ಬೆಂಗಳೂರು : ಉದ್ಯಮಿಯೊಬ್ಬರ ಕಾರನ್ನುಸುಮಾರು 6 ಕಿ.ಮೀ. ದೂರದವರೆಗೆ ಹಿಂಬಾಲಿಸಿ ಸುಮಾರು 6 ಲಕ್ಷ ರೂಪಾಯಿ ದರೋಡೆ ಮಾಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನಡೆದಿದೆ.

ಕೇರಳ ಮೂಲದ ಉದ್ಯಮಿ ಸಮೀಲ್ ಎಂಬುವರು ಬೆಂಗಳೂರಿನ ಕಲ್ಯಾಣನಗರದಲ್ಲಿರುವ ಐಸಿಐಸಿಐ ಬ್ಯಾಂಕ್ ನಲ್ಲಿ ಹಣ ಜಮಾ ಮಾಡಲು ತೆರಳಿದ್ದರು. ಈ ವೇಳೆ ಬ್ಯಾಂಕ್ ಅವಧಿ ಮುಗಿದಿದ್ದರಿಂದ ಹಣವನ್ನು ವಾಪಸ್ ಕಾರಿನಲ್ಲಿಟ್ಟುಕೊಂಡು ಕಮ್ಮನಹಳ್ಳಿ ಕಡೆ ಬರುತ್ತಿದ್ದರು.
ಈ ವೇಳೆಯಲ್ಲಿ ಮೂರು ದ್ವಿಚಕ್ರ ವಾಹನಗಳಲ್ಲಿ ಬಂದ ಆರು ಮಂದಿ ದರೋಡೆಕೋರರು ಉದ್ಯಮಿ ಕಾರನ್ನು ಸುಮಾರು 6 ಕಿ.ಮೀ ವರೆಗೂ ಹಿಂಬಾಲಿಸಿದ್ದಾರೆ. ನಂತರ ಕಮ್ಮನಹಳ್ಳಿಯ ರೆಸ್ಟೋರೆಂಟ್ ಬಳಿ ಊಟಕ್ಕೆಂದು ಸಮೀಲ್ ಕಾರು ನಿಲ್ಲಿಸಿದ್ದಾರೆ. ಈ ವೇಳೆ ದರೋಡೆ ಕೋರರು ಕಾರಿನಲ್ಲಿ ಯಾರೊಬ್ಬರೂ ಇಲ್ಲದಿರುವುದನ್ನು ಗಮನಿಸಿ ಕಾರಿನ ಗಾಜು ಒಡೆದು ಬ್ಯಾಗ್ನಲ್ಲಿದ್ದ ಆರು ಲಕ್ಷ ಮೌಲ್ಯದ ರೋಲೆಕ್ಸ್ ವಾಚ್, 2.75 ಲಕ್ಷ ರೂ. ನಗದು, ಎಟಿಎಂ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಕಳವು ಮಾಡಿ ಪರಾರಿಯಾಗಿದ್ದಾರೆ.
ಘಟನೆಯ ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಸಮೀಲ್ ಅವರು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಸಿಸಿಟಿವಿ ಆಧರಿಸಿ ಪೊಲೀಸರು ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.