ಮದುವೆ ತಡವಾಯಿತು ಅಂತಾ ಟವರ್ ಏರಿದ ವರ ..!!

ವಿಜಯನಗರ : ಯುವಕನಿಗೆ ಮನೆಯವರು ಹುಡುಗಿಯನ್ನು ನಿಶ್ಚಯ ಮಾಡಿಸಿದ್ದರು. ಆದ್ರೆ ಅಣ್ಣನ ಜೊತೆಗೆ ಮದುವೆ ಮಾಡುವುದಾಗಿ ತಿಳಿಸಿದ್ದರು. ಆದರೆ ತಿಂಗಳು ಕಳೆದರೂ ಮನೆಯವರು ಮದುವೆ ಮಾಡದಿರೋದಕ್ಕೆ ಮನನೊಂದ ಯುವಕನೋರ್ವ ಟವರ್ ಏರಿ ಬೆದರಿಕೆಯೊಡ್ಡಿದ್ದಾನೆ. ಅಷ್ಟಕ್ಕೂ ಈ ಘಟನೆ ನಡೆದಿರೋದು ಹೊಸಪೇಟೆಯಲ್ಲಿ.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ ನಿವಾಸಿಯಾಗಿರುವ ಚಿರಂಜೀವಿ (23 ವರ್ಷ) ಎಂಬ ಯುವಕನಿಗೆ ಕಳೆದೊಂದು ತಿಂಗಳ ಹಿಂದೆ ಮದುವೆ ನಿಶ್ಚಯವಾಗಿತ್ತು. ಆದರೆ ಚಿರಂಜೀವಿ ಅಣ್ಣನಿಗೆ ವಿವಾಹವಾಗಿರಲಿಲ್ಲ. ಹೀಗಾಗಿ ಅಣ್ಣ ತಮ್ಮನಿಗೆ ಒಟ್ಟಿಗೆ ಮದುವೆ ಮಾಡೋಣಾ ಅಂತಾ ಮನೆಯವರು ನಿರ್ಧಾರ ಮಾಡಿದ್ದರು. ಆದರೆ ಅಣ್ಣನಿಗೆ ಎಲ್ಲಿಯೂ ಹುಡುಗಿ ಫಿಕ್ಸ್ ಆಗದೆ ಮದುವೆಯನ್ನು ಮುಂದೂಡಿದ್ದಾರೆ.

ಇದರಿಂದ ಮನನೊಂದ ಚಿರಂಜೀವಿ ಮನೆಯಲ್ಲಿ ಮದುವೆ ಮಾಡಿಸುವಂತೆ ಪಟ್ಟು ಹಿಡಿದಿದ್ದಾನೆ. ಮನೆಯವರು ಮದುವೆ ಮಾಡಿಸದೇ ಇದ್ದಾಗ ಕೊನೆಗೆ ಸಿನಿಮಾ ಟಾಕೀಸ್ ರಸ್ತೆಯಲ್ಲಿರುವ ಟವರ್ ಏರಿ ಕುಳಿತು, ತನಗೆ ಕೂಡಲೇ ಮದುವೆ ಮಾಡಿಸಬೇಕು. ಇಲ್ಲವಾದ್ರೆ ತಾನು ಇಲ್ಲಿಂದಲೇ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಬೆದರಿಕೆಯೊಡ್ಡಿದ್ದಾನೆ.

ಸ್ಥಳೀಯರು ಯುವಕನನ್ನು ಟವರ್ ನಿಂದ ಕೆಳಗೆ ಇಳಿಸಲು ಎಷ್ಟೇ ಪ್ರಯತ್ನಿಸಿದ್ದರೂ ಕೂಡ ಪ್ರಯೋಜನವಾಗಿರಲಿಲ್ಲ. ಕೊನೆಗೆ ಸ್ಥಳಕ್ಕೆ ಬಂದ ಜೆಸ್ಕಾಂ ಅಧಿಕಾರಿಗಳು ಟವರ್ ಗೆ ನೀಡಿದ್ದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಎಷ್ಟೇ ಮನವೊಲಿಸಿದ್ರೂ ಯುವಕ ಕೆಳಗೆ ಇಳಿಯಲು ಒಪ್ಪಲೇ ಇಲ್ಲ. ಕೊನೆಗೆ ಯುವಕ ತಾನು ಕೆಳಗೆ ಇಳಿಯಲು ಕೆಲವು ಕಂಡಿಷನ್ ಹಾಕಿದ್ದಾನೆ. ಮನೆಯ ವರು ಕೂಡ ಅಣ್ಣನಿಗಿಂತ ಮೊದಲೇ ಮದುವೆ ಮಾಡಿಸಲು ಒಪ್ಪಿಗೆ ಸೂಚಿಸಿದ್ದಾರೆ.

ಅಲ್ಲದೇ ತನಗೆ ಯಾರೂ ಹೊಡೆಯಬಾರದು, ಬಡಿಯ ಬಾರದು ಅನ್ನೋ ಷರತ್ತು ವಿಧಿಸಿ ಕೆಳಗೆ ಇಳಿದಿದ್ದಾನೆ. ಕೆಲವರಿಗೆ ಆತಂಕ ಉಂಟಾಗಿದ್ರೆ ಇನ್ನೂ ಕೆಲವರಿಗೆ ಕೆಲ ಹೊತ್ತು ಮನರಂಜನೆ ಸಿಕ್ಕಿದ್ದು ಮಾತ್ರ ಸುಳ್ಳಲ್ಲ.

Comments are closed.