ತಮಿಳುನಾಡಿನ ಚುನಾವಣಾ ಕಣ ರಂಗೇರುತ್ತಿದ್ದು, ಗೆದ್ದು ಅಧಿಕಾರ ಹಿಡಿಯುವ ಕನಸಿನಲ್ಲಿರೋ ದ್ರಾವಿಡ್ ಮುನ್ನೇತ್ರ ಕಳಗಂ ತನ್ನ ಚುನಾವಣಾ ಪ್ರಣಾಳಿಕೆ ಪ್ರಕಟಿಸಿದ್ದು, ತೈಲ ಬೆಲೆ ಇಳಿಸುವ ಭರವಸೆಯೊಂದಿಗೆ ಜನರನ್ನು ಸೆಳೆಯುವ ಸರ್ಕಸ್ ನಡೆಸಿದೆ.

ಎಂ.ಕೆ.ಸ್ಟಾಲಿನ್ ಸುದ್ದಿಗೋಷ್ಠಿಯಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದು, ಈ ಚುನಾವಣೆಯಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದ್ರೇ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯನ್ನು ಕ್ರಮವಾಗಿ 5 ಹಾಗೂ 4 ರೂಪಾಯಿ ಕಡಿಮೆಗೊಳಿಸುವುದಾಗಿ ಹೇಳಿದ್ದಾರೆ.

ಇದಲ್ಲದೇ ಆಕಾಶಕ್ಕೆ ಬೆಲೆ ಏರಿಕೆ ಕಂಡಿರುವ ಎಲ್ಪಿಜಿ ಸಿಲೆಂಡರ್ ದರವನ್ನು 100 ರೂಪಾಯಿ ಕಡಿತಗೊಳಿಸುವುದಾಗಿ ಹಾಗೂ ಉದ್ಯೋಗಸ್ಥ ಮಹಿಳೆಯರ ಹೆರಿಗೆ ರಜವನ್ನು 1 ವರ್ಷಕ್ಕೆ ವಿಸ್ತರಿಸುವುದಾಗಿ ಘೋಷಿಸಿದೆ.

ತಮಿಳುನಾಡಿನ ಚುನಾವಣೆಯಲ್ಲಿ ಉಚಿತವಾದ ಯೋಜನೆಗಳನ್ನು ಘೋಷಿಸುವುದು ವಾಡಿಕೆ. ಡಿಎಂಕೆ ಕೂಡ ಹಲವು ಉಚಿತ ಯೋಜನೆಗಳನ್ನು ಘೋಷಿಸಿದ್ದು, ಪ್ರಣಾಳಿಕೆ ಒಟ್ಟು 500 ಬೇಡಿಕೆಗಳನ್ನು ಒಳಗೊಂಡಿದೆ.
ಹಾಲಿನ ಬೆಲೆಯಲ್ಲಿ ಲೀಟರ್ ಗೆ 3 ರೂಪಾಯಿ ದರ ಕಡಿತ
ಹಿಂದೂ ದೇಗುಲಗಳ ಜೀರ್ಣೋದ್ಧಾರಕ್ಕೆ 1 ಸಾವಿರ ಕೋಟಿ ಮೀಸಲು
ಪಡಿತರ ಧಾನ್ಯ ವಿತರಣೆಯಲ್ಲಿ 1 ಕೆಜಿ ಹೆಚ್ಚುವರಿ ಸಕ್ಕರೆ ವಿತರಣೆ
ರೈತರಿಗೆ ಪಂಪ್ ಸೆಟ್ ಖರೀದಿಸಲು 10 ಸಾವಿರ ರೂಪಾಯಿ ಸಹಾಯಧನ
8 ನೇ ತರಗತಿಯವರೆಗೆ ತಮಿಳು ಭಾಷೆ ಅಧ್ಯಯನ ಕಡ್ಡಾಯ
ತಮಿಳುನಾಡಿನಲ್ಲಿ 500 ರಿಯಾಯತಿ ದರದ ಆಹಾರ ಮಳಿಗೆ
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಇಂಟರನೆಟ್ ಹೊಂದಿದ ಟ್ಯಾಬ್ ವಿತರಣೆ
ತಿರುಚ್ಚಿ,ಮಧುರೈ,ಸೇಲಂ ಸೇರಿದಂತೆ ಹಲವು ನಗರದಲ್ಲಿ ಮೆಟ್ರೋ ರೈಲು

ಸೇರಿದಂತೆ ಹಲವು ಯೋಜನೆಗಳನ್ನು ಡಿಎಂಕೆ ಘೋಷಿಸಿದೆ. ಕಾಂಗ್ರೆಸ್ ಜೊತೆ ಕೈ ಜೋಡಿಸಿರುವ ಡಿಎಂಕೆ 25 ಕ್ಷೇತ್ರಗಳನ್ನು ಕಾಂಗ್ರೆಸ್ ಗೆ ಬಿಟ್ಟುಕೊಟ್ಟಿದ್ದು, ಚುನಾವಣೆ ಗೆದ್ದು ಅಧಿಕಾರಕ್ಕೆ ಬರಲು ಸರ್ಕಸ್ ನಡೆಸಿದೆ.