, ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಕೆಲಸ ಮಾಡಿದ್ದ ರವಿಬೆಳಗೆರೆ ಭಾವನ ಆಡಿಯೋ , ಭಾವನ ಪ್ರಕಾಶನ , ಪ್ರರ್ಥಾನ ಶಾಲೆಯ ಸಂಸ್ಥಾಪಕರೂ ಹೌದು. ಪತ್ರಿಕಾರಂಗದಲ್ಲಿ ಅವರು ಮಾಡಿದ ಸಾಧನೆ ಮೀಡಿಯಾ ಅಕಾಡೆಮಿ, ಕರ್ನಾಟಕ ರಾಜ್ಯೋತ್ಸವ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.