ಚಿಕ್ಕಮಗಳೂರು : ಆ ಮನೆಯ ತುಂಬೆಲ್ಲಾ ಮದುವೆಯ ಸಂಭ್ರಮ. ಮನೆ ಮಗಳ ಮದುವೆಯನ್ನು ಅದ್ದೂರಿಯಾಗಿ ನಡೆಸಿದ ಖುಷಿಯಲ್ಲಿ ಮನೆ ಮಂದಿಯಿದ್ರು. ಆದರೆ ಅವರ ಸಂತೋಷ ಕೆಲವೇ ಗಂಟೆಗಳಿಗೆ ಸೀಮಿತವಾಗಿತ್ತು. ಯಾಕೆಂದ್ರೆ ಸ್ನಾನಕ್ಕೆ ತೆರಳಿದ್ದ ಮನೆಯ 5 ಮಂದಿ ಯುವಕರು ಕೆರೆಯಲ್ಲಿ ನೀರು ಪಾಲಾಗಿದ್ದಾರೆ.

ಇಂತಹ ಮನಕಲಕುವ ಘೋರ ದುರಂತ ಘಟನೆ ನಡೆದಿರೋದು ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಗ್ರಾಮದ ಹಿರೇಕೆರೆಯ ಬಳಿ. ವಸ್ತಾರೆ ಗ್ರಾಮದ ಸಂದೀಪ್, ರಾಘವೇಂದ್ರ ಸೇರಿದಂತೆ ಹಂಚರವಳ್ಳಿ ಗ್ರಾಮದ ಸಹೋದರರಾದ ದೀಪಕ್, ದಿಲೀಪ್, ಸುದೀಪ್ ಎಂಬವರೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದುರ್ದೈವಿಗಳು.
ಕಳೆದ ಶುಕ್ರವಾರ ವಸ್ತಾರೆಯಲ್ಲಿ ಸಂದೀಪ್, ಅಕ್ಕ ಸಂಧ್ಯಾರ ವಿವಾಹ ಮಹೋತ್ಸವ ಇತ್ತು. ನಿನ್ನೆ ಬೀಗರ ಊಟ ಇದ್ದ ಕಾರಣ ನೆಂಟರೆ ಲ್ಲರೂ ವಸ್ತಾರೆಗೆ ಆಗಮಿಸಿದ್ರು, ಇಂದು ಬೆಳಗ್ಗೆ ಸಂದೀಪ್ ಸಹೋದರಿ ಸಂಧ್ಯಾರನ್ನ ಗಂಡನ ಮನೆಗೆ ಕಳುಹಿಸಿ ಇತ್ತ ಸಂದೀಪ್ ಸೇರಿದಂತೆ ಐವರು ಹುಡುಗರು, ಕೆರೆಗೆ ಈಜಲು ಬಂದಿದ್ರು. ಅಷ್ಟೇ ಕೆರೆಗೆ ಈಜಲು ಇಳಿದಿವರು ಮೇಲೆ ಏಳಲ್ಲೇ ಇಲ್ಲ. ಮೊದಲು ರಾಘು ಎಂಬ ಯುವಕ ಕೆರೆಗೆ ಇಳಿದಿದ್ದು, ನೀರಿನಲ್ಲಿ ಮುಳುಗಿದ್ದಾನೆ.

ನೀರಿನಲ್ಲಿ ಮುಳಗಿದ್ದ ರಾಘವೇಂದ್ರನನ್ನ ಬದುಕಿಸಲು ಮೊದಲು ಇಬ್ಬರು ಇಳಿದಿದ್ದಾರೆ. ಆಗ ಮೂವರು ಕೂಡ ನೀರಿನಲ್ಲಿ ಮುಳುಗಿ ಒದ್ದಾಟ ನಡೆಸಿದ್ದಾರೆ. ಉಳಿದ ಇಬ್ಬರು ಯುವಕರು ನೀರಲ್ಲಿ ಮುಳಗಿದ ಮೂವರನ್ನ ಬದುಕಿಸಲು ಮುಂದಾಗಿದ್ದಾರೆ. ಆಗ ಐವರು ಕೂಡ ಮೇಲೆ ಬರಲಾರದೇ ಸಾವನ್ನಪ್ಪಿದ್ದಾರೆ. ಈ ವೇಳೆ ಅನೇಕರು ಕೂಡ ಕೆರೆಯಲ್ಲಿ ಮುಳಗುತ್ತಿರೋದನ್ನ ಕಂಡು ರಕ್ಷಿಸಲು ಒಡೋಡಿ ಬಂದ್ರೂ ಪ್ರಯೋಜನವಾಗಿಲ್ಲ. ನೋಡು ನೋಡ್ತಿಂದ್ದಂತೆ ಐವರು ಜಲಸಮಾಧಿಯಾಗಿದ್ದಾರೆ.
ಮಧ್ಯಾಹ್ನದಿಂದ ಸಂಜೆವರೆಗೂ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಯ್ತು. ಮೂರು ಗಂಟೆ ಸಮಯದಲ್ಲಿ ಐವರು ಮೃತದೇಹವನ್ನ ಹೊರಗೆ ತೆಗೆಯಲಾಯ್ತು, ಎದೆಮಟ್ಟಕ್ಕೆ ಬೆಳೆದ ಮಕ್ಕಳನ್ನ ಕಳೆದುಕೊಂಡ ಪೋಷಕರು, ಸಂಬಂಧಿಕರು, ಸ್ನೇಹಿತರೆಲ್ಲರೂ ಆಕ್ರಂದನ ಇಡೀ ಊರನ್ನೇ ದುಃಖದ ಮಡುವಿನಲ್ಲಿ ಮುಳುಗಿಸಿತ್ತು. ಒಟ್ಟಿನಲ್ಲಿ ಮದುವೆ ಮಾಡಿ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ನೋವು ಶಾಶ್ವತವಾಗಿ ಉಳಿಯುವಂತೆ ಆಗಿದ್ದು ಮಾತ್ರ ನಿಜಕ್ಕೂ ದುರಂತ.

ಯುವಕರ ಸಾವನ್ನಪ್ಪಿದ್ದ ಸುದ್ದಿ ಕೇಳುತ್ತಲೇ ಇಡೀ ಊರಿಗೆ ಊರೇ ಕೆರೆ ಬಳಿ ಬಂದು ಕಂಬನಿ ಮಿಡಿದ್ರು. ಅದ್ರಲ್ಲೂ ಮೂವರು ಮಕ್ಕಳನ್ನ ಕಳೆದುಕೊಂಡ ದಂಪತಿಯ ಆಕ್ರಂದನವಂತೂ ಮುಗಿಲು ಮುಟ್ಟಿತ್ತು. ಸಂಭ್ರಮದ ಮನೆಯಲ್ಲೂ ಕೂಡ ಸೂತಕ ಮನೆಮಾಡಿತ್ತು.. ಸಂದೀಪ್ ಸಾಕಿದ್ದ ಡ್ಯಾನಿ ಎಂಬ ಸಾಕುನಾಯಿ ಕೂಡ ಮಾಲೀಕನ ಸಾವನ್ನ ಕೇಳಿ ಕೆರೆ ಬಳಿಯೇ ಮೊಕ್ಕಾಂ ಹೂಡಿ ಮೂಕರೋದನೆ ತೋರುತ್ತಿತ್ತು. ಕೊನೆಗೆ ಸಂದೀಪ್ ಮೃತದೇಹವನ್ನ ಅಂಬ್ಯುಲೆನ್ಸ್ ನಲ್ಲಿ ತೆಗೆದುಕೊಂಡು ಹೋಗುವಾಗಲೂ ಅಂಬ್ಯುಲೆನ್ಸ್ನಲ್ಲಿ ಫಾಲೋ ಮಾಡಿಕೊಂಡು ಹೋದ ದೃಶ್ಯ ಕಣ್ಣೀರು ತರಿಸುತ್ತಿತ್ತು.