ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ರಾಜ್ಯ ಸರ್ಕಾರ ಸ್ಪೆಶಲ್ ಗಿಫ್ಟ್ ವೊಂದನ್ನು ನೀಡಿದ್ದು, ದರ್ಶನ್ ಅವರನ್ನು ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ಈಗಾಗಲೇ ದರ್ಶನ್ ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಕವಾಗುತ್ತಾರೆ ಎಂಬ ಸಂಗತಿ ಬಯಲಾಗಿತ್ತು. ಈಗ ಈ ಮಾತನ್ನು ಅಧಿಕೃತಗೊಳಿಸಿರುವ ಸರ್ಕಾರ ದರ್ಶನ್ ನೇಮಕ ಆದೇಶವನ್ನು ಹೊರಡಿಸಿದೆ. ಕೃಷಿ ಸಚಿವ ಬಿ.ಸಿ.ಪಾಟೀಲ್ ಕೆಲದಿನಗಳ ಹಿಂದೆಯಷ್ಟೇ ದರ್ಶನ್ ಭೇಟಿ ಮಾಡಿ ಕೃಷಿ ಇಲಾಖೆಯ ರಾಯಭಾರಿಯಾಗುವಂತೆ ಮನವಿ ಮಾಡಿದ್ದರು.

ಸಿನಿಮಾನಟರಾಗಿ ಗುರುತಿಸಿಕೊಂಡು ನಟನೆಯಲ್ಲಿ ಬ್ಯುಸಿಯಿದ್ದರೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದಾ ಕೃಷಿ ಪಶುಸಾಕಾಣಿಕೆ, ಅರಣ್ಯದಲ್ಲಿ ಸಫಾರಿ, ಪ್ರಾಣಿಗಳ ವೀಕ್ಷಣೆ ಪೋಟೋಗ್ರಫಿಯಲ್ಲಿ ತೊಡಗಿಕೊಂಡಿರುತ್ತಾರೆ. ಅಲ್ಲದೇ ಮೈಸೂರಿನ ತಮ್ಮ ಫಾರ್ಮ್ ಹೌಸ್ ನಲ್ಲೂ ದರ್ಶನ್ ಪ್ರಾಣಿ,ಪಕ್ಷಿ,ಕೃಷಿಯಲ್ಲಿ ಸಮಯ ಕಳೆಯುತ್ತಾರೆ.

ಹೀಗಾಗಿ ಕೃಷಿ ಇಲಾಖೆಯ ಯೋಜನೆಗಳನ್ನು ಪ್ರಚುರಗೊಳಿಸುವ ನಿಟ್ಟಿನಲ್ಲಿ ದರ್ಶನ್ ರನ್ನು ರಾಯಭಾರಿಯಾಗಿ ನೇಮಿಸಿದೆ. ಕೃಷಿ ಸಚಿವ ಬಿ.ಸಿ.ಪಾಟೀಲ್ ಈಗಾಗಲೇ ದರ್ಶನ್ ಫಾರ್ಮ್ ಹೌಸ್ ಗೆ ಭೇಟಿ ನೀಡಿ ದರ್ಶನ್ ಜೊತೆ ಸಮಯ ಕಳೆದಿದ್ದರು.

ಇದೀಗ ದರ್ಶನ್ ಹುಟ್ಟುಹಬ್ಬಕ್ಕೆ ಒಂದು ದಿನ ಮೊದಲು ಸರ್ಕಾರದ ಅಧಿಕೃತ ಆದೇಶ ಹೊರಬಿದ್ದಿದೆ. ಇನ್ನೊಂದು ವಿಶೇಷ ಸಂಗತಿ ಎಂದರೇ ದರ್ಶನ್ ಕೃಷಿ ಇಲಾಖೆಯ ರಾಯಭಾರಿಯಾಗಿ ಯಾವುದೇ ಸಂಭಾವನೆ ಪಡೆಯದೇ ಕೆಲಸ ನಿರ್ವಹಿಸಲು ಒಪ್ಪಿದ್ದು, ರೈತರೊಂದಿಗೆ ಬೆರೆತು ಕಾರ್ಯನಿರ್ವಹಿಸಲಿದ್ದಾರೆ.