ಮಂಗಳೂರು : ಕರಾವಳಿ ಭಾಗದಲ್ಲಿ ಕೊರೊನಾ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದೆ. ವಿಮಾನ ನಿಲ್ದಾಣ, ಬಂದರು ಸೇರಿದಂತೆ ಹಲವೆಡೆಗಳಲ್ಲಿ ಕೊರೊನಾ ತಪಾಸಣೆ ನಡೆಸುತ್ತಿರೋ ಜಿಲ್ಲಾಡಳಿತ ಇದೀಗ ಕೇರಳಿಗರ ಮೇಲೂ ಹದ್ದಿನಕಣ್ಣಿಟ್ಟಿದ್ದು, ತಲಪಾಡಿ ಗಡಿಯಲ್ಲಿ ಜಿಲ್ಲೆ ಪ್ರವೇಶಿಸುವವರ ಆರೋಗ್ಯ ತಪಾಸಣೆಗೆ ಮುಂದಾಗಿದೆ.

ಕೇರಳದಲ್ಲಿ ಕೊರೊನಾ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ News next ಸಾಮಾಜಿಕ ಕಳಕಳಿಯ ಹಿನ್ನೆಲೆಯಲ್ಲಿ ಮಾರ್ಚ್ 15ರಂದು ‘ಕೇರಳ ಗಡಿಯಲ್ಲಿಲ್ಲ ಸ್ಕ್ರೀನಿಂಗ್ : ಕರಾವಳಿಗೆ ಕಾದಿಗೆ ಕೊರೊನಾ ಗಂಡಾಂತರ’ ಹೆಸರಲ್ಲಿ ವರದಿಯನ್ನು ಪ್ರಕಟಿಸಲಾಗಿತ್ತು. ವರದಿ ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಕೊಡಗು ಜಿಲ್ಲಾಡಳಿತ ಕರಿಕೆ ಗಡಿಯಲ್ಲಿ ಸ್ಕ್ರೀನಿಂಗ್ ಕಾರ್ಯವನ್ನು ಆರಂಭಿಸಿತ್ತು.

ಇದೀಗ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೂಡ ಕೇರಳಿಗರ ಮೇಲೆ ಹದ್ದಿನಕಣ್ಣಿಟ್ಟಿದ್ದು, ಇಂದಿನಿಂದ ಸ್ಕ್ರೀನಿಂಗ್ ಕಾರ್ಯವನ್ನು ಆರಂಭಿಸಿದೆ.
ಮಂಗಳೂರು, ಉಡುಪಿಗೆ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಕೇರಳಿಗರು ಆಗಮಿಸುತ್ತಿರೋದ್ರಿಂದಾಗಿ ಕೊರೊನಾ ವೈರಸ್ ಹರಡುವ ಭೀತಿ ಎದುರಾಗಿತ್ತು. ಅದ್ರಲ್ಲೂ ಗಡಿಭಾಗಗಳಲ್ಲಿ ಸ್ಕ್ರೀನಿಂಗ್ ಕಾರ್ಯ ನಡೆಯುತ್ತಿಲ್ಲವಾದ್ದರಿಂದ ಕರಾವಳಿಗರಿಗೆ ಆತಂಕ ಎದುರಾಗಿತ್ತು. ಆದ್ರೀಗ ಜಿಲ್ಲಾಡಳಿತ ಕರಾವಳಿಗರ ಆತಂಕವನ್ನು ದೂರ ಮಾಡಿದೆ.