ಭಾರತದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ನೀಡುವ ಅತ್ಯುನ್ನತ ಗೌರವ ಪದ್ಮಶ್ರೀ ಪ್ರಶಸ್ತಿ. ಈ ಪ್ರಶಸ್ತಿಗೆ ಈ ಭಾರಿ ಸಾರ್ವಜನಿಕರೇ ಹೆಸರುಗಳನ್ನು ನಾಮಿನೇಟ್ ಮಾಡುವ ಅವಕಾಶವನ್ನು ಪೀಪಲ್ಸ್ ಪದ್ಮ ಹೆಸರಿನಲ್ಲಿ ಕೇಂದ್ರ ಸರ್ಕಾರ ನೀಡಿದೆ. ಹೀಗಾಗಿ ಕನ್ನಡದ ಸಾಧಕರಾದ ಸಂಗೀತ ನಿರ್ದೇಶಕ ,ನಾದಬ್ರಹ್ಮ ಹಂಸಲೇಖ ಹಾಗೂ ಹಿರಿಯ ನಟ ಅನಂತ ನಾಗ್ ಹೆಸರನ್ನು ನಿರ್ದೇಶನ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಆರಂಭವಾಗಿದೆ.

ಚಿತ್ರಕಥೆ, ಸಂಭಾಷಣೆ, ಸಂಗೀತ ನಿರ್ದೇಶನ ಗೀತರಚನೆಯ ಮೂಲಕ ಕನ್ನಡ ಸಿನಿಮಾ ಲೋಕವನ್ನು ಆಳಿದ ನಾದಬ್ರಹ್ಮ ಸಂಗೀತ ಕ್ಷೇತ್ರಕ್ಕೆ ಸಿನಿಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ನೂರಾರು ಗಾಯಕರಿಗೆ ಪ್ರಾತಃಸ್ಮರಣಿಯರಾದ ನಾದಬ್ರಹ್ಮ ಹಂಸಲೇಖ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಲ್ಲಬೇಕೆಂಬ ಕೂಗು ಕನ್ನಡಿಗರಿಂದ ಕೇಳಿಬರುತ್ತಿದೆ.

ಅಂದಾಜು 500 ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನೀಡಿದ ಹಂಸಲೇಖ, ಇಂದಿಗೂ ತಮ್ಮ ಸಂಗೀತ ಸೇವೆಯನ್ನು ಮುಂದುವರೆಸುತ್ತಿದ್ದಾರೆ. ಇನ್ನು ಎಲ್ಲ ಕಾಲಕ್ಕೂ, ಎಲ್ಲ ರೀತಿಯ ಪಾತ್ರಗಳಿಗೂ ಸರಿಹೊಂದುವ ನಟ ಅನಂತ ನಾಗ್. ನಾಲ್ಕೂವರೆ ದಶಕದಿಂದ ಸಿನಿಮಾದಲ್ಲಿ ತೊಡಗಿಸಿಕೊಂಡ ಅನಂತ ನಾಗ್, ತಮ್ಮ ವಿಶಿಷ್ಟ ಮ್ಯಾನರಿಸಂನಿಂದಲೇ ಹೆಸರಾದವರು.

ಅಂದಾಜು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಅನಂತ ನಾಗ್, ಕೇವಲ ಕನ್ನಡ ಮಾತ್ರವಲ್ಲ, ಹಿಂದಿ,ಮಲೆಯಾಳಂ,ಮರಾಠಿ,ತೆಲುಗು,ತಮಿಳು ಚಿತ್ರದಲ್ಲಿ ನಟಿಸಿದ್ದಾರೆ.ಹೀಗಾಗಿ ಈ ಇಬ್ಬರೂ ಹಿರಿಯರನ್ನು ಗೌರವಿಸುವ ನಿಟ್ಟಿನಲ್ಲಿ ಪೀಪಲ್ಸ್ ಪದ್ಮ ಅಡಿಯಲ್ಲಿ ಅನಂತ ನಾಗ್ ಹಾಗೂ ಹಂಸಲೇಖ ಹೆಸರು ಸೂಚಿಸುವಂತೆ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಆರಂಭವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಟ್ವೀಟ್ ಮಾಡಿದ್ದು, ತಳಮಟ್ಟದಲ್ಲಿ ಅಸಾಧಾರಣ ಕೆಲಸ ಮಾಡಿದ ಹಾಗೂ ಬೆಳಕಿಗೆ ಬರದವರನ್ನು ಗುರುತಿಸಿ ಪದ್ಮ ಪ್ರಶಸ್ತಿಗೆ ನಾಮಿನೇಟ್ ಮಾಡುವಂತೆ ಕೋರಿದ್ದಾರೆ. #peoples padma ಅಡಿಯಲ್ಲಿ ನಾಮಿನೇಟ್ ಮಾಡಬಹುದಾಗಿದ್ದು, ಸಪ್ಟೆಂಬರ್ 15 ರವರೆಗೆ ನಾಮಿನೇಶನ್ ಗೆ ಅವಕಾಶವಿದೆ.