ಮಕ್ಕಳ್ ನಿಧೀಮಯಂ ಪಕ್ಷದ ಮೂಲಕ ತಮಿಳುನಾಡಿನ ರಾಜಕೀಯದಲ್ಲಿ ಹೊಸ ದಿಶೆ ತರಲು ಪ್ರಯತ್ನಿಸುತ್ತಿರುವ ಬಹುಭಾಷಾ ನಟ ಕಮಲ್ ಹಾಸನ್ ಚುನಾವಣೆಗೆ ಸಂಪೂರ್ಣ ಸಜ್ಜಾಗಿದ್ದಾರೆ. ಕೊರೋನಾ ಲಸಿಕೆ ಪಡೆದು ಫುಲಟೈಂ ರಾಜಕೀಯ ಆರಂಭಿಸುವ ಮುನ್ಸೂಚನೆ ನೀಡಿದ್ದ ಕಮಲ್ ಹಾಸನ್ ಮಾಜಿ ಸಿಎಂ ಕ್ಷೇತ್ರದಿಂದ ಕಣಕ್ಕಿಳಿಯೋದು ಬಹುತೇಕ ಖಚಿತ ಎನ್ನಲಾಗಿದೆ.

ರಾಜ್ಯದ 234 ವಿಧಾನಸಭಾ ಕ್ಷೇತ್ರದಿಂದಲೂ ಮಕ್ಕಳ್ ನಿಧಿಮಯಂ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸೋದಾಗಿ ಕಮಲ್ ಹಾಸನ್ ಈ ಹಿಂದೆಯೇ ಹೇಳಿದ್ದರು.ಇದೀಗ ತಾವು ತಮಿಳುನಾಡಿನ ರಾಜಧಾನಿ ಚೈನೈನ ಅಳಂದೂರು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

ಈ ಅಳಂದೂರು ಕ್ಷೇತ್ರದಲ್ಲಿ 1967 ರಿಂದ 1976 ರವರೆಗೆ ಖ್ಯಾತ ನಟ ಎಂಜಿಆರ್ ಸ್ಪರ್ಧಿಸಿ ಗೆದ್ದು ಮುಖ್ಯಮಂತ್ರಿಯಾಗಿದ್ದರು. ಇದೇ ಕಾರಣಕ್ಕೆ ಎಂಜಿಆರ್ ಅಭಿಮಾನಿಯಾಗಿರುವ ಕಮಲಹಾಸನ್ ಈ ಕ್ಷೇತ್ರವನ್ನು ಆಯ್ಕೆಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಅಳಂದೂರು ಕ್ಷೇತ್ರದ ಜೊತೆಗೆ ಕೊಯಂಬತ್ತೂರು ಕ್ಷೇತ್ರದಿಂದಲೂ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಕಮಲಹಾಸನ್ ಮುಂದಾಗಿದ್ದಾರೆ. ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿರುವ ಹಾಸನ್, ಪಕ್ಷ ಅಧಿಕಾರಕ್ಕೆ ಬಂದ್ರೆ ಮಹಿಳೆಯರಿಗೆ ಮನೆಗೆಲಸಕ್ಕಾಗಿ ಸಂಬಳ,ಸರ್ಕಾರಿ ಉದ್ಯೋಗದಲ್ಲಿ ಶೇಕಡಾ 50 ರಷ್ಟು ಮೀಸಲಾತಿ ನೀಡುವುದಾಗಿ ಘೋಷಿಸಿದ್ದಾರೆ.

ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ 37 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಮಕ್ಕಳ್ ನಿಧಿಮಯಂ ಯಾವುದೇ ಕ್ಷೇತ್ರವನ್ನು ಗೆದ್ದಿರಲಿಲ್ಲ. ಆದರೆ ಒಟ್ಟು ಮತದಾನದ ಶೇಕಡಾ 3.2 ರಷ್ಟು ಮತಗಳನ್ನು ಪಡೆದಿತ್ತು. ಹೀಗಾಗಿ ಈ ಭಾರಿ ಸಾಕಷ್ಟು ಪೂರ್ವಸಿದ್ಧತೆಯೊಂದಿಗೆ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧಿಸಲು ಸಿದ್ಧವಾಗಿದೆ.

ಮಾರ್ಚ್ 12 ರಂದು ನಾಮಪತ್ರ ಸಲ್ಲಿಕೆ ನಡೆಯಲಿದ್ದು, ಏಪ್ರಿಲ್ 2 ರಂದು ಮತದಾನ ಹಾಗೂ ಮೇ 2 ರಂದು ಮತ ಎಣಿಕೆ ನಡೆಯಲಿದೆ.