ಕೊರೋನಾ ಮೊದಲ ಅಲೆಯ ರೌದ್ರಾವತಾರದ ಬೆನ್ನಲ್ಲೇ ಎರಡನೇ ಅಲೆ ರೌದ್ರನರ್ತನ ನಡೆಸಿದೆ. ಹೀಗಾಗಿ ಕೊರೋನಾ ಜೊತೆಯಲ್ಲೇ ಬದುಕಬೇಕಾದ ಅನಿವಾರ್ಯತೆಗೆ ಒಗ್ಗಿದಂತಿರೋ ಜನ ಕೊರೋನಾ ನಿಯಮದ ಜೊತೆಗೆ ಮದುವೆಮಾಡಿ ಸೈ ಎನ್ನಿಸಿಕೊಂಡಿದ್ದಾರೆ.

ನಮ್ಮ ಮನೆಯ ಮದುವೆ ನಮ್ಮಿಷ್ಟ ಅನ್ನೋ ಕಾಲ ಈಗಿಲ್ಲ. ನಿಮ್ಮ ಮನೆಯ ಮದುವೆಯ ನೆಂಟರನ್ನು ಸರ್ಕಾರ ನಿರ್ಧರಿಸೋ ಕಾಲ ಬಂದಿದೆ. ಹೀಗಾಗಿ ನಿಯಮಗಳ ಅನುಸಾರ ಮದುವೆ ಮಾಡೋದು ಅನಿವಾರ್ಯ.ಹೀಗಾಗಿ ವಿಜಯಪುರ ಜಿಲ್ಲೆಯ ನಿಡಗುಂದಿಯ ಜೋಡಿಯೊಂದು ಕೊರೋನಾ ನಿಯಮಗಳಿಗೆ ಅನುಸಾರವಾಗಿ ಮದುವೆಯಾಗೋ ಮೂಲಕ ರಾಜ್ಯದ ಗಮನ ಸೆಳೆದಿದೆ.

ಅಂಬಿಕಾ ಹಾಗೂ ಪ್ರಶಾಂತ್ ಕೊರೋನಾ ನಿಯಮದಂತೆ ಹೊಸಬದುಕಿಗೆ ಕಾಲಿರಿಸಿದ್ದು, ಅಗ್ನಿಸಾಕ್ಷಿಯ ಬದಲು ಒಬ್ಬರಿಗೊಬ್ಬರ ಟೆಂಪರೇಚರ್ ಚೆಕ್ ಮಾಡಿ ದಾಖಲಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಹಾರದ ಬದಲು ಪರಸ್ಪರ ಮಾಸ್ಕ್ ತೊಡಿಸಿ ನವಜೀವನಕ್ಕೆ ಅಡಿ ಇಟ್ಟಿದ್ದಾರೆ.

ನಿಡಗುಂದಿ ಪಟ್ಟಣದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಸರ್ಕಾರದ ನಿಯಮಾವಳಿಯಂತೆ ನಡೆದ ಮದುವೆಯಲ್ಲಿ ಕುಟುಂಬದ ಸದಸ್ಯರು ಮಾತ್ರ ಪಾಲ್ಗೊಂಡಿದ್ದು ವಧು-ವರರಿಗೆ ಶುಭಕೋರಿದ್ದಾರೆ.
