ಸದಾ ಪ್ರಾಣಿಗಳಿಗಾಗಿ ಮಿಡಿಯುವ ಸ್ಯಾಂಡಲ್ ವುಡ್ ಸ್ಟಾರ್ ದರ್ಶನ್ ಕೊರೋನಾ ಸಂಕಷ್ಟದಲ್ಲಿ ಸಮಸ್ಯೆಗಿಡಾಗಿರುವ ಮೃಗಾಲಯಗಳ ಬಗ್ಗೆ ಕಾಳಜಿವಹಿಸಿದ್ದರು. ಅಷ್ಟೇ ಅಲ್ಲ ಆರ್ಥಿಕ ಸಂಕಷ್ಟದಲ್ಲಿರುವ ಮೃಗಾಲಯಗಳಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದು, ಈ ಮನವಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಡಿ.ಬಾಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದಾ ಪ್ರಾಣಿ-ಪಕ್ಷಿಗಳನ್ನು ಸಾಕೋದು, ವೀಕ್ಷಿಸೋದು ಸೇರಿದಂತೆ ಅವುಗಳ ರಕ್ಷಣೆಗಾಗಿ ಮಿಡಿಯುತ್ತಾರೆ. ಕೊರೋನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ರಾಜ್ಯದ 9 ಮೃಗಾಲಯಗಳು ಆದಾಯದ ಕೊರತೆಯಿಂದ ಸಮಸ್ಯೆಗೀಡಾಗಿದ್ದವು. ಇದನ್ನು ಗಮನಿಸಿದ ದರ್ಶನ್ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ನೆರವಾಗಿ ಎಂದು ಅಭಿಮಾನಿಗಳಿಗೆ ಹಾಗೂ ಜನರಿಗೆ ಮನವಿ ಮಾಡಿದ್ದರು.
ರಾಜ್ಯದಲ್ಲಿ 9 ಮೃಗಾಲಯಗಳಿದ್ದು, ಒಟ್ಟು 5 ಸಾವಿರಕ್ಕೂ ಅಧಿಕ ಪ್ರಾಣಿಗಳಿವೆ. ಈ ಪೈಕಿ 1 ಸಾವಿರ ರೂಪಾಯಿಯಿಂದ 1.75 ಲಕ್ಷ ರೂಪಾಯಿವರೆಗೆ ಪಾವತಿಸಿ ಪ್ರಾಣಿಗಳನ್ನು ದತ್ತು ಪಡೆಯಲು ಅವಕಾಶವಿದೆ. ಪ್ರಾಣಿಗಳನ್ನು ದತ್ತು ಪಡೆದು ಸಂಕಷ್ಟದಲ್ಲಿರುವ ಮೃಗಾಲಯಗಳಿಗೆ ನೆರವಾಗಿ. ನೀವು ಪ್ರಾಣಿಗಳನ್ನು ದತ್ತು ಪಡೆಯುವುದರಿಂದ ಮೃಗಾಲಯದ ಸಿಬ್ಬಂದಿ ಸಂಬಳ ಸೇರಿದಂತೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ದರ್ಶನ್ ಹೇಳಿದ್ದರು. ‘
ದರ್ಶನ್ ಕರೆಕೊಟ್ಟ ಎರಡೇ ದಿನದಲ್ಲಿ ರಾಜ್ಯದ ಒಟ್ಟು 9 ಮೃಗಾಲಯಗಳಲ್ಲಿ ನೂರಾರು ಪ್ರಾಣಿಗಳನ್ನು ದತ್ತು ಪಡೆಯುವ ಪ್ರಕ್ರಿಯೆ ನಡೆದಿದ್ದು, ಒಟ್ಟು 24 ಲಕ್ಷದ 75 ಸಾವಿರ ರೂಪಾಯಿ ಸಂಗ್ರಹವಾಗಿದೆ ಎಂದು ಮೃಗಾಲಯಗಳ ಪ್ರಾಧಿಕಾರ ಹೇಳಿದೆ.

ಬೆಳಗಾವಿ 36 ಸಾವಿರ, ಗದಗ 38 ಸಾವಿರ,ಕಲಬುರ್ಗಿ 48 ಸಾವಿರ,ದಾವಣೆಗೆರೆ 64,ಚಿತ್ರದುರ್ಗ 30 ಸಾವಿರ,ಬನ್ನೇರುಘಟ್ಟ 7.3 ಲಕ್ಷ ,ಶಿವಮೊಗ್ಗ 1 ಲಕ್ಷ,ಮೈಸೂರು 13.6 ಲಕ್ಷ ರೂಪಾಯಿ ಸಂಗ್ರಹವಾಗಿದೆ.

ಇನ್ನು ದರ್ಶನ್ ಮನವಿಗೆ ಚಿತ್ರರಂಗವೂ ಸ್ಪಂದಿಸಿದ್ದು, ಮೈಸೂರು ಝೂನಲ್ಲಿ ದರ್ಶನ್ ಹೆಸರಿನ ಸಿಂಹವನ್ನು ನಿರ್ಮಾಪಕಿ ಶೈಲಜಾ ನಾಗ್ ದಂಪತಿ ದತ್ತು ಪಡೆದಿದ್ದಾರೆ.