ಬೆಂಗಳೂರು: ಬಿಜೆಪಿಯನ್ನು ಸದಾಕಾಲ ಜಾತಿ,ಧರ್ಮದ ಸೂಜಿಬಳಸಿ ಚುಚ್ಚುವ ಕಾಂಗ್ರೆಸ್ ಗೆ ಇದೇ ಮೊದಲ ಬಾರಿಗೆ ಬಿಜೆಪಿ ತಿರುಗೇಟು ನೀಡಿದೆ. ಮಾಜಿ ಮೇಯರ್ ಸಂಪತ್ ರಾಜ್ ಬಂಧನವಾಗುತ್ತಿದ್ದಂತೆ ಕಾಂಗ್ರೆಸ್ ನ ಆಂತರಿಕ ಅಸಮಧಾನವನ್ನು ಇನ್ನಷ್ಟು ಕೆಣಕಲು ಬಿಜೆಪಿ ಟ್ವೀಟ್ ಅಸ್ತ್ರ ಬಳಸಿದ್ದು, ಕಾಂಗ್ರೆಸ್ ನಲ್ಲಿ ದಲಿತ ಶಾಸಕರ ಕೂಗಿಗೆ ಬೆಲೆ ಇಲ್ಲವೇ ಎಂದು ಬಿಜೆಪಿ ಪ್ರಶ್ನಿಸಿದೆ.

ಕೊನೆಗೂ ಡಿಜೆಹಳ್ಳಿ ಹಾಗೂ ಕೆಜಿಹಳ್ಳಿ ದೊಂಬಿ ಪ್ರಕರಣದ ಆರೋಪಿ ಹಾಗೂ ಮಾಜಿ ಮೇಯರ್, ಕಾಂಗ್ರೆಸ್ ನಾಯಕ ಸಂಪತ್ ರಾಜ್ ಬಂಧನವಾಗಿದೆ. ಸಂಪತ್ ರಾಜ್ ಬಂಧನವಾಗುತ್ತಿದ್ದಂತೆ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮುನ್ನಲೆಗೆ ಬಂದಿದ್ದು, ಇನ್ನಾದರೂ ಕೆಪಿಸಿಸಿ ಅಧ್ಯಕ್ಷರು ತನ್ನ ಬೆಂಬಲಕ್ಕೆ ಬಂದು ಸಂಪತ್ ರಾಜ್ ರನ್ನು ಪಕ್ಷದಿಂದ ಉಚ್ಛಾಟಿಸಬೇಕೆಂದು ಕೋರಿದ್ದಾರೆ.

ಅಖಂಡ ಶ್ರೀನಿವಾಸ್ ಮೂರ್ತಿ ಇಂತಹದೊಂದು ಹೇಳಿಕೆ ನೀಡುತ್ತಿದ್ದಂತೆ ಕಾಂಗ್ರೆಸ್ ನಾಯಕರನ್ನು ಕೆರಳಿಸುವ ಪ್ರಯತ್ನಕ್ಕೆ ಬಿಜೆಪಿ ಮುನ್ನುಡಿ ಬರೆದಿದ್ದು, ನಿಮ್ಮ ಪಕ್ಷದಲ್ಲಿ ದಲಿತ ಶಾಸಕನಿಗೆ ಬೆಲೆ ಇಲ್ಲವೇ ಎಂಬ ಗಂಭೀರ ಪ್ರಶ್ನೆ ಎತ್ತಿದೆ. ರಾಜ್ಯ ಬಿಜೆಪಿ ಟ್ವೀಟ್ ಮೂಲಕ ಶ್ರೀನಿವಾಸ್ ಮೂರ್ತಿ ಹೇಳಿಕೆ ಉಲ್ಲೇಖಿಸಿ ಈ ಪ್ರಶ್ನೆ ಕೇಳಿದ್ದು, ಡಿಕೆಶಿ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ತೀವ್ರ ಇರಿಸು-ಮುರಿಸು ಉಂಟು ಮಾಡಿದೆ. ‘
ಇಷ್ಟೇ ಅಲ್ಲ ಕಾಂಗ್ರೆಸ್ ಡಾ.ಬಿ.ಆರ್.ಅಂಬೇಡ್ಕರ್ ಕಾಲದಿಂದಲೂ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿರುವ ರಾಜ್ಯ ಬಿಜೆಪಿ, ಚುನಾವಣೆಯಲ್ಲಿ ದಲಿತ ವಿರೋಧಿ ನೀತಿ ಅನುಸರಿಸಿ ಕಾಂಗ್ರೆಸ್ ನ ದಲಿತ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಡಾ.ಜಿ.ಪರಮೇಶ್ವರ್ ಅವರನ್ನು ಸೋಲಿಸಲಾಗಿದೆ ಎಂಬ ಗಂಭೀರ ಆರೋಪ ಮಾಡಿದೆ.
ಇಷ್ಟೇ ಅಲ್ಲ ಕಾಂಗ್ರೆಸ್ ಡಾ.ಬಿ.ಆರ್.ಅಂಬೇಡ್ಕರ್ ಕಾಲದಿಂದಲೂ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿರುವ ರಾಜ್ಯ ಬಿಜೆಪಿ, ಚುನಾವಣೆಯಲ್ಲಿ ದಲಿತ ವಿರೋಧಿ ನೀತಿ ಅನುಸರಿಸಿ ಕಾಂಗ್ರೆಸ್ ನ ದಲಿತ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಡಾ.ಜಿ.ಪರಮೇಶ್ವರ್ ಅವರನ್ನು ಸೋಲಿಸಲಾಗಿದೆ ಎಂಬ ಗಂಭೀರ ಆರೋಪ ಮಾಡಿದೆ.

ಕಾಂಗ್ರೆಸ್ ನಲ್ಲಿ ದಲಿತ ನಾಯಕರನ್ನು ತುಳಿಯುವ ಕಾರ್ಯವನ್ನು ಮಾಜಿ ಸಿಎಂ ಸಿದ್ಧರಾಮಯ್ಯ ಯಶಸ್ವಿಯಾಗಿ ಮುಂದುವರೆಸಿದ್ದಾರೆ ಎಂದು ರಾಜ್ಯ ಬಿಜೆಪಿ ಆರೋಪಿಸಿದ್ದು, ಡಿಕೆಶಿಯವರನ್ನು ಕುರಿತು ಏನಾಗುತ್ತಿದೆ ಕಾಂಗ್ರೆಸ್ ಎಂದು ಪ್ರಶ್ನಿಸಿದೆ. ಅಲ್ಲದೇ ಬಿಜೆಪಿ ಈ ಟ್ವೀಟ್ ಗಳಲ್ಲಿ ಕಾಂಗ್ರೆಸ್ ಅಗೆನೆಸ್ಟ್ ದಲಿತ್ಸ್ ಎಂಬ ಹ್ಯಾಶ್ ಟ್ಯಾಗ್ ಕೂಡ ಬಳಸಿದೆ.

ಬಿಜೆಪಿ ಈ ಟ್ವೀಟ್ ವಾರ್ ಕಾಂಗ್ರೆಸ್ ನ ಆಂತರಿಕ ಅಸಮಧಾನವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಗಳಿದ್ದು, ಸಂಪತ್ ರಾಜ್ ಬಂಧನದ ಬಳಿಕವೂ ಅವರನ್ನು ಬೆಂಬಲಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ಪಾಳಯದ ವಿರುದ್ಧ ಕಾಂಗ್ರೆಸ್ ನಾಯಕರು ತಿರುಗಿಬೀಳುವ ಸಾಧ್ಯತೆ ಇದೆ.

ಇನ್ನು ಕೈ ಹಾಗೂ ಕಮಲ ಪಾಳಯದ ಈ ಟ್ವೀಟ್ ವಾರ್ ಕಂಡ ಜನರು ಚುನಾವಣೆಗಾಗಿ ಕಾಂಗ್ರೆಸ್ ಬಳಸುವ ದಲಿತ ಕಾರ್ಡ್ ನ್ನು ಈ ಭಾರಿ ಬಿಜೆಪಿಯೇ ಕಾಂಗ್ರೆಸ್ ಒಳಜಗಳಕ್ಕಾಗಿ ಬಳಸಿ ಮಜಾ ನೋಡುತ್ತಿದೆ ಎಂದು ಟೀಕಿಸಿದ್ದಾರೆ.