ಸಂಕಷ್ಟಕ್ಕೆ ಸಿಲುಕಿದ ದರ್ಶನ್ ನಾಯಕಿ….! ದಂಡದ ಜೊತೆ ಸಂಸದ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿ ನಟಿ…!!

ಚುನಾವಣೆ ವೇಳೆ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ ಆರೋಪ ಎದುರಿಸುತ್ತಿರುವ ನಟಿ ಹಾಗೂ ಸಂಸದೆ  ನವನೀತ್ ಕೌರ್ ಸಂಕಷ್ಟಕ್ಕೆ ಸಿಲುಕಿದ್ದು, ಬಾಂಬೈ ಹೈಕೋರ್ಟ್ ನಟಿಗೆ 2 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಚುನಾವಣೆ ವೇಳೆಯಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ ಆರೋಪದ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಮಾಣ ಪತ್ರ ರದ್ದುಪಡಿಸಿದ್ದು, 2 ಲಕ್ಷ ರೂಪಾಯಿ ದಂಡ ವಿಧಿಸಿದೆ. ಅಲ್ಲದೇ ಅಸಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಲು ನ್ಯಾಯಾಲಯ ನಟಿ ಹಾಗೂ ಸಂಸದೆ ನವನೀತ್ ಕೌರ್ ಗೆ 6 ವಾರಗಳ ಕಾಲಾವಕಾಶ ನೀಡಿದೆ.

ನಟಿ ನವನೀನ್ ಕೌರ್ ಮಹಾರಾಷ್ಟ್ರದ ಅಮರಾವತಿ ಕ್ಷೇತ್ರದಿಂದ ಕಳೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದರೆ ಈ ವೇಳೆ ಅವರು ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಶಿವಸೇನಾ ನಾಯಕ ಆನಂದ ರಾವ್ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಮಾಣ ಪತ್ರ ರದ್ದುಗೊಳಿಸಿದೆ. ಒಂದು ವೇಳೆ ನ್ಯಾಯಾಲಯ ನೀಡಿದ 6 ವಾರಗಳ ಕಾಲಾವಧಿಯಲ್ಲಿ ನವನೀತ್ ಕೌರ್ ಅಸಲಿ ಜಾತಿ ಪ್ರಮಾಣ ಪತ್ರ ಸಲ್ಲಿಸದೇ ಹೋದಲ್ಲಿ ಅವರನ್ನು ಸಂಸದ ಸ್ಥಾನದಿಂದ ಅಮಾನತ್ತುಗೊಳಿಸಿ ಅವರ ಸ್ಥಾನವನ್ನು ಪರಾಜಿತ ಶಿವಸೇನಾ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ನ್ಯಾಯಾಲಯದ ಆದೇಶವನ್ನು ಸ್ವೀಕರಿಸುತ್ತೇನೆ ಎಂದಿರುವ ನವನೀತ್ ಕೌರ್, ನನಗೆ ನ್ಯಾಯ ಸಿಗುವ ವಿಶ್ವಾಸವಿದೆ. ನಾನು ಸುಪ್ರೀಂಕೋರ್ಟ್ ಮೊರೆ ಹೋಗುತ್ತೇನೆ ಎಂದಿದ್ದಾರೆ.

ನಟಿಯಾಗಿ ಗುರುತಿಸಿಕೊಂಡಿರುವ ನವನೀತ್ ಕೌರ್, ಸ್ಯಾಂಡಲ್ ವುಡ್ ನಲ್ಲಿ ದರ್ಶನ್ ಜೊತೆ ದರ್ಶನ್ ಚಿತ್ರದಲ್ಲಿ ನಟಿಸಿದ್ದು, ಬಳಿಕ ತೆಲುಗು ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದರು.

Comments are closed.