ಉತ್ತರ ಪ್ರದೇಶ: ಹಲವು ವರ್ಷಗಳ ಬಳಿಕ ದೇಶದಲ್ಲಿ ನನಸಾಗುತ್ತಿದ್ದ ಶ್ರೀರಾಮನ ಭಕ್ತರ ಅತಿದೊಡ್ಡ ಕನಸು ಶ್ರೀರಾಮಮಂದಿರ ನಿರ್ಮಾಣಕ್ಕೂ ಮುನ್ನವೇ ವಿವಾದಕ್ಕೆ ತುತ್ತಾಗಿದೆ. ದೇಣಿಗೆ ಹಣ ದುರ್ಬಳಕೆ ಮಾಡಿಕೊಂಡು ಭೂಮಿ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳು ಆರೋಪಿಸಿವೆ.

ಶ್ರೀರಾಮಜನ್ಮಭೂಮಿಯ ನಿವೇಶನದ ಬಳಿ ಇರುವ ಜಮೀನೊಂದನ್ನು 2 ಕೋಟಿ ರೂಪಾಯಿ ಖರೀದಿಸಿ 5 ನಿಮಿಷದಲ್ಲಿ ಅದೇ ಜಮೀನನ್ನು 18 ಕೋಟಿ ರೂಪಾಯಿ ಶ್ರೀರಾಮಜನ್ಮಭೂಮಿ ಟ್ರಸ್ಟ್ ಗೆ ಮಾರಾಟ ಮಾಡಲಾಗಿದೆ ಎಂದು ಎಎಪಿ, ಸಮಾಜವಾದಿ ಹಾಗೂ ಕಾಂಗ್ರೆಸ್ ಪಕ್ಷಗಳು ಆರೋಪಿಸಿವೆ.

ಅಷ್ಟೇ ಅಲ್ಲ ಶ್ರೀರಾಮಜನ್ಮಭೂಮಿ ಮಂದಿರ ನಿರ್ಮಾಣಕ್ಕಾಗಿ ಸಂಗ್ರಹವಾಗಿರುವ ದೇಣಿಗೆ ದುರ್ಬಳಕೆಯಾಗಿರುವ ಸಾಧ್ಯತೆ ಇದ್ದು, ಈ ಸಂಬಂಧ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ಲೆಕ್ಕ ಪರಿಶೋಧನಾ ಸಮಿತಿ ತನಿಖೆ ನಡೆಸಬೇಕೆಂದು ವಿರೋಧ ಪಕ್ಷಗಳು ಆಗ್ರಹಿಸಿವೆ.
ಈ ಅವ್ಯವಹಾರದ ವಿರುದ್ಧ ವಿರೋಧ ಪಕ್ಷಗಳು ಬಿಜೆಪಿ ಶ್ರೀರಾಮನ ಹೆಸರಿನಲ್ಲಿ ಜನರಿಗೆ ಮೋಸ ಮಾಡಿದೆ ಎಂದು ಆರೋಪಿಸಿದ್ದು, ಟ್ವೀಟರ್ ನಲ್ಲಿ ಹ್ಯಾಶ್ ಟ್ಯಾಗ್ ನಲ್ಲಿ ಟ್ರೆಂಡಿಂಗ್ ಕೂಡ ನಡೆಸಿದೆ. ಬಿಜೆಪಿಯಿಂದ ಶ್ರೀರಾಮನಿಗೆ ದೋಖಾ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಅಯೋಧ್ಯೆಯ ಶ್ರೀರಾಮಜನ್ಮಭೂಮಿಗೆ ಹೊಂದಿಕೊಂಡಿರುವ 12,080ಎಕರೆ ನಿವೇಶನವನ್ನು ಶ್ರೀರಾಮಜನ್ಮಭೂಮಿ ಟ್ರಸ್ಟ್ 2021 ರ ಮಾರ್ಚ್ 18 ರಂದು ಖರೀದಿಸಿದೆ. ಕುಸುಮಾ ಹಾಗೂ ಹರೀಶ್ ಪಾಠಕ್ ಈ ಜಮೀನನ್ನು ಟ್ರಸ್ಟ್ ಗೆ ಮಾರಿದ್ದಾರೆ.
ಆದರೆ ಈ ದಾಖಲೆಗಳ ಜೊತೆಗೆ ಇದೇ ಜಮೀನನ್ನು ರವಿ ಮೋಹನ್ ತಿವಾರಿ ಹಾಗೂ ಸುಲ್ತಾನ್ ಅನ್ಸಾರಿ ಶ್ರೀರಾಮಜನ್ಮಭೂಮಿ ಟ್ರಸ್ಟ್ ಗೆ ಮಾರಿರುವ ದಾಖಲೆಯೂ ಸಿಕ್ಕಿದೆ. ಇದಲ್ಲದೇ ಕುಸುಮಾ ಪಾಠಕ್ ಹಾಗೂ ಹರೀಶ್ ಪಾಠಕ್ ತಮ್ಮ 12080 ಅಡಿಯ ನಿವೇಶನವನ್ನು ರವಿ ಹಾಗೂ ಸುಲ್ತಾನ್ ಎಂಬವವರಿಗೆ 2 ಕೋಟಿ ರೂಪಾಯಿಗೆ ಮಾರಿದ ದಾಖಲೆ ಇದೆ. 2021 ರ ಮಾರ್ಚ್ 18 ರಂದು ಮಧ್ಯಾಹ್ನ ಇವರು ಜಮೀನು ಮಾರಿದ್ದು, ಸಂಜೆ 7 ಗಂಟೆಯ ವೇಳೆಗೆ ಇದೇ ಜಮೀನನ್ನು ರವಿ ಹಾಗೂ ಸುಲ್ತಾನ್ ಶ್ರೀರಾಮಜನ್ಮಭೂಮಿ ಟ್ರಸ್ಟ್ ಗೆ 18 .5 ಕೋಟಿಗೆ ಮಾರಾಟ ಮಾಡಿದ್ದು, ಹಾಗೂ 17 ಕೋಟಿ ರೂಪಾಯಿಯನ್ನು ಆರ್.ಟಿ.ಜಿ.ಎಸ್ ಮಾಡಿದ ದಾಖಲೆ ಇದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿರುವ ವಿರೋಧ ಪಕ್ಷಗಳು ದಾಖಲೆ ಬಿಡುಗಡೆ ಮಾಡಿದ್ದು, ಸೂಕ್ತ ತನಿಖೆ ನಡೆಯಬೇಕೆಂದು ಆಗ್ರಹಿಸಿದೆ.