ಉಡುಪಿ : ಕೊರೊನಾ ವೈರಸ್ ಸೋಂಕಿನ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಹೊರ ಜಿಲ್ಲೆಗಳಿಂದ ಉಡುಪಿ ಜಿಲ್ಲೆಯೊಳಗೆ ಪ್ರವೇಶಿಸಲು ಯಾರಿಗೂ ಅವಕಾಶವಿಲ್ಲ. ಜಿಲ್ಲೆಯೊಳಗೆ ಪ್ರವೇಶಿಸಲು ಹೊರ ಜಿಲ್ಲೆಗಳಿಂದ ಪಾಸ್ ಪಡೆದು ಬರುತ್ತಿರುವುದು ಗಮನಕ್ಕೆ ಬಂದಿದ್ದು, ನಾಗರೀಕರ ಆರೋಗ್ಯದ ಹಿತದೃಷ್ಠಿಯಿಂದ ಹೊರ ಜಿಲ್ಲೆಗಳ ಪಾಸ್ ಗಳಿಗೆ ಅನುಮತಿ ನೀಡುವುದಿಲ್ಲಾ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಸ್ಪಷ್ಟಪಡಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಕೊರೋನಾ ನಿಯಂತ್ರಣದಲ್ಲಿದ್ದು, ಜಿಲ್ಲೆಯೊಳಗೆ ಕೊರೋನಾ ಕಂಡು ಬರುವ ಸಾಧ್ಯತೆ ತೀರಾ ಕಡಿಮೆ, ಹೊರ ಜಿಲ್ಲೆಯಿಂದ ಬರುವವರ ಮೂಲಕ ಕೊರೊನಾ ಹರಡುವ ಸಾಧ್ಯತೆಯಿದೆ. ಹೀಗಾಗಿ ಹೊರ ಜಿಲ್ಲೆಗಳ ಸಾರ್ವಜನಿಕರು ಜಿಲ್ಲೆಯೊಳಗೆ ಪ್ರವೇಶಿಸಲು ಯಾವುದೇ ಕಾರಣಕ್ಕೂ ಚೆಕ್ಪೋಸ್ಟ್ ಗಳಲ್ಲಿ ಅನುಮತಿ ನೀಡುವುದಿಲ್ಲ ಹಾಗೂ ಹೊರ ಜಿಲ್ಲೆಗಳ ಪಾಸ್ ಗಳನ್ನು ಮಾನ್ಯ ಮಾಡುವುದಿಲ್ಲ.

ಒಂದು ವೇಳೆ ಯಾರಾದರೂ ಅಕ್ರಮವಾಗಿ ಜಿಲ್ಲೆಯನ್ನು ಪ್ರವೇಶ ಮಾಡಿದಲ್ಲಿ, ಅವರನ್ನು 14 ದಿನಗಳ ಸರ್ಕಾರಿ ಕ್ವಾರಂಟೈನ್ ಗೆ ಒಳಪಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಒಂದೊಮ್ಮೆ ಅತ್ಯಂತ ಗಂಭೀರ ಮತ್ತು ಮತ್ತು ವೈದ್ಯಕೀಯ ಚಿಕಿತ್ಸೆಗೆ ಮಾತ್ರ ಜಿಲ್ಲೆಯ ಪ್ರವೇಶಕ್ಕೆ ಅನುಮತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.