ಬೆಳಗಾವಿ: ರಾಜ್ಯದಲ್ಲಿ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನಕ್ಕೊಂದು,ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದರೇ, ಅತ್ತ ಸಿಡಿ ಷಡ್ಯಂತ್ರದ ಮಹಾನಾಯಕ ಎಂಬ ಆರೋಪಕ್ಕೆ ತುತ್ತಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇನ್ನೂ ಈ ಪ್ರಕರಣದ ಬಗ್ಗೆ ಮಾತನಾಡುವುದಿಲ್ಲ ಎನ್ನೋ ಖಡಕ್ ನಿರ್ಣಯ ಘೋಷಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ.ಶಿವಕುಮಾರ್ ಸಧ್ಯ ನಮ್ಮ ಮುಂದಿರೋದು ಉಪಚುನಾವಣೆ. ಉಪಚುನಾವಣೆ ಗೆಲ್ಲೋ ಬಗ್ಗೆ ನಾವು ಗಮನ ಹರಿಸಬೇಕಿದೆ. ಹೀಗಾಗಿ ರಮೇಶ್ ಜಾರಕಿಹೊಳಿ ಸಿಡಿ ವಿಚಾರದಲ್ಲಿ ನಾನೇನು ಮಾತನಾಡುವುದಿಲ್ಲ. ಕಾನೂನಿದೆ. ಕಾನೂನು ತನ್ನ ಕೆಲಸ ನಿರ್ವಹಿಸುತ್ತದೆ ಅನ್ನೋ ವಿಶ್ವಾಸವಿದೆ ಎಂದರು.

ಸಿಡಿ ಪ್ರಕರಣದ ಯುವತಿಯ ಪೋಷಕರು ಡಿ.ಕೆ.ಶಿವಕುಮಾರ್ ಈ ಎಲ್ಲ ಘಟನೆಗಳ ಸೂತ್ರಧಾರ ಎಂದು ಆಕ್ರೋಶವ್ಯಕ್ತಪಡಿಸಿದ ಬೆನ್ನಲ್ಲೇ ಉಪಚುನಾವಣೆ ಪ್ರಚಾರಕ್ಕಾಗಿ ಡಿಕೆಶಿ ಬೆಳಗಾವಿಗೆ ಆಗಮಿಸಿದ್ದಾರೆ. ಅಷ್ಟೇ ಅಲ್ಲ ನಿನ್ನೆ ಡಿಕೆಶಿ ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಬೆಂಬಲಿಗರ ತೀವ್ರ ವಿರೋಧ, ಆಕ್ರೋಶ, ಚಪ್ಪಲಿ,ಕಲ್ಲು ಎಸೆತಕ್ಕೂ ಗುರಿಯಾಗಿದ್ದರು.

ಇದರ ಬೆನ್ನಲ್ಲೇ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡದಿರಲು ಹಾಗೂ ಕೇವಲ ಉಪಚುನಾವಣೆ ಗೆಲುವಿನತ್ತ ಗಮನ ಹರಿಸಲು ಡಿಕೆಶಿ ನಿರ್ಧರಿಸಿದ್ದಾರಂತೆ. ಕಾಂಗ್ರೆಸ್ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ರಮೇಶ್ ಜಾರಕಿಹೊಳಿ ಸಹೋದರ ಸತೀಶ್ ಜಾರಕಿಹೊಳಿಗೆ ಟಿಕೇಟ್ ನೀಡಿದೆ.

ಈ ಬಗ್ಗೆ ಮಾತನಾಡಿದ ಡಿಕೆಶಿ, ನಾನು ಕೆಪಿಸಿಸಿ ಅಧ್ಯಕ್ಷನಾಗುತ್ತಿದ್ದಂತೆ ಎಲ್ಲರೂ ಆ ವಿಭಾಗ- ಈ ವಿಭಾಗದ ಇನ್ ಚಾರ್ಜ್ ಕೊಡಿ ಎಂದು ದುಂಬಾಲು ಬಿದ್ದಿದ್ದರು. ಆದರೆ ಸತೀಶ್ ಜಾರಕಿಹೊಳಿಯವರು. ಶಿಸ್ತು,ನಾಯಕತ್ವ ಬೆಳೆಸುವಂತ ತರಬೇತಿ ವಿಭಾಗದಲ್ಲಿ ಅವಕಾಶ ಕೇಳಿದರು. ಇಂತಹ ನಾಯಕನಿಗೆ ಇವತ್ತು ಕಾಂಗ್ರೆಸ್ ಟಿಕೇಟ್ ನೀಡಿದೆ. ಇದಕ್ಕೆ ಯಾರೊಬ್ಬರೂ ವಿರೋಧ ವ್ಯಕ್ತಪಡಿಸಿಲ್ಲ ಎಂದರು.